ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣಾ ಅಕ್ರಮ ಶೂರ ಸಿದ್ದರಾಮಯ್ಯ! ನೀವು ನೈತಿಕತೆ ಉಳಿಸಿಕೊಂಡಿದ್ದರೆ ಮೊದಲು ರಾಜೀನಾಮೆ ಕೊಡಿ. ನೀವು ಅಧಿಕಾರದಲ್ಲಿರಲು ನಾಲಯಕ್ಕು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಹಿಂದೆ ಬಾದಾಮಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲುವ ಹಂತದಲ್ಲಿ ನೀವು 3000 ಮತಗಳನ್ನು ಖರೀದಿಸಿ ಅಕ್ರಮವಾಗಿ ಗೆಲುವು ಸಾಧಿಸಿದ್ದೀರಿ. ನಿಮ್ಮ ಅಕ್ರಮ ಗೆಲುವಿಗೆ ನಿಮ್ಮ ಆಪ್ತ ಸ್ನೇಹಿತ ಸಿ.ಎಂ. ಇಬ್ರಾಹಿಂ ಸಾಕ್ಷಿಯಾಗಿದ್ದಾರೆ.
“ಮಾಡುವುದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ” ಎನ್ನುವಂತೆ ಭ್ರಷ್ಟ ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಮಾಡುವುದೆಲ್ಲ ಬ್ರಹ್ಮಾಂಡ ಭ್ರಷ್ಟಾಚಾರ.
ಎಷ್ಟೇ ಆದರೂ ಚುನಾವಣಾ ಅಕ್ರಮ ಎಸಗುವುದು ಕಾಂಗ್ರೆಸ್ ಪಕ್ಷದ DNA ಯಲ್ಲಿಯೇ ರಕ್ತಗತವಾಗಿ ಬಂದಿದೆ. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಅಕ್ರಮ ಎಸಗಿ ಕೋರ್ಟ್‘ನಲ್ಲಿ ಮುಖಭಂಗ ಅನುಭವಿಸಿ, ಸಂಸತ್ ಸದಸ್ಯತ್ವ ಅನರ್ಹತೆಗೊಂಡು, ಸಂವಿಧಾನವನ್ನ ಕತ್ತಲಿನಲಿಟ್ಟು ದೇಶದಲ್ಲಿ “ತುರ್ತು ಪರಿಸ್ಥಿತಿ ಹೇರಿದ” ಕರಾಳ ಇತಿಹಾಸ ಕಾಂಗ್ರೆಸ್ ಪಕ್ಷದ್ದು ಮತ್ತು ಕಾಂಗ್ರೆಸ್ಸಿಗರದ್ದು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ರಾಹುಲ್ ಗಾಂಧಿ ಅವರೇ, 2018ರ ಬಾದಾಮಿ ಚುನಾವಣೆ ಮತ್ತು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸ್ವತಃ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ನಡೆಸಿರುವ ಚುನಾವಣಾ ಅಕ್ರಮಗಳಿಗೆ ನೀವು ಮತ್ತು ನಿಮ್ಮ ಪಕ್ಷದ ನಾಯಕರು ಮೊದಲು ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಜೆಡಿಎಸ್ ಒತ್ತಾಯಿಸಿದೆ.

