ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರಅಣ್ಣನನೆನಪು ಕೃತಿಯು ಕುವೆಂಪು ಅವರ ಜೀವನ, ವ್ಯಕ್ತಿತ್ವ ಮತ್ತು ಅವರ ಸುತ್ತಲಿನ ಪರಿಸರದ ಸ್ವಾರಸ್ಯಕರ ವಿವರಗಳನ್ನು ನೀಡುತ್ತದೆ ಎಂದು ಶಿಕ್ಷಕ ಎಸ್.ಟಿ.ಶಿವಪ್ರಸಾದ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ನಗರದ ಸರಸ್ವತಿ ಪ್ರೌಢಶಾಲೆಯಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪುರವರ ಜೀವನ ಕುರಿತಾದ ಅನೇಕ ಘಟನೆಗಳನ್ನು ಅಣ್ಣನ ನೆನಪು ಕೃತಿಯಲ್ಲಿ ಪೂರ್ಣಚಂದ್ರ ತೇಜಸ್ವಿ ದಾಖಲಿಸಿದ್ದಾರೆ. ಕುವೆಂಪು ಅವರ ವಸ್ತುನಿಷ್ಠ ಜೀವನ ಶೈಲಿಯನ್ನು ಪೂರ್ಣಚಂದ್ರ ತೇಜಸ್ವಿಯವರಲ್ಲೂ ಕಾಣಬಹುದಾಗಿದೆ. ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರ ಬದುಕು ಎಲ್ಲಾ ಕನ್ನಡಿಗರಿಗೂ ಆದರ್ಶವಾಗಿದೆ ಎಂದರು.
ಪೂರ್ಣಚಂದ್ರ ತೇಜಸ್ವಿಯವರ ಕಥೆ, ಕಾದಂಬರಿ, ವಿಜ್ಞಾನ, ಛಾಯಾಗ್ರಹಣ, ಕೃಷಿ, ಸಾಮಾಜಿಕ ಚಳುವಳಿಗಳು, ಓದುಗರಲ್ಲಿ ಮಾನವೀಯತೆ ಮತ್ತು ಪರಿಸರದ ಬಗೆಗೆ ಆಸಕ್ತಿಯನ್ನು ಮೂಡಿಸುತ್ತವೆ. ಪರಿಸರದ ಬಗೆಗಿನ ಕುತೂಹಲಗಳು, ವಿಜ್ಞಾನ ಮತ್ತು ನಂಬಿಕೆಗಳ ನಡುವಿನ ಸಂಬಂಧ, ಮತ್ತು ನಿಸರ್ಗದ ಬಗ್ಗೆ ವೈಜ್ಞಾನಿಕ ಮನೋಭಾವವನ್ನು ತೇಜಸ್ವಿಯವರ ಬದುಕು ಮತ್ತು ಬರಹಗಳುನೀಡುತ್ತವೆ ಎಂದರು.
ಕೃತಕ ಬುದ್ದಿ ಮತ್ತೆ ಕುರಿತು ಮಾತನಾಡಿದ ವಿಜ್ಞಾನ ಶಿಕ್ಷಕ ಎಚ್.ಆರ್.ಸ್ವಾಮಿ, ಕೃತಕ ಬುದ್ಧಿಮತ್ತೆ ಮುಂಚೂಣಿಯಲ್ಲಿ ಬರುತ್ತಿರುವ ಇಂದಿನ ದಿನಗಳಲ್ಲಿ ಅದರ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಕೃತಕ ಬುದ್ಧಿಮತ್ತೆಯ ಅನಗತ್ಯ ಬಳಕೆ ಅಪಾಯಕಾರಿ ಎಂಬುದನ್ನು ತಿಳಿಯಬೇಕು.ವಿಜ್ಞಾನದ ಆವಿಷ್ಕಾರಗಳು ನಿಸರ್ಗ ಮತ್ತು ಮನುಕುಲದ ಒಳಿತಿಗಾಗಿ ಬಳಕೆಯಾಗಬೇಕಾಗಿದೆ. ಆಗ ಮಾತ್ರವೇ ಮನುಕುಲದ ಬೆಳವಣಿಗೆಗೆ ಸಾಧ್ಯವಾಗುತ್ತದೆ. ಈಗ ಜಗತ್ತು ಬದಲಾಗುತ್ತಿದೆ. ಇದಕ್ಕೆ ಅನುಗುಣವಾಗಿ ನಾವು ಬದಲಾವಣೆ ಆಗಬೇಕಾಗಿದೆ. ಆಧುನಿಕ ತಂತ್ರಜ್ಞಾನವು ಜೀವನದ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಉಂಟು ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಸರಸ್ವತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಕೆ.ಸಂಪತ್ತಕುಮಾರ್, ಶಿಕ್ಷಕರುಗಳಾದ ಅನಿಲ್ ಕುಮಾರ್, ನಿತಿನ್ ಕುಮಾರ್, ಧನಲಕ್ಚ್ಮಿ, ಸಚಿನ್, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎ.ಜಯರಾಮ್, ಪ್ರತಿನಿಧಿ ರಂಗಸ್ವಾಮಯ್ಯ, ಕನ್ನಡ ಜಾಗೃತ ಪರಿಷತ್ತು ಕಾರ್ಯದರ್ಶಿ ಡಿ.ಪಿ.ಆಂಜನೇಯ, ಸಹಕಾರ್ಯದರ್ಶಿ ಸೂರ್ಯನಾರಾಯಣ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ನವೋದಯ ವಿದ್ಯಾಲಯ ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ, ಕಲಾವಿದರುಗಳಾದ ಮುನಿರತ್ನಮ್ಮ, ದರ್ಗಾಜೋಗಿಹಳ್ಳಿ ಮಲ್ಲೇಶ್, ರಾಮಕೃಷ್ಣ, ಸೆಲ್ವಂರಾಜು ಮುಂತಾದವರು ಭಾಗವಹಿಸಿದ್ದರು.

