ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜೀವನ ಪ್ರೀತಿಯ ಪರಂಪರೆಯಲ್ಲಿ ಬೆಳೆದು ಬಂದ ಕನಕ ದಾಸರು ವ್ಯಾಸರಾಯರ ಶಿಷ್ಯರಾಗಿದ್ದರೂ ಕೂಡ ಜಗತ್ತಿಗೆ ಸಾಮಾಜಿಕ ಸಾಮರಸ್ಯವನ್ನು ಸಾರಿದರು ಎಂದು ಕನ್ನಡ ಪ್ರಾಧ್ಯಾಪಕಿ ಪ್ರೊ ಸಲ್ಮಾ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಕ ದಾಸರ ಜಯಂತಿ ಆಚರಣೆ ಕಾರ್ಯಕ್ರಮ ದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸಮಾಜದ ಜಾತಿ ಮತ್ತು ವರ್ಗ ಸಂಘರ್ಷದ ಸೂಕ್ಷ್ಮ ನೆಲೆಗಳನ್ನು ಕನಕದಾಸರ ಬರಹಗಳಲ್ಲಿ ಕಾಣಬಹುದು. ತನ್ನನ್ನು ಧಿಕ್ಕರಿಸಿದ ಸಮಾಜದ ಬಗ್ಗೆ ಅಸಹನೆಯ ಚಿಂತನೆ ಬೆಳೆಸಿಕೊಂಡಿದ್ದರೂ ಸಹ ಸಮಾಜವನ್ನು ಸಮಾನತೆಯಿಂದ ಕಂಡರು. ಅನುಭಾವಿಕ, ಸಂತ, ವೈಚಾರಿಕ ಚಿಂತನೆಗಳನ್ನು ಸಮಾಜದ ಜನರ ಮನಸ್ಸಿನಲ್ಲಿ ಬಿತ್ತುವ ಮೂಲಕ ಸೌಹಾರ್ದತೆ ಕೆಲಸವನ್ನು ತಮ್ಮ ರಚನೆಗಳಲ್ಲಿ ಮಾಡಿದರು.
ಅವರ ಕೀರ್ತನೆಗಳಲ್ಲಿ ಅಂತ ರಂಗದ ಅನುಭಾವಗಳಿವೆ. ರಾಮಧಾನ್ಯ ಚರಿತ್ರೆಯಲ್ಲಿ ನಿರೂಪಿತವಾಗಿರುವ ರಾಗಿ ಮತ್ತು ಅಕ್ಕಿ ನಡುವಿನ ವಾಗ್ವಾದ ಇಂದಿಗೂ ಪ್ರಸ್ತುತ ವಾಗಿದೆ. ಅಲ್ಲದೆ ಜಾತಿ, ಧರ್ಮ, ವರ್ಗ, ವರ್ಣ, ಭಾಷೆ, ಸಂಸ್ಕೃತಿ ಮೇಲು ಕೀಳು ಮುಂತಾದ ಚಿಂತನೆಗಳನ್ನು ಬಿಚ್ಚಿಡುತ್ತಲೇ ಸಮಾನತೆಯ ಸಂದೇಶವನ್ನು ಸಾರಿದ್ದಾರೆ ಎಂದು ಕೃತಿಗಳ ಹಿನ್ನಲೆಯಲ್ಲಿ ವಿವೇಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಮದ್ಯಕಾಲೀನ ಚರಿತ್ರೆಯ ಭಕ್ತಿ ಚಳುವಳಿ ಹಲವು ಸಾಂಸ್ಕೃತಿಕ ಪಲ್ಲಟಗಳಿಗೆ ಕಾರಣವಾಗಿದೆ. ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಮತ್ತು ತತ್ವಪದ ಸಾಹಿತ್ಯಗಳು ಭಕ್ತಿಯನ್ನ ಚಳುವಳಿಯ ನೆಲೆಯಲ್ಲಿ ಕಟ್ಡಿಕಡಿ ಸಾಮಾಜಿಕ ಧಾರ್ಮಿಕ ರಾಜಕೀಯ ವ್ಯವಸ್ಥೆಯ ಬದಲಾವಣೆಗೆ ಕಾರಣವಾದವು.
ಕನಕದಾಸರು ಅಸಹಿಷ್ಣತೆಗೆ ಒಳಗಾಗಿ ಅದರ ವಿರುದ್ದ ಹೊರಾಡಿ ಸಮಾನತೆ ಸಾಮರಸ್ಯದ ತತ್ವವನ್ನು ಬಿತ್ತಿದ್ದಾರೆ. ಜೀವಕ್ಕಿಂತ ಪ್ರಾಣ ದೊಡ್ಡದು, ಪ್ರಾಣಕ್ಕಿಂತ ಮಾನ ದೊಡ್ಡದು ಮಾನಹೀನನಾಗಿ ಬಾಳುವ ಮನುಜನ್ಯಾತಕೆ ಎಂದು ಮಾನವ ಜನ್ಮದ ಮಹತ್ವ ಸಾರಿದ್ದಾರೆ.
ಈ ಹೊತ್ತಿನ ಸಾಮಾಜಿಕ ಬಿಕ್ಕಟ್ಟುಗಳಿಗೆ ಕನಕದಾಸರ ತತ್ವಗಳಲ್ಲಿ ಪರಿಹಾರವಿದೆ.ಕನ್ನಡ ಸಾಹಿತ್ಯ ತನ್ನ ಪರಂಪರೆಯ ಉದ್ದಕ್ಕೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಲೇ ಬಂದಿದೆ. ನಮ್ಮಗಳ ಸಂಕುಚಿತ ಮನೋಭಾವದಿಂದ ಹೊರಬಂದು ಸಹಿಷ್ಣುತೆಯ ಸಮಾಜವನ್ಮು ಮಾನವ ಧರ್ಮದ ಮಹತ್ವನ್ನು ನಡೆನುಡಿಯಲ್ಲಿ ಅಳವಡಿಸಿಕೊಳ್ಳಬೇಕಿದೆ. ನಮ್ಮ ನಮ್ಮ ನಡೆ ನುಡಿಗಳಲ್ಲಿ ಕನಕ ಚಿಂತನೆಗಳು ಪ್ರಸ್ತುತವಾಗಬೇಕಿದೆ. ಕನಕ ಕನಕ ಕನಡದ ವಿವೇಕ ಎಂದು ಹೇಳಿದರು.
ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ ಜಗನ್ನಾಥ ಮಾತನಾಡಿ ಕನಕದಾಸರ ವೃತ್ತಿಬದುಕಿನ ಪಯಣದಲಿನ ಸಂಘರ್ಷಗಳು ಹೇಗ ಮಹತ್ವದ ತಿರುವುಗಳನ್ನು ಪಡೆದವು ಎನ್ನುವುದನ್ನು ಸಂಕ್ಷಿಪ್ತವಾಗಿ ನೀಡಿದರು.
ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ ಬಿ ಸುರೇಶ್, ಸ್ವಾಯತ್ತ ಸಂಸ್ಥೆ ಸಂಚಾಲಕ ಪ್ರೊ ರಮೇಶ್, ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ ಭಾನುಪ್ರಕಾಶ್, ಕನ್ನಡ ಪ್ರಾಧ್ಯಾಪಕ ಪ್ರೊ ಮಂಜುನಾಥ , ಕಾಲೇಜಿನ ಅಧೀಕ್ಷಕ ಹರಿಶ್ ಬಾಬು ಇದ್ದರು.

