ಕೆಂಪೇಗೌಡರ ದೂರದೃಷ್ಟಿ ಆಡಳಿತ ವ್ಯವಸ್ಥೆಗೆ ಮಾದರಿ- ಎಡಿಸಿ ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
      ನಾಡಪ್ರಭು ಕೆಂಪೇಗೌಡರ ದೂರದೃಷ್ಠಿ, ಆಡಳಿತ ವ್ಯವಸ್ಥೆಗೆ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

- Advertisement - 

ಕೆಂಪೇಗೌಡರು ಕೇವಲ ನಾಡಪ್ರಭು ಮಾತ್ರವಲ್ಲದೇ ಧರ್ಮಪ್ರಭುವೂ ಆಗಿದ್ದರು. ದೂರದೃಷ್ಠಿಯ ನಾಯಕ, ಅಪೂರ್ವ ಕನಸುಗಾರ, ಸಮರ್ಥ ಆಡಳಿತಗಾರರಾಗಿದ್ದ ಅವರು ಬೆಂಗಳೂರು ಜಾಗತಿಕ ನಗರವಾಗುವಲ್ಲಿ ಮೂಲ ಕಾರಣಕರ್ತರಾಗಿದ್ದಾರೆ ಎಂದರು.

ಬೆಂಗಳೂರು ಎಲ್ಲ ಧರ್ಮಗಳಿಗೆ, ಎಲ್ಲ ಭಾಷಿಕರಿಗೆ ಸುರಕ್ಷಿತ ಸ್ಥಳ. ಹಾಗಾಗಿ ಬೆಂಗಳೂರು ಶೈಕ್ಷಣಿಕ, ಔದ್ಯೋಗಿಕ, ಆರೋಗ್ಯ ಸೇರಿದಂತೆ ಎಲ್ಲ ವಲಯಗಳಲ್ಲಿಯೂ ತನ್ನದೇಯಾದ ಛಾಪು ಮೂಡಿಸಿದ್ದು, ಜಗತ್ತಿಗೆ ಸಿಲಿಕ್ಯಾನ್  ವ್ಯಾಲಿಯಾಗಿದೆ ಎಂದು ಹೇಳಿದರು.

- Advertisement - 

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಮಾತನಾಡಿ, ಬೆಂಗಳೂರು ಜಾಗತೀಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಐಟಿ ಬಿಟಿ ಕಂಪನಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಕೆಂಪೇಗೌಡರು ವೃತ್ತಿಯ ಹೆಸರಿನಲ್ಲಿ ವಿವಿಧ ಪೇಟೆಗಳನ್ನು ನಿರ್ಮಿಸಿದ್ದರು. ಈ ಪೇಟೆಗಳೆಲ್ಲವೂ ಪ್ರಸ್ತುತ ಇಂಡಸ್ಟ್ರೀಯಲ್ ಏರಿಯಾಗಳಾಗಿವೆ ಎಂದು ತಿಳಿಸಿದ ಅವರು, ಮಹಾ ಪುರುಷರ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೇ ಎಲ್ಲ ಸಮುದಾಯದವರು ಸೇರಿ ಆಚರಣೆ ಮಾಡಬೇಕು.ಇಂದಿನ ಯುವ ಪೀಳಿಗೆ ಮಹನೀಯರ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಬೆಂಗಳೂರು ನಗರವನ್ನು ವಿಶ್ವವಿಖ್ಯಾತ ನಗರವಾಗಿ ನಿರ್ಮಾಣ ಮಾಡಿದವರು ಕೆಂಪೇಗೌಡರು.  ಅವರ ಹೆಸರಿನಲ್ಲಿ ರಾಜ್ಯದಲ್ಲಿ 53 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.  ಅವರ ದೂರದೃಷ್ಟಿಯ ಯೋಜನೆಗಳು ಇಂದಿನ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ ಎಂದರು.

ಸಾಹಿತಿ ಹಾಗೂ ನಿವೃತ್ತ  ಪ್ರಾಂಶುಪಾಲ ಡಾ. ಸಿ. ಶಿವಲಿಂಗಪ್ಪ ಉಪನ್ಯಾಸ ನೀಡಿ, ಬೆಂಗಳೂರು ನಗರ ನಿರ್ಮಾತೃ   ಕೆಂಪೇಗೌಡರು ಧೀರೋದಾತ್ತ  ನಾಯಕ, ದೂರದರ್ಶಿತ್ವವುಳ್ಳ, ರಾಜಕೀಯ ಮುತ್ಸದ್ದಿ ಹಾಗೂ ಆರ್ಥಿಕ ಚಿಂತಕರೂ ಹೌದು. 16ನೇ ಶತಮಾನದಲ್ಲಿ ಅತ್ಯುನ್ನತ ಮಾದರಿಯ ಯೋಜನಾ ಬದ್ಧ ಶೈಲಿ ನಗರವಾಗಿ ವಿಸ್ತರಣೆ ಮಾಡಿದ ಬೆಂಗಳೂರು ನಗರ ಸಂಸ್ಥಾಪಕ ಕೆಂಪೇಗೌಡರು,

ನಾಡು ಮತ್ತು ಜನರ ಹಿತರಕ್ಷಣೆಗಾಗಿ ಕೆರೆ, ಕೋಟೆ ಮತ್ತು ಗುಡಿಗೋಪುರಗಳ ನಿರ್ಮಾಣದ ಜೊತೆಗೆ ನಗರ ಹಾಗೂ ಕೃಷಿ ನೀರಿನ ಸಂಪನ್ಮೂಲ ವ್ಯವಸ್ಥೆ ಮತ್ತು ವಾಣಿಜ್ಯ ನಗರವಾಗಿ ಅಭಿವೃದ್ಧಿ ಮಾಡಿದರು. ರಕ್ಷಣೆ ಮತ್ತು ಆಡಳಿತ ವ್ಯವಸ್ಥೆಯಿಂದ ಇಡೀ ನಾಡು ಶಾಂತಿ ಮತ್ತು ಸುಭೀಕ್ಷವಾಗಿರುವಂತೆ ಆಳ್ವಿಕೆ ಮಾಡಿದ ಜನಹಿತ ಕಾರ್ಯಗಳಿಂದ ಲೋಕ ಪ್ರಸಿದ್ಧಿಯಾದ ಮಾನವತಾವಾದಿ ಕೆಂಪೇಗೌಡ ನಾಡಪ್ರಭುಗಳು ಅಜರಾಮರರಾಗಿದ್ದಾರೆ ಎಂದು ಹೇಳಿದರು.

ಕೆಂಪೇಗೌಡರ ಆತ್ಮಸ್ಥೈರ್ಯ, ಪರಿಶ್ರಮ ಬದ್ಧತೆ, ನೈತಿಕತೆ, ಸ್ವಾಭಿಮಾನ, ಜನಹಿತ ಇಚ್ಚಾಶಕ್ತಿ, ಅನುಪಮ ವ್ಯಕ್ತಿತ್ವದ ನಾಯಕತ್ವದ ಒಳನೋಟಗಳು ಈಗಿನ ಜನಪ್ರತಿನಿಧಿಗಳಿಗೆ ಮತ್ತು ಆಡಳಿತಗಾರರಿಗೆ ಪ್ರೇರಕಶಕ್ತಿಯಾಗಿ ಮಾದರಿಯಾಗಬೇಕಾಗಿದೆ ಎಂದು ಹೇಳಿದರು.

ಪ್ರಸ್ತುತ ವಿಶ್ವವಿಖ್ಯಾತವಾಗಿರುವ ಬೆಂಗಳೂರು, ಕರ್ನಾಟಕ ರಾಜಧಾನಿ. ಉದ್ಯಾನ ಹಾಗೂ ವಾಣಿಜ್ಯ ನಗರಿ ಹಾಗೂ ಮಾಯಾನಗರಿ ಎಂಬ  ಪ್ರತೀತಿ ಬೆಂಗಳೂರಿಗಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜ್ಞಾನ ಮತ್ತು ಕೌಶಲ್ಯಗಳ ಹಾಗೂ ಐಟಿ, ಬಿ.ಟಿ ಗಳ ಕೇಂದ್ರ, ಆರ್ಥಿಕ ಶಕ್ತಿಯ ತೊಟ್ಟಿಲು, ಸಾಂಸ್ಕøತಿಕ, ಸೃಜನಶೀಲ, ಚಲನಶೀಲ ಪರಂಪರೆಯ ಪ್ರಯೋಗಶೀಲತೆಯ ಸೀಮೆ ಹಾಗೂ ಪ್ರಜಾಪ್ರಭುತ್ವದ ಆಡಳಿತಾತ್ಮಕ ಅಧಿಕಾರದ ಮೈದಾನವಾಗಿದೆ. ಬಹುಭಾಷೆಗಳ, ಬಹು ಸಂಸ್ಕøತಿಗಳ, ಬಹುವೃತ್ತಿಗಳ ಬಹುತ್ವಗಳೂರು, ಭಾರತ ಪುಟ್ಟ ಪ್ರಪಂಚ. ಸಮತೋಲನವಾದ ಹವಾಗುಣಗಳಿಂದ ಕೂಡಿದ ರಕ್ಷಿತ  ಪ್ರದೇಶ ಬೆಂಗಳೂರು ಎಂದು ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವಿಧ  ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ.ಗುರುನಾಥ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ. ಚೇತನ್, ಕಾರ್ಯದರ್ಶಿ ಎಸ್.ಜಗನ್ನಾಥ, ಗೌರವಾಧ್ಯಕ್ಷ ಪ್ರೊ.ಎನ್.ಈರಣ್ಣ, ಮುಖಂಡರಾದ ಕರಿಯಪ್ಪ, ರಮೇಶ ಗೌಡ, ಹನುಮಂತಪ್ಪ,

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು. ಬೋಸೆದೇವರಹಟ್ಟಿಯ ಮಂಜಣ್ಣ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ನಿರೂಪಿಸಿದರು.

 

Share This Article
error: Content is protected !!
";