ಚಂದ್ರವಳ್ಳಿ ನ್ಯೂಸ್, ಮೈಸೂರು:
ಈ ಬಾರಿಯ ದಸರಾ ಉತ್ಸವವನ್ನು ಬಾನು ಮುಷ್ತಾಕ್ ಅವರು ಉದ್ಘಾಟಿಸುತ್ತಿರುವುದರ ವಿರುದ್ಧ ತೀವ್ರ ಸ್ವರೂಪದ ಆಕ್ಷೇಪಣೆ ಎತ್ತಿರುವ ಪ್ರತಾಪ್ ಸಿಂಹ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.
ಮೈಸೂರಿನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಾಪ್ಗೆ ಚರಿತ್ರೆಯೇ ಗೊತ್ತಿಲ್ಲ, ಇತಿಹಾಸ ಓದುವುದೊಳಿತು, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ರನ್ನು ಮಹಾರಾಜರು ಅಂಬಾರಿ ಮೇಲೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಿದ್ದರು ಎಂದು ವಿಶ್ವನಾಥ್ ತಿಳಿಸಿದರು.
ಬಿಜೆಪಿ ಒಂದೇ ಅಂತಲ್ಲ, ಎಲ್ಲ ಪಕ್ಷಗಳು ಈ ವಿಷಯದ ಬಗ್ಗೆ ತಮಗೆ ತೋಚಿದನ್ನು ಹೇಳುತ್ತಿವೆ ಮತ್ತು ಬಾನು ಮುಷ್ತಾಕ್ಗೆ ಸಿಕ್ಕಿರುವ ಬೂಕರ್ ಪ್ರಶಸ್ತಿಗೆ ಅಪಮಾನ ಮಾಡುತ್ತಿವೆ. ಎರಡು ವರ್ಷಗಳ ಹಿಂದೆ ಅವರು ಕನ್ನಡಾಂಬೆಗೆ ಅವಮಾನ ಮಾಡಿದ್ದು ನಿಜ,
ಅವರು ಪತ್ರಬರೆದು ಸ್ಪಷ್ಟನೆ ನೀಡಿದ್ದರೆ ಅದು ಒಳ್ಳೆಯದು, ಆದರೆ ಅದನ್ನು ಮಾತ್ರ ಮುಂದೆ ಮಾಡಿದರೆ ಹೇಗೆ? ಅವರಿಂದ ಕನ್ನಡಭಾಷೆಗೆ ಸಿಕ್ಕಿರುವ ಸನ್ಮಾನವನ್ನು ಯಾಕೆ ಕಡೆಗಣಿಸಲಾಗುತ್ತಿದೆ ಎಂದು ವಿಶ್ವನಾಥ್ ಖಾರವಾಗಿ ಪ್ರಶ್ನಿಸಿದರು.

