ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದಿರಾಗಾಂಧಿ ಅವರ ಹೆಸರು ಈ ದೇಶದ ಪ್ರತಿಯೊಬ್ಬ ಬಡ ಜನತೆಯ ಉಸಿರು! ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇಂದಿರಾಗಾಂಧಿ ಅವರ ಹೆಸರು ಈ ದೇಶದ ಪ್ರತಿಯೊಬ್ಬ ಬಡ ಜನತೆಯ ಉಸಿರು. ಇಂದಿರಾಗಾಂಧಿ ಅವರು ಈ ದೇಶದ ಐಕ್ಯತೆ, ಸಮಗ್ರತೆ ಮತ್ತು ಶಾಂತಿಗೆ ದೊಡ್ಡ ಕೊಡುಗೆ ನೀಡಿ ಹುತಾತ್ಮರಾದವರು. ಅವರು ಪ್ರಧಾನಿಗಳಾಗಿದ್ದಾಗ ಈ ದೇಶಕ್ಕೆ ನೀಡಿದ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿವೆ ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರಿನ ಜೆ ಪಿ ನಗರದ ಸಾರಕ್ಕಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಡತನ ನಿವಾರಣೆಗೆ ದಿಟ್ಟ ನಿರ್ಧಾರ ತೆಗೆದುಕೊಂಡರು. ಇಂದಿರಾ ಗಾಂಧಿಯವರ ಉಳುವವನೇ ಭೂಮಿಯ ಒಡೆಯ ಯೋಜನೆಯನ್ನು ರಾಜ್ಯದಲ್ಲಿ ದೇವರಾಜ ಅರಸು ಅವರು ಜಾರಿಗೆ ತಂದು ಬಡವರಿಗೆ ಭೂಮಿ ಹಂಚಿದರು. ಇದರಿಂದಲಕ್ಷಾಂತರ ಜನ ಭೂಮಿ ಪಡೆಯುವಂತಾಯಿತು. ಪ್ರತಿಯೊಂದು ತಾಲ್ಲೂಕಿನಲ್ಲಿ 10-15 ಸಾವಿರ ರೈತರು ಇದರ ಫಲಾನುಭವಿಗಳಾದರು. ಇಡೀ ದೇಶದಲ್ಲಿಯೇ ಇಂತಹ ಭೂಕ್ರಾಂತಿ ಎಲ್ಲಿಯೂ ಆಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿ ಜನಸಾಮಾನ್ಯರ ಬದುಕಿಗೆ ನೆರವಾದರು. ಸಣ್ಣ ಆರ್ಥಿಕ ಬೆಂಬಲಕ್ಕೂ ಕಷ್ಟ ಪಡುತ್ತಿದ್ದ ಜನರಿಗೆ ಸಾಲ ದೊರೆಯುವಂತಾಯಿತು.
ಆರ್ಥಿಕ ಸಂಕಷ್ಟ ಶಮನಕ್ಕೆ ಈ ನಿರ್ಧಾರ ನಾಂದಿಯಾಯಿತು. ಇದರಿಂದ ಕೇಂದ್ರ ಸಚಿವರಾಗಿದ್ದ ಜನಾರ್ಧನ ಪೂಜಾರಿಯವರು ಸಾಲ ಮೇಳ ಏರ್ಪಡಿಸಿ ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ 5 ರಿಂದ 10 ಸಾವಿರದ ತನಕ ಸಾಲ ನೀಡಿ ದೊಡ್ಡ ಕ್ರಾಂತಿಕಾರಕ ನಡೆಗೆ ಕಾರಣರಾದರು. ವಿಧಾನಸಭೆ ಚುನಾವಣೆ ಸೋತಿದ್ದ ನಾನು ನನ್ನ ಕ್ಷೇತ್ರದಲ್ಲಿ ಸಾಲಮೇಳ ಏರ್ಪಡಿಸಿ ಜಿಲ್ಲಾ ಪಂಚಾಯತಿ ಚುನಾವಣೆ ಗೆದ್ದು ಬಂದೆನು ನಾನು ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಭಾರತ್ ಜೋಡೋ ಯಾತ್ರೆ ವೇಳೆ ಮೊಣಕಾಲ್ಮೂರು ಬಳಿ ಅಜ್ಜಿಯೊಬ್ಬರು ಬಂದು ‘ನಿಮ್ಮ ಅಜ್ಜಿ ನೀಡಿದ ಭೂಮಿಯಲ್ಲಿ ಬೆಳೆದ ಬೆಳೆ‘ ರಾಹುಲ್ ಗಾಂಧಿ ಅವರಿಗೆ ಸೌತೆಕಾಯಿ ನೀಡಿ ಆಶೀರ್ವಾದ ಮಾಡಿದ್ದರು. ಇದು ಸಾಧ್ಯವಾಗಿದ್ದು ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾಗಾಂಧಿ ಅವರಿಂದ ಎಂದು ಡಿಸಿಎಂ ಶಿವಕುಮಾರ್ ಹರ್ಷ ವ್ಯಕ್ತಪಡಿಸಿದರು.

