ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲೋಕಸೇವಾನಿರತ ಡಿ. ಕೊಂಗಾಡಿಯಪ್ಪ ನವರು ದೊಡ್ಡಬಳ್ಳಾಪುರ ತಾಲೂಕಿನ ಜನಸಾಮಾನ್ಯರ ಕಲ್ಯಾಣಕ್ಕಾಗಿ ಸತತವಾಗಿ ಶ್ರಮಿಸಿದರು. ಶಿಕ್ಷಣ ಹಾಗೂ ನೆಯ್ಗೆ ಉದ್ಯಮಕ್ಕೆ ಅವರು ನೀಡಿದ ಕೊಡುಗೆ ಅಪಾರ.
ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಿ ಅವರ ಅಬ್ಯುದಯಕ್ಕೆ ಕಾರಣರಾದವರು. ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಸೇರಿದಂತೆ ಹಲವಾರು ದೇವಾಲಯಗಳ ಧರ್ಮದರ್ಶಿಗಳಾಗಿ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಎಂದು ವಿಕಾಸ ಪ್ರಶಿಕ್ಷಣ ಕೇಂದ್ರದಸಂಚಾಲಕ ರೇಣುಕಾ ರವರು ಹೇಳಿದರು.
ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಕಾಸ ಸಂಸ್ಥೆ ಸಹಯೋಗದಲ್ಲಿ ದರ್ಗಾ ಜೋಗಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆದ ಕೊಂಗಾಡಿಯಪ್ಪ ನವರ ಜನ್ಮದಿನಾಚರಣೆ ಅಂಗವಾಗಿ ನಡೆದ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೊಂಗಾಡಿಯಪ್ಪ ನವರು ಯಾವುದೇ ಆಸ್ತಿ ಅಧಿಕಾರಕ್ಕಾಗಿ ಆಸೆ ಪಡದೆ ಊರಿನ ಜನತೆಯ ಹಿತಕ್ಕಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.
ತಾಲೂಕಿನ ದೂರದ ಗ್ರಾಮಗಳಿಂದ ಪರೀಕ್ಷೆ ಬರೆಯಲು ಬರುತ್ತಿದ್ದ ನೂರಾರು ವಿದ್ಯಾರ್ಥಿಗಳಿಗೆ ಊರಿನ ದಾನಿಗಳಿಂದ ದವಸ ದಾನ್ಯಗಳನ್ನು ಸಂಗ್ರಹಿಸಿ ದಾಸೋಹ ಹಾಗೂ ವಸತಿ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರು. ಯಾವುದೇ ಅಧಿಕ್ಕಾರಕ್ಕಾಗಿ ಆಸೆ ಪಡದೆ ಸರಳ ಜೀವನ ಹಾಗೂ ನಿಸ್ವಾರ್ಥ ಸೇವೆ ಮಾಡುತ್ತಿದ್ದ ಕೊಂಗಾ ಡಿಯಪ್ಪನವರನ್ನು ಊರಿನ ಜನತೆ ಪ್ರೀತಿಯಿಂದ ಕಾಕಣ್ಣ ಎಂದು ಕರೆಯುತ್ತಿದ್ದುದು ಗಮನಾರ್ಹ ಸಂಗತಿ.
ಜನ ಸಾಮಾನ್ಯರ ಜೊತೆ ಸದಾ ಒಡನಾಟದಲ್ಲಿದ್ದ ಕೊಂಗಾಡಿಯಪ್ಪನವರು ತಮ್ಮ ಬಳಿಗೆ ಬರುವ ಎಲ್ಲರಿಗೂ ಓದ್ರೋ… ಓದ್ರೋ.. ಕೆಟ್ಟೋಗಬ್ಯಾಡ್ರಿ.. ಚನ್ನಾಗಿ ಓದಿ ವಿದ್ಯಾವಂತರಾಗಿ ಊರಿಗೆ ಒಳ್ಳೆಯ ಹೆಸರನ್ನು ತನ್ನಿ ಎಂಬ ಅವರ ಮಾತು ಕೊಂಗಾಡಿಯಪ್ಪನವರಿಗೆ ಶಿಕ್ಷಣದ ಬಗ್ಗೆ ಇದ್ದ ಕಾಳಜಿಯನ್ನು ತೋರುತ್ತದೆ. ಇವರ ಸಾಮಾಜಿಕ ಜನಪರ ಸೇವೆಯನ್ನು ಗುರುತಿಸಿ ಆಗಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಕೊಂಗಾಡಿಯಪ್ಪ ನವರಿಗೆ ಲೋಕಸೇವಾನಿರತ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದರ್ಗಾಜೋಗಿಹಳ್ಳಿ ಸರ್ಕಾರಿ ಶಾಲೆಯ ಮುಕ್ಯೋಪಾಧ್ಯಾಯ ಕಣ್ಣಯ್ಯ, ಶಿಕ್ಷಕರಾದ ಹೆಚ್. ಎನ್. ಪ್ರಕಾಶ್,ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ. ಪಿ. ಆಂಜನೇಯ, ಕಜಪ ಸದಸ್ಯ ವೆಂಕಟರಾಜು, ಶ್ರೀನಿವಾಸ್, ಕಾರ್ಯಕ್ರಮದ ಸಂಚಾಲಕರಾದ ಶ್ರಾವಣಿ, ಪಲ್ಲವಿ, ಕವಿತಾ, ಚಂದ್ರಕಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

