ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಹಿತ್ಯ ಓದುವವನ ಮನಸ್ಸು ಅರಳಿಸದಿದ್ದರೆ, ಒಳ್ಳೆಯ ಭಾವನೆ ಬೆಳೆಸದಿದ್ದರೆ, ಜನ ಪರಸ್ಪರ ಪ್ರೀತಿಸದಿದ್ದರೆ ಅಂತಹ ಸಾಹಿತ್ಯದಿಂದ ಏನು ಪ್ರಯೋಜನ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಉದ್ಘಾಟನೆ ಹಾಗೂ ವರಕವಿ ದ.ರಾ.ಬೇಂದ್ರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯದಿಂದ ಗಲಭೆಯಾದರೆ ಏನು ಅರ್ಥ. ಇತ್ತೀಚಿನ ದಿನಗಳಲ್ಲಿ ಜನರ ಮನಸ್ಸು ಛಿದ್ರಗೊಳಿಸುವ ವಿದ್ವಂಸಕ ಸಾಹಿತ್ಯ ಬರೆಯುವವರ ಸಂಖ್ಯೆ ಹೆಚ್ಚಾಗಿದೆ.
ಸರಿಯಾಗಿದ್ದರೂ, ಹುಳಿ ಹಿಂಡುವ, ಎಲ್ಲರೂ ಸಕಾರಾತ್ಮಕವಾಗಿದ್ದಾಗ ನಕಾರಾತ್ಮಕವಾಗಿ ಮಾತನಾಡಿ ವಿಜೃಂಭಿಸುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಹೇಳಿದರು.
ನಾವು ಹುಟ್ಟಿ ಬೆಳೆದ ದೇಶದ ಪರವಾಗಿ ಆಲೋಚನೆ ಮಾಡುವ ಸಾಹಿತ್ಯ ಬೇಕು. ಸಾಕಷ್ಟು ಜನರಿಗೆ ಸಾಹಿತ್ಯದಲ್ಲಿ ಏನನ್ನು ಓದಬೇಕು. ಏನನ್ನು ಅರ್ಥೈಸಿಕೊಳ್ಳಬೇಕು ಎನ್ನುವುದೇ ಸಮಸ್ಯೆ. ಈ ನಿಟ್ಟಿನಲ್ಲಿ ಅಭಾಸಪ ಸಮಾಜಕ್ಕೆ ಉತ್ತಮ ಸಾಹಿತ್ಯ ಕೊಡುವ ದೃಷ್ಟಿ ಹೊಂದಿದೆ ಎಂದು ವಿವರಿಸಿದರು.
ಸಾಹಿತಿ ತಾನು ಬದುಕಿದ ಹಾಗೆ ಬರೆಯಬೇಕೊ ಅಥವಾ ತನಗಿಷ್ಟವಾದ ವಿಷಯ ಬರೆಯಬಹುದೊ ಎನ್ನುವ ಜಿಜ್ಞಾಸೆ ನಿರಂತರವಾಗಿದೆ.
ತಾನು ಬರೆದ ಸಾಹಿತ್ಯ ನನ್ನ ಜೀವನಕ್ಕೆ ಅದು ಸಂಬಂಧವಿಲ್ಲ ಎನ್ನುವ ಭಾವಬೆ ಇದೆ. ಸಾಹಿತ್ಯದಲ್ಲಿ ಕುಡಿತ ಹಾನಿಕರ ಎಂದು ಬರೆದು ರಾತ್ರಿ ಕಂಠಪೂರ್ತಿ ಕುಡಿಯುವುದು ಭ್ರಷ್ಟ ಅಧಿಕಾರಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದಂತೆ ಎಂದು ವ್ಯಂಗ್ಯವಾಡಿದರು.
ವರಕವಿ ದ.ರಾ.ಬೇಂದ್ರೆಯವರು ತಾವು ಹೇಗೆ ಬದುಕಿದರೊ ಹಾಗೆಯೇ ಬರೆದವರು. ಮನಸ್ಸು ಮಾಡಿದ್ದರೆ ರಾಜಧಾನಿಯಲ್ಲೇ ಬದುಕಬಹುದಿತ್ತು. ಆದರೆ, ಸಾಧನಕೇರಿಯಲ್ಲೇ ಬದುಕು ಸವೆಸಿದರು.
ಅವರ ಜೀವನದಲ್ಲಿಸಾಕಷ್ಟು ದುಃಖ ಅನುಭವಿಸಿದ್ದಾರೆ. ಅವರ ಭಾವಗೀತೆಗಳಲ್ಲಿ ಸಾಕಷ್ಟು ನೋವು ತುಂಬಿರುತ್ತೆ. ನುಡಿದಂತೆ ನಡೆದವರು ದ.ರಾ.ಬೇಂದ್ರೆಯವರು ಎಂದು ಸ್ಮರಿಸಿದರು.
ಸಾಹಿತ್ಯದ ಮೂಲಕ ಸಮಾಜದ ಬಗ್ಗೆ ಮಾತನಾಡಿದವರು ಸಮಾಜಕ್ಕೆ ಪೂರಕವಾಗಿ ಬದುಕಿಲ್ಲದ ಅನೇಕ ವೈರುಧ್ಯಗಳಿವೆ. ಅಭಾಸಪ ಸಾಹಿತ್ಯದ ಮೂಲದ ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಡಾ.ಎಸ್.ಎನ್.ಹೇಮಂತರಾಜು ಮಾತನಾಡಿ, ಸಾಹಿತ್ಯ ಬೇರೆ ಬೇರೆ ರೀತಿಯಲ್ಲಿ ಅರ್ಥವಾಗುತ್ತೆ ಎನ್ನುವುದಕ್ಕೆ ಬೇಂದ್ರೆಯವರ ನೀ ಹಿಂಗ ನೋಡಬೇಡ ನನ್ನ ಎನ್ನುವ ಪದ್ಯ ಎಂದು ವಿಶ್ಲೇಷಿಸಿದರು.
ಮುಖಂಡನೊಬ್ಬ ಹೊಗಳು ಭಟ್ಟನ ಮಾತು ಕೇಳಿ ಹಳ್ಳ ಹಿಡಿಯುವುದು ಹೇಗೆ ಸಾಧ್ಯವೋ ಅದೇ ಮಾತು ಸಾಹಿತಿಗೂ ಅನ್ವಯಿಸುತ್ತದೆ ಎಂದರು.
ಬೇಂದ್ರೆಯವರನ್ನು ಬಿಟ್ಟು ಕನ್ನಡ ಸಾಹಿತ್ಯವಿಲ್ಲ. ಬೇಂದ್ರೆಯವರ ಹೆಸರಿನಲ್ಲಿ ಟ್ರಸ್ಟ್ ಆಗಿದೆ. ಈ ಮೂಲಕ ಅವರು ಇನ್ನಷ್ಟು ಜನರನ್ನು ತಲುಪಬೇಕು ಎಂದು ಆಶಿಸಿದರು.
ಜ್ಞಾನಪೀಠ ಪ್ರಶಸ್ತಿ ಬಂದಾಗ ಬೇಂದ್ರೆಯವರು ಕನ್ನಡಕ್ಕೆ ಈಗ ಲಕ್ಷ್ಯ ಬಂತು ಎನ್ನುತ್ತಾರೆ. ಆದರೆ, ತಂದಿಕ್ಕುವ ಶಕ್ತಿಗಳು ನನಗೆ ಲಕ್ಷ ಬಂತು ಎಂದಿದ್ದಾರೆ ಎಂದು ಪುಕಾರು ಹಬ್ಬಿಸಿ ಕುವೆಂಪು ಹಾಗೂ ಬೇಂದ್ರೆಯವರ ನಡುವೆ ವೈಮನಸ್ಸು ಮೂಡಿಸುವ ಕೆಲಸ ನಿರಂತರವಾಗಿತ್ತು. ಇಂತಹ ಒಳಸುಳಿಗಳ ನಡುವೆ ಅವರು ಬದುಕಿದರು ಎಂದು ಮೆಲುಕು ಹಾಕಿದರು. ತಮ್ಮ ಮಾತು ಹಾಗೂ ಪದಬಳಕೆಯಲ್ಲಿ ವಿಶಿಷ್ಟವಾಗಿ ಬಳಸುವ ಶಕ್ತಿ ಬೇಂದ್ರೆಯವರಲ್ಲಿತ್ತು ಎಂದರು.
ನನ್ನ ಬದುಕೇ ನನ್ನ ಸಂದೇಶ ಎಂದು ಹೇಳಿದ ಜಗತ್ತಿನ ಏಕೈಕ ವ್ಯಕ್ತಿ ಗಾಂಧೀಜಿ. ಅದೇ ರೀತಿ ಬದಕಿದಂತೆ ಬರೆದವರು ಬೇಂದ್ರೆ ಮತ್ತು ಕುವೆಂಪು ಎಂದು ಡಾ.ಹೇಮಂತರಾಜು ಹೇಳಿದರು.
ಉಪನ್ಯಾಸಕ ಯಳನಾಡು ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ದೊಡ್ಡಯ್ಯ ಸ್ವಾಗತಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಶಿಕ್ಷಕ ಕೆಂಚವೀರಪ್ಪ ಕಾರ್ಯಕ್ರಮ ನಿರ್ವಹಿಸಿದರು.
“ಜಿಲ್ಲಾ ಮಟ್ಟದಲ್ಲಿ ನಮಗೆ ಇನ್ನೊಂದು ಸಹೃದಯೀ ಸಾಹತ್ಯ ಸಂಸ್ಥೆ ಜೊತೆಯಾಗಿದೆ. ವಿಭಿನ್ನ ರೀತಿಯ ಸಂಸ್ಥೆ ಇದು ಎನ್ನುವುದಕ್ಕೆ ಈ ಕಾರ್ಯಕ್ರಮ ನಿದರ್ಶನ. ಒಟ್ಟಾಗಿ ಸೇರಿ ಮುಂದುವರೆಯೋಣ”.
ಕೆ.ಎಂ.ಶಿವಸ್ವಾಮಿ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರು.
“ಸೊಷಿಯಲ್ ಮೀಡಿಯಾದಂತಹ ಅನೇಕ ಮಾಲಿನ್ಯದ ನಡುವೆ ಕಳೆದು ಹೋಗುತ್ತಿರುವ ನಮಗೆ ಸಾಹಿತ್ಯ ಕಾರ್ಯಕ್ರಮಗಳು ಬೇಕು”. ಪ್ರೊ.ಜಿ.ಪರಮೇಶ್ವರಪ್ಪ. ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಜಿಲ್ಲಾಧ್ಯಕ್ಷರು.