ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವನಾಡಿನಲ್ಲಿ ಹರಿಯಲಿದೆ ಹಾಲಿನ ಹೊಳೆ! ‘ಕ್ಷೀರ‘ ಪೈಲಟ್ ಯೋಜನೆಗೆ ಚಾಲನೆ – ಸ್ವಾವಲಂಬಿ ಬದುಕು ರೂಪಿಸುವತ್ತ ದೃಢ ಹೆಜ್ಜೆಗಳು ಇಡಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಜಲಕ್ರಾಂತಿ, ಹಸಿರುಕ್ರಾಂತಿಯ ಬಳಿಕ ಬಸವನಾಡಿನಲ್ಲಿ ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆಯಲಾಗುತ್ತಿದೆ. ಈ ಸಂಬಂಧ ಇಂದು ಮೊದಲ ಹೆಜ್ಜೆ ಇರಿಸಲಾಗಿದೆ.
ತಿಪಟೂರಿನ ‘ಅಕ್ಷಯಕಲ್ಪ’ ಮಾದರಿಯಾಗಿದ್ದು, ಅಲ್ಲಿನ ರೈತರು ವೈಜ್ಞಾನಿಕ ಪಶುಪಾಲನೆಯಿಂದ ಮಾಸಿಕ 1.5–2 ಲಕ್ಷದ ಆದಾಯ ಗಳಿಸುತ್ತಿದ್ದಾರೆ. ಈ ಯಶಸ್ಸು ವಿಜಯಪುರ ಜಿಲ್ಲೆಯ ರೈತರಿಗೂ ತಲುಪಬೇಕು ಎಂಬ ಗುರಿಯೊಂದಿಗೆ ಬಿಎಲ್ಡಿಇ, ಕೃಷಿಕಲ್ಪ ಮತ್ತು ಅಕ್ಷಯಕಲ್ಪ ಸಹಯೋಗದಲ್ಲಿ ‘ಕ್ಷೀರ’ ಪೈಲಟ್ ಯೋಜನೆಗೆ ಚಾಲನೆ ನೀಡಿದ್ದು ಸಂತಸ ತರಿಸಿದೆ ಎಂದು ಸಚಿವ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಬಲೇಶ್ವರ ಮತ ಕ್ಷೇತ್ರದ 5 ಗ್ರಾಮಗಳಲ್ಲಿ ಜಾರಿಯಾಗುತ್ತಿರುವ ಈ ಯೋಜನೆ ಭವಿಷ್ಯದಲ್ಲಿ ಸಮಗ್ರ ಬಸವನಾಡಿಗೆ ವಿಸ್ತರಿಸುವುದರಿಂದ ಹಾಲಿನ ಹೊಳೆಯೇ ಹರಿಯಲಿದೆ!
ಇಂದಿನ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಪದ್ಮಶ್ರೀ ಪ್ರಶಾಂತ್ ಪ್ರಕಾಶ್, ಅಕ್ಷಯ ಕಲ್ಪ ಆರ್ಗ್ಯಾನಿಕ್ ಸಂಸ್ಥಾಪಕ ಶಶಿಕುಮಾರ, ಕೃಷಿಕಲ್ಪ ಫೌಂಡೇಶನ್ CEO ಸಿ.ಎಂ. ಪಾಟೀಲ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಪಂ ಸಿಇಒ ರಿಷಿ ಆನಂದ್, BLDE ಡೀಮ್ಡ್ ವಿ.ವಿ. ಕುಲಾಧಿಪತಿ ಬಸನಗೌಡ ಪಾಟೀಲ, BLDE ಸಂಸ್ಥೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಹೈನೋದ್ಯಮದಲ್ಲಿ ಆಸಕ್ತಿಯುಳ್ಳ ಸಹಸ್ರಾರು ರೈತರು, ಕೃಷಿಕರು ಭಾಗವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ನಡೆದ ಕಾರ್ಯಾಗಾರಗಳು, ಗೋಷ್ಠಿಗಳಲ್ಲಿ ಹೈನುಗಾರಿಕೆಯ ವೈಜ್ಞಾನಿಕ ವಿಧಾನಗಳು, ಪಶುಪಾಲನೆಗೆ ಸಂಬಂಧಿಸಿದ ನವೀನ ತಂತ್ರಜ್ಞಾನ ಹಾಗೂ ಆದಾಯವರ್ದಕ ಕ್ರಮಗಳ ಕುರಿತು ರೈತರಿಗೆ , ರೈತ ಮಹಿಳೆಯರಿಗೆ ಸೂಕ್ತ ಶಿಕ್ಷಣ ನೀಡಲಾಯಿತು.
ಇದು ಹಾಲು ಸಂಗ್ರಹ ಯೋಜನೆಯಲ್ಲ – ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವ ಸಮಗ್ರ ಚಳವಳಿ! ಎಂದು ಸಚಿವ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು.

