ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕೊಲ್ಲಿ ರಾಷ್ಟ್ರಗಳ ನಡುವೆ ಯುದ್ದ ಆರಂಭಗೊಂಡು ಅನೇಕ ಸಾವು-ನೋವುಗಳು ಸಂಭವಿಸುತ್ತಿದ್ದು, ನಮ್ಮ ದೇಶದ ಸೈನಿಕರು ಹಗಲು-ರಾತ್ರಿಯೆನ್ನದೆ ಗಡಿಯಲ್ಲಿ ಕಾವಲು ಕಾಯುತ್ತಿರುವುದರಿಂದ ಭಾರತೀಯರೆಲ್ಲರೂ ಸುರಕ್ಷಿತವಾಗಿದ್ದೇವೆಂದು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎ.ಹನುಮಕ್ಕ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ವತಿಯಿಂದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ. ಪ್ರಶಿಕ್ಷಣಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಪ್ರಾರಂಭಿಕ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ನಿಮಗೆ ಸಾಕಷ್ಟು ಅನುಕೂಲಗಳಿವೆ. ಉದ್ಯೋಗ ಮತ್ತು ಶಿಕ್ಷಣದಲ್ಲಿಯೂ ಸಹಾಯವಾಗಲಿದೆ. ಮುಂದೆ ನೀವು ಶಿಕ್ಷಕರುಗಳಾಗುತ್ತೀರ. ಮಕ್ಕಳಲ್ಲಿ ದೇಶಭಕ್ತಿ, ದೇಶಾಭಿಮಾನ, ಗುರು-ಹಿರಿಯರನ್ನು ಗೌರವಿಸುವಂತ ಸಂಸ್ಕಾರ ಕಲಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಯಾವುದೇ ಜಾತಿ ಧರ್ಮವಿರಲಿ ಮೊದಲು ನಾವುಗಳು ಭಾರತೀಯರೆಂಬ ಅಭಿಮಾನ ಎಲ್ಲರಲ್ಲಿಯೂ ಮೂಡಬೇಕು. ಕೇವಲ ಪಠ್ಯವಷ್ಟೆ ಮುಖ್ಯವಲ್ಲ. ಇಂತಹ ಶಿಬಿರಗಳಲ್ಲಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಾರದಾ ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಟಾನಂದಸ್ವಾಮೀಜಿ ಆಶೀರ್ವಚನ ನೀಡುತ್ತ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಚರಿತ್ರೆಯನ್ನು ಯಾರು ಓದುತ್ತಾರೋ ಅವರಲ್ಲಿ ಕೆಟ್ಟ ಆಲೋಚನೆಗಳು ಸುಳಿಯುವುದಿಲ್ಲ. ತ್ಯಾಗ ಮತ್ತು ಸೇವಾ ಗುಣ ದೇಶದ ಅವಳಿ ಆದರ್ಶಗಳು. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರು ದೇಶಕ್ಕಾಗಿ ಏನು ಕೊಟ್ಟಿದ್ದೇನೆನ್ನುವುದನ್ನು ಒಮ್ಮೆಯಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಗವದ್ಗೀತೆಯನ್ನು ಯಾರು ಓದುವುದಿಲ್ಲವೋ ಅಂತಹವರು ನಿಜವಾದ ಹೇಡಿಗಳು. ಯುವ ಜನಾಂಗ ದೇಶ ಪ್ರೇಮವನ್ನು ಹೆಚ್ಚಿಸಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಶಾರೀರಿಕ, ಬೌದ್ದಿಕ, ಸಾಮಾಜಿಕ, ನೈತಿಕವಾಗಿ ಹೇಗೆ ಇರಿ. ಯಾರು ಆಧ್ಯಾತ್ಮಿಕವಾಗಿರುವುದಿಲ್ಲವೋ ಅಂತಹವರ ಪಾಡು ಕಷ್ಟವಾಗಿರುತ್ತದೆ. ಒಬ್ಬ ವೈದ್ಯ ಮೈಮರೆತರೆ ನಾಲ್ಕಾರು ಪ್ರಾಣ ಹೋಗಬಹುದು. ಒಬ್ಬ ಇಂಜಿನಿಯರ್ ತನ್ನ ಕೆಲಸದಲ್ಲಿ ನಿರ್ಲಕ್ಷೆ ವಹಿಸಿದರೆ ನಾಲ್ಕು ಕಟ್ಟಡಗಳು ಕುಸಿಯಬಹುದು. ಅದೇ ಒಬ್ಬ ಶಿಕ್ಷಕ ತನ್ನ ಜವಾಬ್ದಾರಿಯನ್ನು ಮರೆತರೆ ಇಡಿ ಸಮಾಜವೇ ಸರ್ವ ನಾಶವಾಗುತ್ತದೆ. ಶಿಕ್ಷಕ ವೃತ್ತಿಗೆ ಅಂತಹ ಮಹತ್ವವಿದೆ. ಪ್ರಾಮಾಣಿಕವಾಗಿ ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಿ. ಮನಸ್ಸು ನಿರ್ಮಲವಾಗಿರುತ್ತದೆಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಉಜ್ಜಿನಪ್ಪ ಮಾತನಾಡಿ ಎನ್ಎಸ್ಎಸ್, ಎನ್ಸಿಸಿ. ನಾಮಕವಾಸ್ಥೆ ಎನ್ನುವಂತಾಗಿದ್ದು, ಅರ್ಥ ಕಳೆದುಕೊಂಡಿದೆ. ನೂರು ವರ್ಷಗಳಾದರೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇಂದಿಗೂ ತನ್ನ ಮಹತ್ವ ಕಳೆದುಕೊಂಡಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ ಹಾಗೂ ದೇಶಭಕ್ತಿ ಮೂಡಿಸುವಂತ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಿದೆ. ಭಾರತದಲ್ಲಿ ಎಲ್ಲಾ ಜಾತಿ ಧರ್ಮದವರು ಅನ್ಯೋನ್ಯತೆಯಿಂದಿದ್ದಾರೆ. ಇಂತಹ ದೇಶ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸ್ಥಾನಿಕ ಆಯುಕ್ತ ಪಿ.ವೈ.ದೇವರಾಜ್ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಎಸ್.ಪರಮೇಶ್, ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಎ.ಹನುಮಂತಪ್ಪ, ಲೀಡರ್ ಟ್ರೈನರ್ ಮತ್ತು ಶಿಬಿರದ ನಾಯಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗದ ರಾಜೇಶ್ ವಿ.ಅವಲಕ್ಕಿ, ಸೌಮ್ಯ ಎಂ. ರಾಜ್ಯ ಸಂಸ್ಥೆ ಅಜೀವ ಸದಸ್ಯ ಬಸವರಾಜ್ ವೇದಿಕೆಯಲ್ಲಿದ್ದರು. ಸಂಸ್ಥೆಯ ಸ್ಥಳೀಯ ಸಹ ಕಾರ್ಯದರ್ಶಿ ವಿಶ್ವನಾಥ, ಎಎಲ್ಟಿ. ಸಿ.ರವಿ ಇವರುಗಳು ಶಿಬಿರದಲ್ಲಿದ್ದರು.

