ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಗತ್ತಿನಲ್ಲಿ ಸೂರ್ಯ-ಚಂದ್ರರಿರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿರುವುದು ಸಹ ಅಷ್ಟೇ ಸತ್ಯ!! ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಲಾಟರಿ ಸಿಎಂ ಸಿದ್ದರಾಮಯ್ಯ ಅವರು ಮೇಜು ಕುಟ್ಟಿ ತಮ್ಮ ಸರ್ಕಾರ ದಿವಾಳಿಯಾಗಿಲ್ಲ ಎಂದು ಬಡಾಯಿ ಕೊಚ್ಚಿಕೊಂಡರೂ, ಸರ್ಕಾರದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾತ್ರ ಶ್ವೇತ ಪತ್ರ ಹೊರಡಿಸಲು ಮಾತ್ರ ಅವರು ತಯಾರಿಲ್ಲ ಎಂದು ಬಿಜೆಪಿ ದೂರಿದೆ.
ಈಗ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ಸಹ ಸರ್ಕಾರದ ಬಳಿ ದುಡ್ಡಿಲ್ಲ ಎಂಬುದು ವರದಿಯಾಗಿದೆ. ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ಯಾರಾದರೂ ದಾನಿಗಳು ಸಿಗುತ್ತಾರಾ ಎಂದು ಚಾತಕಪಕ್ಷಿ ರೀತಿ ಹುಡುಕುತ್ತಿದೆ. ಇದನ್ನು ಗಮನಿಸಿದರೆ ಸಾಕು ಸರ್ಕಾರ ಅದ್ಯಾವ ಪರಿ ದಿವಾಳಿಯಾಗಿದೆ ಎಂಬುದಕ್ಕೆ ಸಾಕ್ಷಿ!!
ಉರ್ದು ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುವ ಲಾಟರಿ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ತಮ್ಮ ಟ್ವೀಟ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ 38 ಸಾವಿರ ಕೋಟಿ ಅನುದಾನ ನೀಡಿದ್ದೇವೆ ಎಂದಿದ್ದರು. ವಾರ್ಷಿಕವಾಗಿ 38 ಸಾವಿರ ಕೋಟಿ ಅನುದಾನ ನೀಡಿದ ಬಳಿಕವೂ, ಮಕ್ಕಳಿಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ನೀಡಲು ದಾನಿಗಳನ್ನು ಹುಡುಕುತ್ತದೆ ಎಂದ ಮೇಲೆ 38 ಸಾವಿರ ಕೋಟಿ ಅನುದಾನ ನೀಡಿದ್ದು ಸುಳ್ಳಾಗಬೇಕಲ್ಲವೇ..?? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಶಾಲಾ ಮಕ್ಕಳಿಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ನೀಡಲು ಮೇ 13, 2025 ರಂದು ಅನುದಾನ ಬಿಡುಗಡೆಯಾಗಿದೆ ಎಂದು ಒಂದೆಡೆ ಸರ್ಕಾರ ಹೇಳುತ್ತದೆ.
ಹಾಗಾದರೆ ಮಕ್ಕಳ ಶೂ ಹಾಗೂ ಸಾಕ್ಸ್ ಖರೀದಿಗೆ ಬಿಡುಗಡೆಯಾಗಿದ್ದ ₹111.88 ಕೋಟಿ ಅನುದಾನ ಯಾವ ರಾಜ್ಯದ ಕಾಂಗ್ರೆಸ್ ಚುನಾವಣಾ ಫಂಡ್ ಗೆ ಬಳಕೆಯಾಯಿತು ಎಂಬುದನ್ನು ಖುದ್ದು ಸಿದ್ದರಾಮಯ್ಯ ಅವರೆ ಹೇಳಬೇಕು. ಏಕೆಂದರೆ, 111.88 ಕೋಟಿ ಅನುದಾನ ಬಿಡುಗಡೆಯಾದ ಬಳಿಕವೂ ಶೂ ನೀಡಲು ದಾನಿಗಳನ್ನು ಹುಡುಕುತ್ತದೆ ಎಂದ ಮೇಲೆ ಬಿಡುಗಡೆಯಾದ ಅನುದಾನ ಯಾರ ಜೇಬು ಸೇರಿರಬಹುದು..!!
ಸರ್ಕಾರದ ಬೊಕ್ಕಸದಲ್ಲಿ ಬಿಡಿಗಾಸು ಅನುದಾನ ಉಳಿದಿಲ್ಲ, ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂಬುದನ್ನು ಲಾಟರಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಂಡತನ ಬಿಟ್ಟು ಒಪ್ಪಿಕೊಳ್ಳಬೇಕು. ಶೂ ನೀಡಲು ದಾನಿಗಳನ್ನು ಹುಡುಕುವುದನ್ನು ಬಿಟ್ಟು, ಶೂ ನೀಡಲು ಬಿಡುಗಡೆಯಾದ ಅನುದಾನ ಯಾರ “ಕೈ” ಸೇರಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಬಿಜೆಪಿ ಆಗ್ರಹ ಮಾಡಿದೆ.