ಚಂದ್ರವಳ್ಳಿ ನ್ಯೂಸ್,ದೊಡ್ಡಬಳ್ಳಾಪುರ :
ಮಾರ್ಚ್ 1 ರ ಭಾನುವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ರಸ್ತೆಯ ನಂದಿ ಮೋರಿ ಸಮೀಪ ಮುದ್ದೇನಾಯಕನಪಾಳ್ಯದಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಕಲಾ ಭವನವನ್ನು ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದ ಸ್ವಾಮೀಜಿ ಯವರ ದಿವ್ಯ ಸನಿಧ್ಯದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ ಹಾಗೂ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ ರಾ ಗೋವಿಂದು ಉದ್ಘಾಟನೆ ಮಾಡಲಿದ್ದಾರೆ ಎಂದರು.
ರಂಗಭೂಮಿ ಕಲಾವಿದರಿಗೆ ಪ್ರತ್ಯೇಕ ಕಲಾಭವನ ಬೇಕೆಂಬ ಹಲವು ವರ್ಷಗಳ ಬೇಡಿಕೆ ಇಂದು ಈಡೇರಿದೆ ಈ ಭವನವು ಮತ್ತಷ್ಟು ಕಲಾವಿದರ ಅಭಿವೃದ್ಧಿಗೆ ಕಾರಣವಾಗಲಿದೆ. ಮಾರ್ಚ್ 1ರ ಬೆಳ್ಳಿಗೆ 10:30ಕ್ಕೆ ಹಲವು ಕಲಾ ತಂಡಗಳ ಜೊತೆಗೂಡಿ ಗಣ್ಯರೊಂದಿಗೆ ಮೆರವಣಿಗೆ ಮೂಲಕ ಕಲಾ ಭವನ ತಲುಪುವ ಯೋಜನೆ ರೂಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಹೆಚ್ ಎಂ ರೇವಣ್ಣ, ಚಿಕ್ಕಬಳ್ಳಾಪುರ ಲೋಕಸಭಾ ಸಂಸಾದರಾದ ಡಾ. ಕೆ ಸುಧಾಕರ್ ಹಾಗೂ ತಾಲ್ಲೂಕಿನ ಜನಪ್ರಿಯ ಶಾಸಕರಾದ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

