ಹೆಚ್ಚುತ್ತಿರುವ ಸ್ವಾರ್ಥ, ಕಡಿಮೆಯಾಗುತ್ತಿರುವ ಸೇವಾ ಮನೋಭಾವನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಎಲ್ಲೆಡೆ ಸ್ವಾರ್ಥ ತುಂಬಿ ತುಳುಕುತ್ತಿದ್ದು
, ಸೇವಾ ಮನೋಭಾವನೆ, ಪರೋಪಕಾರ ಎನ್ನುವುದು ಕಡಿಮೆಯಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸ್ಥಾನಿಕ ಆಯುಕ್ತ ಪಿ.ವೈ.ದೇವರಾಜ್‌ ಪ್ರಸಾದ್ ತಿಳಿಸಿದರು.

ಹಳೆ ಬೆಂಗಳೂರು ರಸ್ತೆಯಲ್ಲಿರುವ ಬಂಧಿಖಾನೆಯಲ್ಲಿನ ಖೈದಿಗಳಿಗೆ ಬೆಂಗಳೂರಿನ ಕಾಲಿಂಗ್ ಏರೋಸ್ಪೇಸ್ ಕಂಪನಿಯವರು ಶನಿವಾರ ಹಮ್ಮಿಕೊಂಡಿದ್ದ ವಿವಿಧ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

- Advertisement - 

ಧರ್ಮ-ಜಾತಿಗಳ ನಡುವೆ ಕಿತ್ತಾಟ ಶುರುವಾಗಿದ್ದು, ದೇಶಭಕ್ತಿ, ಐಕ್ಯತೆ ನಶಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಾಲಿಂಗ್ ಏರೋಸ್ಪೇಸ್ ಕಂಪನಿಯವರು ನೀರಿನ ಘಟಕ ಇನ್ನಿತರೆ ಸಲಕರಣೆಗಳನ್ನು ನೀಡಿರುವುದು ನಿಜಕ್ಕೂ ಅರ್ಥಪೂರ್ಣವಾದುದು. ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಎಸಗಿ ಇಲ್ಲಿಗೆ ಬಂದಿದ್ದೀರ. ನಿಮ್ಮ ನಡವಳಿಕೆಗಳನ್ನು ತಿದ್ದಿಕೊಂಡು ಹೊರಗೆ ಹೋದ ಮೇಲೆ ಪರಿವರ್ತನೆಯಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕು ಕಟ್ಟಿಕೊಳ್ಳಿ. ಸಿಟ್ಟಿನ ಕೈಗೆ ಬುದ್ದಿ ಕೊಡಬೇಡಿ ಎಂದು ಖೈದಿಗಳಿಗೆ ಕಿವಿಮಾತು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಗಾಂಧಿ ಕೂಡ ಸೆರೆವಾಸ ಅನುಭವಿಸಿದ್ದಾರೆ. ಆಕಸ್ಮಿಕವಾಗಿ ನೀವುಗಳು ಇಲ್ಲಿಗೆ ಬಂದಿದ್ದೀರ. ಜೀವನದಲ್ಲಿ ಮತ್ತೆ ಯಾವ ತಪ್ಪುಗಳನ್ನು ಮಾಡಬೇಡಿ. ಸಮಾಜದಲ್ಲಿ ಎಲ್ಲರಂತೆ ಉತ್ತಮರಾಗಿ ಬಾಳಿ. ಖಾಸಗಿ ಕಂಪನಿಯವರು ನಿಮಗೆ ನೀಡಿರುವ ಸಲಕರಣೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿನಂತಿಸಿದರು.

- Advertisement - 

ಕಾಲಿಂಗ್ ಏರೋಸ್ಪೇಸ್ ಕಂಪನಿಯ ಕರಣ್ ಮಾತನಾಡಿ ಸಮಾಜಕ್ಕೆ ಏನಾದರೂ ಉಪಕಾರಿಯಾಗಬೇಕೆಂಬ ಚಿಂತನೆಯಿಟ್ಟುಕೊಂಡು ಕಂಪನಿಯಿಂದ ನಿಮಗೆ ಕೆಲವು ಸಲಕರಣೆಗಳನ್ನು ವಿತರಿಸಿದ್ದೇವೆ. ಲೈಬ್ರರಿಯಲ್ಲಿ ಸಿಗುವ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ನೀವು ಕುಟುಂಬವನ್ನು ಬಿಟ್ಟು ಜೈಲಿನಲ್ಲಿರುವುದೇ ನಿಮಗೆ ದೊಡ್ಡ ಶಿಕ್ಷೆ. ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನದೆ ಆದ ಹಕ್ಕಿದೆ. ಹಾಗಂತ ಸ್ವೇಚ್ಚಾಚಾರವಾಗಿ ವರ್ತಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಮುಂದೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ವಿತರಿಸಬೇಕೆಂಬ ಆಸೆಯಿದೆ. ನೀವುಗಳು ಇಲ್ಲಿಂದ ಹೊರಗೆ ಹೋದ ಮೇಲೆ ಸತ್ಪ್ರೆಜೆಗಳಾಗಿ ಬಾಳಬೇಕು ಎಂದು ಖೈದಿಗಳಿಗೆ ಕರೆ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ವಿಸ್ತರಣಾಧಿಕಾರಿ ರುದ್ರಮುನಿ ಮಾತನಾಡಿ ಐಟಿ, ಬಿಟಿ.ಯಲ್ಲಿ ಕೆಲಸ ಮಾಡುವವರಿಗೆ ಒತ್ತಡಗಳಿರುತ್ತವೆ. ಆದಾಗ್ಯೂ ಜೈಲಿನಲ್ಲಿರುವ ಖೈದಿಗಳಿಗೆ ಏನಾದರೂ ಅನುಕೂಲ ಒದಗಿಸಬೇಕೆಂಬ ಮಹದಾಸೆಯಿಟ್ಟುಕೊಂಡು ಶುದ್ದ ನೀರಿನ ಘಟಕ ಹಾಗೂ ಬ್ಯಾಗ್‌ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಯಾರಾದರೂ ಜೈಲಿಗೆ ಹೋಗಿ ಬಂದಿದ್ದಾರೆಂದರೆ ಅಂತಹವರನ್ನು ಸಮಾಜ ಕೀಳಾಗಿ ಕಾಣುತ್ತದೆ. ನೀವೆಲ್ಲಾ ಆರೋಪಿಗಳು, ಅಪರಾಧಿಗಳಲ್ಲ. ಮುಜುಗರಕ್ಕೊಳಪಡಬೇಡಿ. ಇಲ್ಲಿಂದ ಹೊರಗೆ ಹೋದ ನಂತರ ಉತ್ತಮರಾಗಿ ಬದುಕಿ ಎಂದು ನುಡಿದರು.

ಕಾಲಿಂಗ್ ಏರೋಸ್ಪೇಸ್ ಕಂಪನಿಯ ನಾಗವೇಣಿ ಮಾತನಾಡಿ ಜೈಲಿನಲ್ಲಿರುವ ಖೈದಿಗಳು ಸಮಾಜದ ಒಂದು ಭಾಗವಾಗಿರುವುದರಿಂದ ಅವರಿಗೂ ಅವಕಾಶಗಳು ಸಿಗಬೇಕು. ಜೈಲಿನಲ್ಲಿ ಇದೊಂದು ನಮ್ಮ ಹೊಸ ಪ್ರಯತ್ನ. ಅಂಬ್ಯುಲೆನ್ಸ್ ವಾಹನ ಕೇಳಿದ್ದಾರೆ. ಇದರ ಕುರಿತು ನಮ್ಮ ತಂಡದವರೆಲ್ಲಾ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಸಿಕ್ಕ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಿ ಎಂದು ಮನವಿ ಮಾಡಿದರು.

ಗಾಯತ್ರಿ ಶಿವರಾಂ ಮಾತನಾಡಿ ಸಮಾಜದಲ್ಲಿ ಆಗಬೇಕಾದ ಒಳ್ಳೆ ಕೆಲಸಗಳು ಸಾಕಷ್ಟಿವೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪುಗಳನ್ನು ಮಾಡಿ ನೀವುಗಳು ಜೈಲು ಸೇರಿದ್ದೀರ. ಮುಂದೆ ಇಂತಹ ತಪ್ಪುಗಳನ್ನು ಮಾಡಬೇಡಿ. ಹೊರಗೆ ಹೋದ ಮೇಲೆ ಕುಟುಂಬದೊಂದಿಗೆ ನೆಮ್ಮದಿಯಾಗಿ ಬದುಕಿ ಎಂದರು.

ವೈ.ಬಿ.ಮಹೇಂದ್ರನಾಥ್, ನಾಗರೀಕ ಬಂದೂಕು ತರಬೇತಿ ಶಿಬಿರದ ಮಹಮದ್‌ಆಲಿ, ಜೈಲರ್ ರಾಜೇಂದ್ರ ಕೋರ್ಪಡೆ, ಸಹಾಯಕ ಜೈಲರ್‌ಗಳಾದ ರಾಮಣ್ಣ ಹೆರ್‍ಕಲ್, ಮಡಿವಾಳಪ್ಪ, ಕಾಲಿಂಗ್ ಏರೋಸ್ಪೇಸ್ ಕಂಪನಿಯ ಪುರುಷೋತ್ತಮ್, ರಾಘವೇಂದ್ರ, ಪಾಲ್ಗುಣ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪರಿಷತ್ ಸದಸ್ಯ ಬಸವರಾಜ್ ಇವರುಗಳು ವೇದಿಕೆಯಲ್ಲಿದ್ದರು.

 

 

Share This Article
error: Content is protected !!
";