ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ದೇಶಭಕ್ತರ ಸಮೂಹ. ದೇಶಸೇವೆಯನ್ನೇ ಧ್ಯೇಯವಾಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಸಂಘದ ವಿರುದ್ಧ ಕಾಂಗ್ರೆಸ್ ನಾಯಕರು ದ್ವೇಷ ರಾಜಕಾರಣ ಮಾಡುತ್ತಿರುವುದು ಖೇಧಕರ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ, 2025ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ 518 ಸ್ಥಳಗಳಲ್ಲಿ ಆಯೋಜಿಸಲಾದ ಪಥಸಂಚಲನದಲ್ಲಿ ಒಂದು ಕಡೆಯೂ ಯಾವುದೇ ಅಹಿತಕರ ಘಟನೆ ನಡೆಯದಿರುವುದನ್ನು ಸ್ವತಃ ರಾಜ್ಯದ ಗೃಹ ಸಚಿವರೇ ಉಲ್ಲೇಖಿಸಿದ್ದಾರೆ.
ಆರ್ ಎಸ್ಎಸ್ ವಿರುದ್ಧ ಸದಾ ವಿಷಕಾರುವ, ಪಥಸಂಚಲನದಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ ಎಂದು ಅಪಪ್ರಚಾರ ಮಾಡುವ ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ಸರ್ಕಾರದ ಗೃಹ ಸಚಿವರೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ನೀಡಿರುವ ವರದಿಯನ್ನು ಓದಿ. ಇನ್ನಾದರೂ ನಿಮ್ಮ ನಿಲುವನ್ನು ಬದಲಿಸಿಕೊಳ್ಳಿ ಎಂದು ಸೋಮಣ್ಣ ತಾಕೀತು ಮಾಡಿದ್ದಾರೆ.
ದೇಶ ಪ್ರೇಮ, ಶಿಸ್ತಿಗೆ ಹೆಸರಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ದೇಶಸೇವೆಯ ಕಾರ್ಯಗಳು ಯುವಪೀಳಿಗೆಗೆ ಮಾದರಿ ಎಂದು ಅವರು ತಿಳಿಸಿದ್ದಾರೆ.

