ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಕ್ಷಿಣದ ಶಕ್ತಿ, ಭಾರತದ ಬೆಳವಣಿಗೆಯ ಕೇಂದ್ರ-ಕರ್ನಾಟಕ South First ಸಂಸ್ಥೆಯ ವಾರ್ಷಿಕ ಚಿಂತನಾ ಸಮಾವೇಶದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ದೇಶ ಎದುರಿಸುತ್ತಿರುವ ಪ್ರಮುಖ ಆರ್ಥಿಕ ಪ್ರಶ್ನೆಗಳ ಕುರಿತು ಸಂವಾದ ನಡೆಸುವ ಉದ್ದೇಶದೊಂದಿಗೆ South First ಸಂಸ್ಥೆಯ ವಾರ್ಷಿಕ ಚಿಂತನಾ ಸಮಾವೇಶ #DakshinDialogues2026’ನ ನಾಲ್ಕನೇ ಆವೃತ್ತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನೀತಿ ನಿರೂಪಕರು, ಚಿಂತಕರು, ಉದ್ಯಮಿಗಳು, ಹಾಗೂ ದುಡಿಯುವ ವರ್ಗದ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸಂವಾದ ನಡೆಸುವ ಅರ್ಥಪೂರ್ಣ ಅವಕಾಶವನ್ನು ಈ ಸಮಾವೇಶ ಒದಗಿಸಿದೆ ಎಂದು ಎಂಬಿ ಪಾಟೀಲ್ ತಿಳಿಸಿದರು.
ಬೆಳವಣಿಗೆಯ ಜೊತೆಗೆ ಸಾಮಾಜಿಕ ನ್ಯಾಯವನ್ನು ಸಮತೋಲನಗೊಳಿಸುವ ನೀತಿಗಳನ್ನು ರೂಪಿಸಲು ಇಂತಹ ವೇದಿಕೆಗಳು ಅತ್ಯಾವಶ್ಯಕ. ಇಂದು ದಕ್ಷಿಣ ಭಾರತವೇ ದೇಶದ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮಿದ್ದು, ರಾಷ್ಟ್ರ ಜಿಡಿಪಿಯಲ್ಲಿ ಸುಮಾರು ಮೂರನೇ ಭಾಗದ ಕೊಡುಗೆ ನೀಡುತ್ತಿದೆ.
ಉತ್ಪಾದನಾ ಕ್ಷೇತ್ರಕ್ಕೆ ಗಟ್ಟಿಯಾದ ಒತ್ತಾಸೆಯೊಂದಿಗೆ ಕರ್ನಾಟಕ ಮುಂಚೂಣಿಯಲ್ಲಿ ನಿಂತಿದೆ. ‘ಉತ್ಪಾದನಾ ಮಂಥನ’ದಲ್ಲಿ 80ಕ್ಕೂ ಹೆಚ್ಚು ಸಿಇಒಗಳು ನೀಡಿದ ಮಾರ್ಗಸೂಚಿಗಳ ಆಧಾರದಲ್ಲಿ ರಾಜ್ಯವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಿಸುವ ಸ್ಪಷ್ಟ ನೀಲನಕ್ಷೆ ಸಿದ್ಧವಾಗಿದೆ.
#GIM2025 ರಲ್ಲಿ ರೂ. 10.27 ಲಕ್ಷ ಕೋಟಿ ಹೂಡಿಕೆ ಒಪ್ಪಂದಗಳನ್ನು ಸಾಧಿಸಿದ್ದು, ಅದರಲ್ಲಿ ಶೇ. 60 ಈಗಾಗಲೇ ಅನುಷ್ಠಾನಗೊಂಡಿದೆ; ಶೇ. 75 ಹೂಡಿಕೆಗಳು ಬೆಂಗಳೂರಿನ ಹೊರಗಡೆ ನಡೆಯುತ್ತಿರುವುದು ಸಮತೋಲನಯುತ ಅಭಿವೃದ್ಧಿಗೆ ಸಾಕ್ಷಿ ಎಂದು ಸಚಿವರು ಹೇಳಿದರು.
ವಿಮಾನೋದ್ಯಮ ಮತ್ತು ರಕ್ಷಣಾ ಕ್ಷೇತ್ರದಲ್ಲಿ ದೇಶದ ಉತ್ಪಾದನೆಯ ಶೇ. 65 ಕೊಡುಗೆ ನೀಡುವ ಮೂಲಕ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ದಾವೋಸ್ ನಂತಹ ಜಾಗತಿಕ ವೇದಿಕೆಗಳು ದೀರ್ಘಕಾಲೀನ ಸಹಭಾಗಿತ್ವಗಳಿಗೆ ಬಲ ನೀಡುತ್ತಿವೆ ಎಂದು ಸಚಿವ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು.

