ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲೂಕು ಕಲಾವಿದರ ಸಂಘದ ವತಿಯಿಂದ ಮೂರು ದಿನಗಳ ಕಾಲ ನಗರದ ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿ ನಡೆಯಲಿರುವ 70ನೇ ಕನ್ನಡ ರಾಜ್ಯೋತ್ಸವ ಹಾಗೂ ಕಲಾವಿದರ ಸಾಂಸ್ಕೃತಿಕ ಹಬ್ಬ-2025 ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ ನೀಡಲಾಯಿತು.
ನಗರದ ವಿನಾಯಕ ನಗರದ ಕಲಾಭವನದ ಬಳಿಯಿಂದ ಡಾ.ರಾಜ್ಕುಮಾರ್ ಕಲಾ ಮಂದಿರದವರೆಗೆ, ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ ವೀರಗಾಸೆ, ಡೊಳ್ಳು ಕುಣಿತ, ಗೊರವನ ಕುಣಿತ, ಗಾರುಡಿ ಗೊಂಬೆಗಳು, ತಮಟೆ ವಾದ್ಯ, ಮಂಗಳ ವಾದ್ಯ ಮೊದಲಾದ ಜಾನಪದ ಕಲಾ ತಂಡಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಕಲಾವಿದರ ವಿವಿಧ ವೇಷ ಭೂಷಣಗಳು ಗಮನ ಸೇಳೆದವು. ಕನ್ನಡದ ಶಾಲುಗಳನ್ನು ಧರಿಸಿ ಭಾವುಟ ಹಿಡಿದ ನೂರಾರು ಕಲಾವಿದರು ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಕಲೆಯಿಂದ ಸಾಂಸ್ಕೃತಿಕ ಬೆಸುಗೆ :
ಡಾ.ರಾಜ್ ಕುಮಾರ್ ಕಲಾ ಮಂದಿರದದಲ್ಲಿ ಸಮಾರಂಭವನ್ನು ಉದ್ಘಾಟಿಸಿದ ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ಪೀಠಾಧ್ಯಕ್ಷ ದಿವ್ಯಜ್ಞಾನಾನಂದ ಸ್ವಾಮಿ ಮಾತನಾಡಿ, ನಮ್ಮ ಕಲೆ ಸಂಸ್ಕೃತಿಗಳ ಉಳಿವಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿದ್ದು, ಕಲೆಯಿಂದ ಸಾಂಸ್ಕೃತಿಕ ಬೆಸುಗೆ ಯಾಗಲಿದೆ. ಪೌರಾಣಿಕ ಪಾತ್ರಗಳು ನಮ್ಮ ಬದುಕಿನ ಸಂವೇದನೆಯನ್ನು ಬಿಂಬಿಸುತ್ತದೆ. ಕಲೆಯಿಂದ ನಮ್ಮ ಮನಸ್ಸಿನ ದುಗುಡಗಳು ಮರೆಯಾಗಿ ಮನಸ್ಸು ಪ್ರಪುಲ್ಲವಾಗುತ್ತದೆ. ಇಂತಹ ಕಲೆಗಳಿಗೆ ಉತ್ತೇಜನ ನೀಡುವಲ್ಲಿ ನಿರತವಾಗಿರುವ ಕಲಾವಿದರ ಸಂಘದ ಕಾರ್ಯ ಹಾಗೂ ಇಂದಿನ ಸಮಾರಂಭ ಅಭಿನಂದನೀಯ ಎಂದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಇಂದಿನ ಪೀಳಿಗೆಗೆ ನಾವು ಕಲೆಯ ಬಗ್ಗೆ ಅಭಿರುಚಿ ಮೂಡಿಸಿ, ಕಲಿಸದಿದ್ದರೆ ನೈಕ ಕಲೆಗಳು ನೇಪಥ್ಯಕ್ಕೆ ಸರಿಯುತ್ತವೆ. ಈ ದಿಸೆಯಲ್ಲಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರ ಪಾತ್ರ ಮಹ್ವದ್ದಾಗಿದೆ. ಅಂತೆಯೇ ಸಮುದಾಯದ ಉತ್ತೇಜನ ಬೇಕಿದೆ. ಕಲಾವಿದರು, ಮಾಸಾಶನಕ್ಕೆ ಮಾತ್ರ ಸೀಮತವಾಗದೇ ಎಲ್ಲಾ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಿದೆ ಎಂದರು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.
ಕಾರ್ಯನಕ್ರಮದಲ್ಲಿ ಹಿರಿಯ ಕಲಾವಿದರಾದ ಶಿವರಾಜ್, ನಟ ವೀಡಾ ಸುಧೀರ್, ಕೆ.ಎನ್.ತಮ್ಮಣ್ಣ, ತಾಲೂಕು ಕಲಾವಿದರ ಸಂಘದ ಗೌ.ಅಧ್ಯಕ್ಷ ಎಸ್.ರಾಮಮೂರ್ತಿ, ಪ್ರಧಾನ ಕಾರ್ಯನದರ್ಶಿ ಬಿ.ಚಂದ್ರಶೇಖರ್, ಉಪಾಧ್ಯಕ್ಷರಾದ ಎಚ್.ಪ್ರಕಾಶ್ ರಾವ್, ನರಸಿಂಹಯ್ಯ, ಖಜಾಂಚಿ ಎಚ್.ಮುನಿಪಾಪಯ್ಯ, ಸಹ ಕಾರ್ಯನದರ್ಶಿ ಎ.ಮಂಜುನಾಥ್, ಜಂಟಿ ಕಾರ್ಯುದರ್ಶಿ ಮುದ್ದುಕೃಷ್ಣಪ್ಪ ಸಲಹಾ ಸಮಿತಿಯ ಎಂ.ವೆಂಕಟರಾಜು ಸೇರಿದಂತೆ ಕಲಾವಿದರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

