ಸಪ್ತ ಸಾಗರದಾಚೆ ಕನ್ನಡ ನಾಡಿನ ಒಕ್ಕಲಿಗ ಸಂಸ್ಕೃತಿ, ಪರಂಪರೆಯ ಅದ್ಭುತ ಪ್ರದರ್ಶನ
ಚಂದ್ರವಳ್ಳಿ ನ್ಯೂಸ್, ಸ್ಯಾನ್ಹೋಸೆ, ಅಮೆರಿಕ:
ಅಮೆರಿಕದ ಸ್ಯಾನ್ಹೋಸೆ ನಗರದ ಮೆಕನರಿ ಕನ್ವೆನ್ಷನ್ ಸೆಂಟರ್ನಲ್ಲಿ ಮೂರು ದಿನಗಳ 18ನೇ ವಿಶ್ವ ಒಕ್ಕಲಿಗ ಮಹಾಸಮ್ಮೇಳನಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರಕಿತು.
ಸಪ್ತ ಸಾಗರದಾಚೆ ಕನ್ನಡ ಮಣ್ಣಿನ ಮಕ್ಕಳ ಸಾಂಸ್ಕೃತಿಕ ಮಹಾಸಮ್ಮೇಳನವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ದಿವ್ಯ ಆಶೀರ್ವಾದದೊಂದಿಗೆ ಉದ್ಘಾಟಿಸಿದರು.
ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಹಬ್ಬವಾಗಿ ರೂಪುಗೊಂಡಿರುವ ಈ ಕಾರ್ಯಕ್ರಮವು ವಿಶ್ವದ ವಿವಿಧೆಡೆ ನೆಲೆಸಿರುವ ಒಕ್ಕಲಿಗ ಸಮುದಾಯದ ಬಂಧುಗಳನ್ನು ಒಂದೆಡೆ ಸೇರಿಸಿರುವ ಅಪೂರ್ವ ಸನ್ನಿವೇಶವಾಗಿದೆ.
ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ ನಾರಾಯಣ, ಸಂಸದ ಡಾ.ಕೆ.ಸುಧಾಕರ್, ಶಾಸಕರಾದ ಸಿ.ಎಸ್.ಪುಟ್ಟರಾಜು, ಎಸ್.ಟಿ. ಸೋಮಶೇಖರ್, ಸತೀಶ್ ರೆಡ್ಡಿ, ಗುಬ್ಬಿ ಶ್ರೀನಿವಾಸ್ ಹಾಗೂ ಒಕ್ಕಲಿಗ ಸಮುದಾಯದ ಮುಖಂಡ ಸಚ್ಚಿದಾನಂದ, ಒಕ್ಕಲಿಗ ಪರಿಷತ್ ಆಫ್ ಅಮೆರಿಕ ಅಧ್ಯಕ್ಷ ಧನಂಜಯ್ ಕೆಂಗಯ್ಯ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ಸಮ್ಮೇಳನಕ್ಕೆ ಕಳೆ ತಂದಿದ್ದಾರೆ.
ಸಾಂಸ್ಕೃತಿಕ ವೈಭವ-
ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ ಸಮುದಾಯದ ಸದಸ್ಯರು, ವೈವಿಧ್ಯಮಯ ಸಂಸ್ಕೃತಿ, ಪರಂಪರೆ, ಉತ್ಸವವನ್ನು ಇಲ್ಲಿ ಜಗತ್ತಿಗೆ ತೋರಿಸಿದ್ದಾರೆ.
ಒಕ್ಕಲಿಗರ ಸಂಸ್ಕೃತಿಯ ಬಣ್ಣನೆ, ಭಕ್ತಿಯ ಮೆರವಣಿಗೆ, ಸುಗ್ಗಿ ಕುಣಿತ, ದೇವರ ಉತ್ಸವ, ಕೋಲಾಟ, ವೇಷ ಭೂಷಣಗಳ ಪ್ರದರ್ಶನಗಳು ಸ್ಯಾನ್ಹೋಸೆ ರಸ್ತೆಗಳಲ್ಲಿ ಜಾತ್ರಾ ಉತ್ಸವದ ಅನುಭವವನ್ನು ನೀಡಿದವು.
ಸಾಂಸ್ಕೃತಿಕ, ಕಲಾ ಪ್ರದರ್ಶನಗಳ ಜೊತೆಗೆ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ವಿಶಿಷ್ಟ ಭೋಜನ ವ್ಯವಸ್ಥೆ, ಸಮುದಾಯ ವಧು-ವರರ ಪರಿಚಯ ವೇದಿಕೆ, ಉದ್ಯಮಿಗಳಿಗೆ ‘ಬಿಸಿನೆಸ್ ಫೋರಂ’, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳು, ಮಹಿಳಾ ಚಟುವಟಿಕೆಗಳು ಸೇರಿದಂತೆ ಹಲವು ವಿಷಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಒಕ್ಕಲಿಗ ಸಮುದಾಯದ ಬಲವರ್ಧನೆಗೆ ಪರಸ್ಪರ ಸಹಕಾರಕ್ಕೆ ನಾಂದಿಯಾಗಿವೆ.
ಅಮೆರಿಕದ ವಿವಿಧ ರಾಜ್ಯಗಳು ಹಾಗೂ ಇತರ ದೇಶಗಳಿಂದ ಸಾವಿರಾರು ಕುಟುಂಬಗಳು ಭಾಗವಹಿಸಿದ್ದ ಈ ಸಮ್ಮೇಳನ, ವಿದೇಶಿ ನೆಲದಲ್ಲಿ ಸಮುದಾಯದ ಹೆಗ್ಗಳಿಕೆಯನ್ನು ಅನಾವರಣಗೊಳಿಸಿದೆ. “ಒಕ್ಕಲಿಗ ಸಮಾಜ – ಜಗತ್ತಿನ ಮೂಲೆಮೂಲೆಗೂ ತಲುಪಿದೆ” ಎಂಬುದನ್ನು ಸಮರ್ಥವಾಗಿ ಸಾರುತ್ತಿದೆ.
ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಕ್ಕಲುತನ ಮಾಡುವ ಒಕ್ಕಲಿಗರು ಇಂದು ತಮ್ಮ ಜ್ಞಾನ, ಸ್ವಸಾಮರ್ಥ್ಯದಿಂದ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತಮ್ಮ ಜ್ಞಾನ ಭಂಡಾರದಿಂದಲೇ ಅಮೆರಿಕ, ಯುರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ನೆಲೆಸಿದ್ದಾರೆ. ತಂತ್ರಜ್ಞಾನ ಹುದ್ದೆಗಳು, ಉದ್ಯಮ, ವ್ಯವಹಾರ ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗರು ನೆಲೆಸಿರುವ ದೇಶಕ್ಕೆ ಮತ್ತು ತಾಯ್ನಾಡು ಭಾರತಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದಾರೆ. ತಮ್ಮ ಊರಿನಿಂದ ಸಾವಿರಾರು ಕಿ.ಮೀ ದೂರದ ಊರಿಗೆ ಬಂದಿದ್ದರೂ ಸಮುದಾಯ ಮತ್ತು ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಗೌರವಯನ್ನು ಉಳಿಸಿ ಬೆಳೆಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಸ್ವಾಮೀಜಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಇದು ಸಾಮಾನ್ಯ ಸಮ್ಮೇಳನವಲ್ಲ. ಸಮುದಾಯ ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸಿ ಅಭಿವೃದ್ಧಿಗೆ ಕೊಡುಗೆ ನೀಡುವ ವಿಶೇಷ ಸಂದರ್ಭವಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ ಸಂಸ್ಕೃತಿ, ಕಲೆ, ಪರಂಪರೆಯ ಪ್ರದರ್ಶನದ ಜೊತೆಗೆ ವ್ಯಾಪಾರ ಉದ್ಯಮ ಸ್ಥಾಪನೆ, ವಿಸ್ತರಣೆ, ಸ್ಟಾರ್ಟಪ್ ಐಡಿಯಾಗಳು, ನೆಟ್ವರ್ಕಿಂಗ್, ಅಮೆರಿಕದಲ್ಲಿರುವ ಹೊಸ ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಣಲು ಈ ಸಮ್ಮೇಳನ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಅಮೆರಿಕದಲ್ಲಿ ನೆಲೆಸಿರುವವರು ಒಕ್ಕಲಿಗರು, ಕರ್ನಾಟಕ ಸೇರಿದಂತೆ ಜಗತ್ತಿನ ನಾನಾ ಭಾಗಗಳಿಂದ ಆಗಮಿಸಿರುವವರು ಇದರ ಸಂಪೂರ್ಣ ಪ್ರಯೋಜನ ಪಡೆದು ಮತ್ತಷ್ಟು ಅಭಿವೃದ್ಧಿ ಕಾಣುವ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಈ ಸಮ್ಮೇಳನದಲ್ಲಿ ಭಾಗವಹಿಸಿ ನನಗೆ ಅತ್ಯಂತ ಸಂತೋಷವಾಯಿತು. ಅಮೆರಿಕದಲ್ಲಿ ಒಕ್ಕಲಿಗ ಸಮುದಾಯದವರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿ ನಮ್ಮ ಸಂಸ್ಕೃತಿ, ಕಲೆ, ಪರಂಪರೆಯ ಪ್ರದರ್ಶನದ ಜೊತೆಗೆ ಉದ್ಯಮ ಅವಕಾಶಗಳು, ಬೆಳವಣಿಗೆ ಕುರಿತು ಚರ್ಚಿಸುವುದು ನಿಜಕ್ಕೂ ಶ್ಲಾಘನೀಯ. ಯಾವುದೇ ಸಮುದಾಯವಾಗಲಿ ಒಗ್ಗಟ್ಟಿನಿಂದ ಯಾವ ರೀತಿ ಅಭಿವೃದ್ಧಿ ಕಾಣಬಹುದು ಎನ್ನುವುದಕ್ಕೆ ಈ ಸಮ್ಮೇಳನ ಸಾಕ್ಷಿಯಾಗಿದೆ ಎಂದು ಹೇಳಿದರು.
ವಿಶ್ವ ಒಕ್ಕಲಿಗ ಪರಿಷತ್ ಆಫ್ ಅಮೆರಿಕದ ಅಧ್ಯಕ್ಷ ಧನಂಜಯ್ ಮಾತನಾಡಿ ಅಮೆರಿಕದಲ್ಲಿ ಒಕ್ಕಲಿಗರ ಸಮ್ಮೇಳನ ಆಯೋಜನೆಯೇ ಒಂದು ಹೆಮ್ಮೆಯ ಸಂಗತಿ. ಮೂಲತಃ ಕೃಷಿಕರಾಗಿರುವ ಒಕ್ಕಲಿಗ ಸಮುದಾಯದವರು ಇಂದು ಜಗತ್ತಿನ ಮೂಲೆ ಮೂಲೆಯಲ್ಲಿದ್ದಾರೆ ಎಂದು ತಿಳಿಸಿದರು.
ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗರು ಒಂದೆಡೆ ಸೇರುವುದರಿಂದ ಬೆಳವಣಿಗೆಗೆ ಇನ್ನಷ್ಟು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಸಮ್ಮೇಳನವನ್ನು ಮತ್ತಷ್ಟು ವಿಸ್ತಾರಗೊಳಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.