ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರವಾನಿಗೆ ಇಲ್ಲದ ರಸಗೊಬ್ಬರ ದಾಸ್ತಾನು ಮಳಿಗೆ ಮೇಲೆ ಕೃಷಿ ಇಲಾಖೆಯ ಬೆಂಗಳೂರು ಹಾಗೂ ಚಿತ್ರದುರ್ಗ ಜಾರಿದಳ ವಿಭಾಗದವರು ದಾಳಿ ನಡೆಸಿ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ.
ಸಾರ್ವಜನಿಕ ದೂರಿನ ಮೇರೆಗೆ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ದೊಡ್ಡ ಆಲದಘಟ್ಟ ಗ್ರಾಮದಲ್ಲಿ ಬೆಂಗಳೂರು ಜಾರಿದಳ ವಿಭಾಗದ ಜಂಟಿ ಕೃಷಿ ನಿರ್ದೇಶಕ ಸಿ.ವಿದ್ಯಾನಂದ, ಉಪ ಕೃಷಿ ನಿರ್ದೇಶಕ ಟಿ.ಎನ್.ಅಶೋಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಗ್ರಾಮದ ಕೆ.ಬಿ.ನಟರಾಜ್ ಇವರ ಮಳಿಗೆಯನ್ನು ತನಿಖೆ ಮಾಡಿದ ಸಂದರ್ಭದಲ್ಲಿ ಅನಧಿಕೃತವಾಗಿ ರಸಗೊಬ್ಬರ (ಎಂ.ಸಿ.ಎಫ್ ಸಂಸ್ಥೆಯ) 391 ಚೀಲಗಳು ಹಾಗೂ
20:20:0:13 ಕಾಂಪ್ಲೆಕ್ಸ್ ರಸಗೊಬ್ಬರ (ಎಂ.ಸಿ.ಎಫ್ ಸಂಸ್ಥೆಯ) 272 ಚೀಲಗಳು ಹಾಗೂ ಮೆಕ್ಕೆಜೋಳ ಬಿತ್ತನೆ ಬೀಜದ ದಾಸ್ತಾನು ಒಟ್ಟು 16.76 ಕ್ವಿಂಟಾಲ್ನಷ್ಟು ದಾಸ್ತಾನನ್ನು ಶೇಖರಿಸಿ ಯಾವುದೇ ಮಾರಾಟ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಈ ದಾಸ್ತಾನನ್ನು ರಸಗೊಬ್ಬರ ಹಾಗೂ ಬಿತ್ತನೆ ಬೀಜದ ನಿಯಮಾವಳಿಗಳು ಹಾಗೂ ಅಗತ್ಯ ವಸ್ತುಗಳ ಅಧಿನಿಯಮ–1955ರ ಉಲ್ಲಂಘನೆಯಾಗಿರುವ ಮೇರೆಗೆ ಈ ದಾಸ್ತಾನನ್ನು ಮಹಜರ್ ಮೂಲಕ ಪಂಚರ ಸಮಕ್ಷಮದಲ್ಲಿ ಜಪ್ತು ಮಾಡಲಾಯಿತು ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ) ಜೆ.ಉಲ್ಫತ್ ಜೈಬಾ ತಿಳಿಸಿದ್ದಾರೆ.
ರಸಗೊಬ್ಬರ ಮತ್ತು ಬಿತ್ತನೆ ಬೀಜದ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ವಿಶ್ಲೇಷಣೆಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲದೇ ರಸಗೊಬ್ಬರ ನಿಯಂತ್ರಣ ಆದೇಶ–1985 ಹಾಗೂ ಬೀಜ ನಿಯಂತ್ರಣ ಆದೇಶ –1983 ಮತ್ತು ಅಗತ್ಯ ವಸ್ತುಗಳ ಅಧಿನಿಯಮ–1955ರ ಉಲ್ಲಂಘನೆ ಮೇರೆಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಚರಣೆ ವೇಳೆ ಚಿತ್ರದುರ್ಗ ವಿಭಾಗದ ಉಪ ಕೃಷಿ ನಿರ್ದೇಶಕ ಕೆ.ಎಸ್.ಶಿವಕುಮಾರ್, ಬೆಂಗಳೂರು ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ಎಂ.ರೇಣುಕಾ ಪ್ರಸನ್ನ, ಚಿತ್ರದುರ್ಗ ಕೃಷಿ ಇಲಾಖೆ ಜಾರಿದಳದ ಸಹಾಯಕ ಕೃಷಿ ನಿರ್ದೇಶಕರಾದ ಜೆ.ಉಲ್ಫತ್ ಜೈಬಾ, ಎಚ್.ವಿ.ನಾಗರಾಜ, ಚಿತ್ರದುರ್ಗ ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ.ರಾಮಕೃಷ್ಣ, ಹಿರೇಗುಂಟನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಧನರಾಜ್, ಮಳಿಗೆಯ ಮಾಲೀಕ ನಟರಾಜ್ ಹಾಗೂ ದೊಡ್ಡ ಆಲದಘಟ್ಟ ಗ್ರಾಮಸ್ಥರು ಇದ್ದರು.