ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾತಿಗಣತಿ ಜಟಾಪಟಿಯ ಮಧ್ಯೆ ರಾಜ್ಯ ಸರ್ಕಾರ ಒಳಮೀಸಲಾತಿ ಸಮೀಕ್ಷೆಗೆ ಮುಂದಾಗಿದೆ. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಿಂದ ಗಣತಿ ನಡೆಯಲಿದೆ. ಸಿಬ್ಬಂದಿಗೆ ಬರೀ 3 ತಾಸು ತರಬೇತಿ ನೀಡಿ ಗಣತಿ ಕಾರ್ಯ ನಡೆದಿದ್ದು, ಎಡವಟ್ಟುಗಳ ಬಗ್ಗೆ ಎಡಗೈ-ಬಲಗೈ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಟೀಕಿಸಿದೆ.
ಬಹಳಷ್ಟು ಗಣತಿದಾರರ ಬಳಿ ಉತ್ತಮ ಗುಣಮಟ್ಟದ ಮೊಬೈಲ್ಗಳು ಇಲ್ಲದ ಕಾರಣ ಜಾತಿಗಣತಿ ಆ್ಯಪ್ ಡೌನ್ಲೋಡ್ ಮಾಡಿ ಸಮೀಕ್ಷೆ ನಡೆಸಲು ಸಮಸ್ಯೆಯಾಗುತ್ತಿದೆ. ಸರ್ವರ್ ಸಮಸ್ಯೆ ಸಹ ಎದುರಿಸುತ್ತಿದ್ದಾರೆ.
ಕೆಲವೆಡೆ ಗೊತ್ತಿದ್ದೂ ತಪ್ಪು ಮಾಹಿತಿ ದಾಖಲೆ ಸೇರುತ್ತಿದೆ. ಪರಿಶಿಷ್ಟ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ, ಜಾತಿಗಣತಿಯಲ್ಲಿನ ಪ್ರಶ್ನಾವಳಿಗಳಿಗೆ ಮಾಹಿತಿ ನೀಡಲು ಪರದಾಡುವಂತಾಗಿದೆ. ಹಾಗಾಗಿ ಪ್ರಶ್ನೆಗಳನ್ನು ಸರಳೀಕರಿಸುವ ಅಗತ್ಯವಿದೆ. ರಾಜ್ಯದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈ ಕುರಿತಂತೆ ಗಮನಹರಿಸಬೇಕಿದೆ ಎಂದು ಬಿಜೆಪಿ ತಾಕೀತು ಮಾಡಿದೆ.