ನೋವು ನಿವೇದನೆ-ನೆನಪಾದರೆ ಬಂದು ಬಿಡು ಪ್ರಿಯೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೋವು ನಿವೇದನೆ
____

ಎಂತಹ ಪಾಶರೂಪವೇ ನಿನ್ನದು
ನನ್ನೊಲುಮೆಯ ಗೆಳತಿ
ನಿಷ್ಕಾಮ ಮುಗ್ದತೆಯೊಳು ತೂರಿ
ಅಂತರಾಳದಿ ಬೆಳದಿಂಗಳರಳಿಸಿ
ಸುಮ ವನಗಳಲಿ ಸುಳಿದಾಡಿದೆ

- Advertisement - 

ನಗ್ನ ಮನಸಿನಾಳಕಿಳಿದು
ರಂಗು ತರಂಗಗಳ ಚಿಮ್ಮಿಸಿ
ಸುಖೋಪಾಸನೆಗೆ ಕರೆದೊಯ್ದು
ಪೂರ್ಣ ಪೌರ್ಣಮಿಗೆ ನಾಂದಿಯಾದೆ
ಅರಿಯದ ಬಯಕೆಗಳ ಕರೆಸಿ

ಚುಂಬಿಸಿ ಆಲಂಗಿಸಿ ಮಧುಚಂದ್ರವೇರಿದೆ
ಬದುಕ ಬಾಳ ಬಂಡಿಗೆ
ನೊಗ ಕಟ್ಟುವ ಹುಸಿ ಇಟ್ಟು
ಪ್ರೇಮ ಸಿಂಹಾಸನವೇರಿಸಿ
ಭಾವನೆಗೆ ಬಣ್ಣಗಳ ಸೋಗು ಹಾಸಿದೆ

- Advertisement - 

ಸ್ಪೂರ್ತಿಯ ಚಿಲುಮೆ ಬಾಡದಂತೆ
ಮಕರಂದ ಕಂಡ ದುಂಬಿ
ಹೂ ಮುತ್ತಲು ದಾವಿಸಿದಂತೆ 
ಚೆಲುವ ರಾಶಿ ನನಗಾಗಿಯೇ ಬಂದಂತೆ
ಎಂತಹ ಬೆಡಗು ಬಿನ್ನಾಣ

ಘಮ ಸೊಬಗ ಚಿತ್ತಾರ ನಿನ್ನವು
ಪ್ರೀತಿಯೊಲುಮೆಯ ಸಂಗಾತಿಯೇ
ಅದೇಕೆ ಒಮ್ಮೆಲೇ ಬಿರುಗಾಳಿಯಂತೆ
ನನ್ನೆದುರು ಬೀಸಿ ನಿಂತೆ
ಹೃದಯ ಕಂಪಿಸಿ ಕೇಳುತಿದೆ

ಯಾವ ಕೊರತೆ ನಮ್ಮೀರ್ವರೊಳಗೆ
ಅದೇಕೆ ನನ್ನ ಹೂದೂಟಕೆ ಮುಳ್ಳಾದೆ 
ಬಹು ದೂರದ ಬದುಕಿಗೂ
ಬಚ್ಚಿಟ್ಟುಕೊಳ್ಳುವ ಸ್ನೇಹವಿದು

ನೆನಪಾದರೆ ಬಂದು ಬಿಡು ಪ್ರಿಯೆ
ನಿನಗಾಗಿ ಕಾಯುತಿರುವೆ
ಮತ್ತೆ ಸ್ವೇಚ್ಛೆಯಾಗಿ ಹಾರೋಣ
ಬಾನ ಬಯಲ ಅನಂತದೊಳಗೆ
ಕವಿತೆ: ಕುಮಾರ್ ಬಡಪ್ಪ, ಚಿತ್ರದುರ್ಗ.

Share This Article
error: Content is protected !!
";