ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಲ್ಲೇನ ಹಳ್ಳಿ ಮರುಳ ಸಿದ್ದೇಶ್ವರ ಸ್ವಾಮಿ ಮಠದ ಆವರಣದಲ್ಲಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಗುಗ್ಗರಿ ಪೂಜೆ ಗೌರಮ್ಮನವರನ್ನು ಕೂರಿಸಿ ಪೂಜೆ ಸಲ್ಲಿಸಲಾಯಿತು.
ಕಲ್ಲೇನಹಳ್ಳಿಯ ಗ್ರಾಮ ಸೇರಿದಂತೆ ಸುತ್ತಮುತ್ತ ಗ್ರಾಮದ ಸಾವಿರಾರು ಸಂಖ್ಯೆಯ ಸುಮಂಗಲೆಯರು ಸೇರಿ ಗೌರಿ ಪೂಜೆ ಸಲ್ಲಿಸಿದರು ಅರಿಶಿಣ ಕುಂಕುಮ ಬಳೆ ಹೂವು ನೀಡಿ ಗೌರಮ್ಮನಿಗೆ ಭಕ್ತಿ ಸಮರ್ಪಿಸಲಾಯಿತು.
ಬಳಿಕ ಊರಿನ ಹೊರ ಭಾಗದಲ್ಲಿರುವ ಯರಗಾಟ ನಾಯಕನ ಕಣಿವೆಗೆ ದೇವರನ್ನು ಕರೆದು ಗಂಗಾ ಪೂಜೆ ನಡೆಸಲಾಯಿತು. ಮೆರವಣಿಗೆ ಮೂಲಕ ಗ್ರಾಮದೇವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೂವಿನ ಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಮಧ್ಯಾಹ್ನದ ನಂತರ ಬ್ರಹ್ಮ ರಥೋತ್ಸವಕ್ಕೆ ಸಕಲ ಸಿದ್ಧತೆ ಗಳನ್ನು ಮಾಡಲಾಯಿತು. ಬಗೆ ಬಗೆಯ ಹೂವುಗಳಿಂದ ರಥವನ್ನು ಅಲಂಕರಿಸಲಾಗಿತ್ತು ಗ್ರಾಮದ ಗೌಡರ ವಂಶಸ್ಥರ ಮನೆಯಿಂದ ಎಡೆಯನ್ನು ತಂದು ದೇವರಿಗೆ ಪೂಜೆ ನೆರವೇರಿಸಿ ನೈವೇದ್ಯ ನೀಡಲಾಯಿತು ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ರಥ ಎಳೆಯಲಾಯಿತು ಅನೇಕ ಜನ ಭಕ್ತರು ಪಾಲ್ಗೊಂಡಿದ್ದರು.

