ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆ ಸಂಬಂಧ ನಡೆಯುತ್ತಿರುವ ಸಮೀಕ್ಷೆ ಸಂಪೂರ್ಣ ಬೋಗಸ್ ಎನ್ನುವುದಕ್ಕೆ ಮೇಲಿಂದ ಮೇಲೆ ಸಾಕ್ಷ್ಯ ಲಭಿಸುತ್ತಿದೆ. ಇದರ ಬೆನ್ನಲ್ಲೇ ಸಮೀಕ್ಷೆ ನೆಪದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೋಟ್ಯಂತರ ಹಣ ದುಂದುವೆಚ್ಚ ಮಾಡುತ್ತಿರುವ ವರದಿ ಹೊರಬಂದಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಮನೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲು 3.60 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈವರೆಗೂ ಬೆಂಗಳೂರು ನಗರದಲ್ಲಿ 60%ರಷ್ಟು ಕೂಡ ಸರ್ವೇ ನಡೆದಿಲ್ಲ. ಇನ್ನೂ ಕೆಲವೆಡೆ ಸಮೀಕ್ಷೆ ಮಾಡದೇ ಸ್ಟಿಕ್ಕರ್ ಅಂಟಿಸಿದ್ದಾರೆ. ಕೆಲವೆಡೆ ಬೇಕರಿ, ದಿನಸಿ ಅಂಗಡಿಗಳಿಗೂ ಸಮೀಕ್ಷೆ ಪೂರ್ಣ ಎಂಬ ಸ್ಟಿಕ್ಕರ್ ಅಂಟಿಸಲಾಗಿದೆ ಎಂದು ಬಿಜೆಪಿ ದೂರಿದೆ.
ಸಮೀಕ್ಷೆಯು ಸರ್ಕಾರದ ಕಣ್ಣೊರೆಸುವ, ಲೂಟಿ ಹೊಡೆಯುವ ತಂತ್ರವೇ ಹೊರತು ಇದರಲ್ಲಿ ಸರಿಯಾದ ಅಂಕಿ-ಅಂಶ ಸಿಗಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಯಾವ ಪುರುಷಾರ್ಥಕ್ಕಾಗಿ ಇಂತಹ ಕಾಟಾಚಾರದ ಸಮೀಕ್ಷೆ? ಮಾಡುತ್ತೀರಿ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.