ಚಂದ್ರವಳ್ಳಿ ನ್ಯೂಸ್, ಹೊಸದಿಲ್ಲಿ:
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಅಘೋಷಿತ ಯುದ್ಧ ದಾಳಿಗೆ ಕದನ ವಿರಾಮ ನೀಡಲಾಗಿದೆ. ಈ ಬಗ್ಗೆ ಸ್ವತಃ ಭಾರತ ಸರ್ಕಾರವು ಖಚಿತ ಪಡಿಸಿದೆ.
ಭಾರತ ಮತ್ತು ಪಾಕಿಸ್ತಾನ ಪರಸ್ಪರ ಒಪ್ಪಿಗೆ ಮೇರೆಗೆ ಶನಿವಾರ ಸಂಜೆ 5 ರಿಂದ ಎಲ್ಲಾ ರೀತಿಯ ದಾಳಿಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ. ಈ ಸಂಬಂಧ ಎರಡು ದೇಶಗಳ ನಡುವೆ ಮೇ 12 (ಸೋಮವಾರ) ಮಾತುಕತೆ ಇದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ ಮಿಸ್ರಿ ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆಯ ಮಹಾನಿರ್ದೇಶಕರು ಭಾರತದ ಮಹಾನಿರ್ದೇಶಕರಿಗೆ ಮಧ್ಯಾಹ್ನ 3.35ಕ್ಕೆ ಕರೆ ಮಾಡಿ ಮಾತನಾಡಿದ್ದು, ಇಬ್ಬರು ಎಲ್ಲ ರೀತಿಯ ದಾಳಿ ಹಾಗೂ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಲು ಒಪ್ಪಿಕೊಂಡಿದ್ದಾರೆ.
ಸಂಜೆ 5 ಗಂಟೆಯಿಂದ ಭೂಮಿ, ವಾಯು ಮತ್ತು ಸಾಗರದ ಮೂಲಕ ಯಾವುದೇ ರೀತಿಯ ದಾಳಿ ನಡೆಸದಿರಲು ಎರಡು ದೇಶಗಳು ಒಪ್ಪಿಕೊಂಡಿವೆ ಎಂದು ವಿಕ್ರಮ್ಮಿಸ್ರಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮೇ 12ಕ್ಕೆ ಮಾತುಕತೆ
ಭಾರತ ಮತ್ತು ಪಾಕಿಸ್ತಾನ ದೇಶಗಳ ಎರಡು ಕಡೆಯಿಂದ ಕೆಲವು ಸೂಚನೆಗಳನ್ನು ನೀಡಲಾಗಿದ್ದು, ಉಭಯ ಸೇನಾ ಮಹಾ ನಿರ್ದೇಶಕರು ಈ ಬಗ್ಗೆ ಮೇ 12ರಂದು ಮಧ್ಯಾಹ್ನ 12ಕ್ಕೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಪ್ಮಾತುಕತೆ ಮಾಡಿದ್ದಾರೆ. ಎರಡು ದೇಶಗಳು ಒಪ್ಪಿ ಕದನ ವಿರಾಮಕ್ಕೆ ಮುಂದಾಗಿವೆ. ಸಮಯೋಚಿತ ನಿರ್ಧಾರಕ್ಕೆ ಎರಡೂ ದೇಶಗಳಿಗೂ ಶುಭಾಶಯಗಳು ಎಂದು ಸ್ವತಃ ಟ್ರಂಪ್ಟ್ವೀಟ್ಮೂಲಕ ಮಾಹಿತಿ ನೀಡಿದ್ದಾರೆ.
ವಿದೇಶಾಂಗ ಸಚಿವ ಜೈ ಶಂಕರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತ ಮತ್ತು ಪಾಕಿಸ್ತಾನ ಶನಿವಾರದಿಂದ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ಭಾರತವು ಭಯೋತ್ಪಾದನೆಯ ವಿರುದ್ಧ ದೃಢ ಮತ್ತು ರಾಜಿಯಾಗದ ನಿಲುವನ್ನು ನಿರಂತರವಾಗಿ ಕಾಯ್ದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ದಾಳಿ-ಪ್ರತಿ ದಾಳಿ
ಜಮ್ಮು ಕಾಶ್ಮೀರದ ಪಹಲ್ಗಾಮ್ನ ದಾಳಿಯ ಪ್ರತಿಕಾರವಾಗಿ ಭಾರತ ಸೇನೆಯು ಮಂಗಳವಾರ ಮಧ್ಯರಾತ್ರಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕೈಗೊಂಡಿತ್ತು.
ಆ ಬಳಿಕ ಪಾಕಿಸ್ತಾನ ಗುರುವಾರ ಜಮ್ಮು ಸೇರಿದಂತೆ ಭಾರತದ 15 ನಗರಗಳ ಸೇನಾನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಅದೇ ದಿನ ಸಂಜೆ ಜಮ್ಮು ಸೇರಿದಂತೆ ವಿವಿಧ ಗಡಿ ರಾಜ್ಯಗಳ ಮೇಲೆ ಮತ್ತೆ ಕ್ಷಿಪಣಿ ದಾಳಿ ನಡೆಸಿತ್ತು. ಭಾರತೀಯ ಸೇನೆಯು ದಾಳಿಯನ್ನು ತಡೆಗಟ್ಟಿತ್ತು. ಹೆಚ್ಚಿನ ಹಾನಿಯಾಗದಂತೆ ಕ್ರಮವಹಿಸಿ ಪಾಕಿಸ್ತಾನ ದಾಳಿಗೆ ಪ್ರತಿಯಾಗಿ ಮಾತ್ರ ದಾಳಿ ಮಾಡಿತ್ತು. ಶುಕ್ರವಾರವೂ ಭಾರತದ 26 ಕಡೆ ಪಾಕಿಸ್ತಾನ ಸೇನೆ ದಾಳಿ ಮಾಡಿ ಭಾರತವನ್ನು ಮತ್ತಷ್ಟು ಕೆರಳಿಸಿತ್ತು. ಶನಿವಾರ ಅಮೆರಿಕ ಮಧ್ಯ ಪ್ರವೇಶ ಮಾಡಿದ್ದು ಸದ್ಯ ಎರಡು ದೇಶಗಳು ಕದನ ವಿರಾಮಕ್ಕೆ ಮುಂದಾಗಿವೆ.