ರೈತರ ಜೀವನಾಡಿ ವಿವಿ ಸಾಗರ ಡ್ಯಾಂ ಭರ್ತಿ
ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
2025 ಸಾಲಿನದಲ್ಲಿ 2ನೇ ಬಾರಿಗೆ ಮತ್ತು ಡ್ಯಾಂ ನಿರ್ಮಾಣದಿಂದ ಇಲ್ಲಿಯ ತನಕ ಅಂದರೆ ಇತಿಹಾಸದಲ್ಲಿ 4ನೇ ಬಾರಿಗೆ ವಾಣಿ ವಿಲಾಸ ಸಾಗರದ ಜಲಾಶಯ ಭರ್ತಿಯಾಗಿ ಕೋಡಿ ಹರಿದಿದೆ.
ಭದ್ರಾ ಪಂಪ್ ಹೌಸ್ ನಿಂದ ನಿತ್ಯ ವಾಣಿ ವಿಲಾಸ ಸಾಗರಕ್ಕೆ ಲಿಫ್ಟ್ ಮಾಡುತ್ತಿರುವ ನೀರು ಸೇರಿದಂತೆ ವೇದಾವತಿ ನದಿ ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆಯಿಂದಾಗಿ ಅಕ್ಟೋಬರ್-19ರಂದು ಭಾನುವಾರ ಬೆಳಿಗ್ಗೆ ವೇಳೆಗೆ 1945 ಕ್ಯೂಸೆಕ್ ಗೆ ನೀರಿನ ಒಳ ಹರಿವು ಇದ್ದು 130.00 ಅಡಿಗೆ ಏರಿಕೆಯಾಗುವ ಮೂಲಕ ಡ್ಯಾಂ ಭರ್ತಿಯಾಗಿ ಕೋಡಿ ಮೇಲೆ ನೀರು ಹೊರ ಹರಿಯುತ್ತಿದೆ.
ಹಿರಿಯೂರು ತಾಲೂಕಿನ ವಾಣಿ ವಿಲಾಸ ಪುರದ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಜಲಾಶಯ ಇದೇ ವರ್ಷ 2025ರ ಜನವರಿಯಲ್ಲಿ 3ನೇ ಬಾರಿಗೆ ಬಾರಿಗೆ ಭರ್ತಿಯಾಗಿತ್ತು.
ಇದೀಗ ವರ್ಷದ ಅಕ್ಟೋಬರ್-19ರಂದು ಎರಡನೇ ಬಾರಿಗೆ ವಿವಿ ಸಾಗರ ಭರ್ತಿಯಾಗಿದೆದು ವರ್ಷದಲ್ಲಿ ಎರಡನೇ ಬಾರಿಗೆ ಭರ್ತಿಯಾಗಿದ್ದು ಕೂಡ ಇತಿಹಾಸವಾಗಿದೆ. ಈ ಹಿಂದೆ ಎಂದೂ ವರ್ಷದಲ್ಲಿ ಎರಡು ಬಾರಿ ಡ್ಯಾಂ ಭರ್ತಿಯಾಗಿರಲಿಲ್ಲ. 2ನೇ ಬಾರಿ ತುಂಬಿ ಭರ್ತಿಯಾಗಿ ಕೋಡಿ ಹರಿದಿರುವ ಹೊಸ ದಾಖಲೆ ಆಗಿದೆ. ಡ್ಯಾಂ ಇತಿಹಾಸದಲ್ಲಿ ಇದುವರೆಗೂ ವರ್ಷದಲ್ಲಿ ಎರಡು ಬಾರಿ ತುಂಬಿದ ಇತಿಹಾಸವಿಲ್ಲ. ವಿವಿ ಸಾಗರ ಜಲಾಶಯ ನಾಲ್ಕನೇ ಬಾರಿಗೆ ಭರ್ತಿಯಾಗಿ ಹೊಸ ಇತಿಹಾಸ ಬರೆದಿದೆ.
ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಪುರದ ಸಮೀಪ ವೇದಾವತಿ ನದಿಗೆ ಅಡ್ಡಲಾಗಿ ಜಲಾಶಯವನ್ನು 1897 ರಲ್ಲಿ ಡ್ಯಾಂ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಯಿತು. 1907ರಲ್ಲಿ ಡ್ಯಾಂ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.
ಈ ಭಾಗವು ತೀವ್ರ ತರದ ಮಳೆ ಕೊರತೆಯಿಂದಾಗಿ ಪ್ರತಿ ವರ್ಷ ಬರ ಎದುರಿಸುತ್ತಿದ್ದರಿಂದ ಈ ಪ್ರದೇಶಗಳ ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಒದಗಿಸಲು ಜಲಾಶಯ ನಿರ್ಮಿಸಿದ ಕೀರ್ತಿ ಮೈಸೂರು ಮಹಾರಾಜರಿಗೆ ಸಲ್ಲುತ್ತದೆ.
ನೀರಿನ ಸಾಮರ್ಥ್ಯ:
ಒಟ್ಟು ಸಂಗ್ರಹ ಸಾಮರ್ಥ್ಯ: 30.422 ಟಿಎಂಸಿ (ಟಿಎಂಸಿ).
ಬಳಕೆಗೆ ಲಭ್ಯವಾಗುವ ನೀರು: 28.552 ಟಿಎಂಸಿ (ಟಿಎಂಸಿ).
ಗರಿಷ್ಠ ಮಟ್ಟ: 130 ಅಡಿ (30 ಟಿಎಂಸಿ). ಆದರೆ 135 ಅಡಿಗೂ ನೀರು ಸಂಗ್ರಹ ಮಾಡಬಹುದಾಗಿದೆ. 2022ರಲ್ಲಿ 135 ಅಡಿಯಷ್ಟು ನೀರು ಸಂಗ್ರಹ ಆಗಿತ್ತು.
ಉದ್ದೇಶ:
ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಮತ್ತು ಹೊಸದುರ್ಗ ತಾಲೂಕಿನ ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಹಿರಿಯೂರು ತಾಲೂಕಿನ ಸುಮಾರು 12,135 ಹೆಕ್ಟೇರ್ ಪ್ರದೇಶಕ್ಕೆ ಅರೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವದ ಉದ್ದೇಶ ಹೊಂದಲಾಗಿದೆ.
ಡ್ಯಾಂ ಭರ್ತಿ:
1907ರಲ್ಲೇ ಡ್ಯಾಂ ನಿರ್ಮಿಸಿಲಾಗಿದ್ದರೂ 1933ರಲ್ಲಿ ಮೊದಲ ಬಾರಿಗೆ ವಿವಿ ಸಾಗರ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹ ಆಗುವ ಮೂಲಕ ಮೊದಲ ಬಾರಿಗೆ ಕೋಡಿ ಹರಿದು ಇತಿಹಾಸ ನಿರ್ಮಿಸಿತ್ತು. ಇದಾದ 89 ವರ್ಷಗಳ ಬಳಿಕ ಅಂದರಲ್ಲಿ 2022ರಲ್ಲಿ 135 ಅಡಿ ನೀರು ಸಂಗ್ರಹ ಆಗಿತ್ತು. 2023 ಮತ್ತು 2024ರಲ್ಲಿ ನೀರಿನ ಕೊರತೆ ಕಾಡಿದ್ದು 2025ರ ಜನವರಿ ತಿಂಗಳಲ್ಲಿ 130 ಅಡಿ ನೀರು ಹರಿದು ಬಂದು ಕೋಡಿ ಬೀಳವ ಮೂಲಕ 3ನೇ ಬಾರಿ ದಾಖಲೆ ಮಾಡಿತು. ನಾಲ್ಕನೇ ಬಾರಿಗೆ 2025ನೇ ಅಕ್ಟೋಬರ್-19 ರಂದು ಭಾನುವಾರ 130 ಅಡಿ ನೀರು ಸಂಗ್ರಹ ಆಗುವ ಮೂಲಕ ಭರ್ತಿಯಾಗಿದೆ.
ಅತಿ ಹೆಚ್ಚು ನೀರು ಶೇಖರಣೆ?:
ವಾಣಿ ವಿಲಾಸ ಜಲಾಶಯಕ್ಕೆ ಡ್ಯಾಂ ನಿರ್ಮಾಣ 1907ರಲ್ಲಿ ಪೂರ್ಣಗೊಂಡಿದ್ದರೂ ಅತಿ ಹೆಚ್ಚು ನೀರು ಸಂಗ್ರಹವಾದ ವರ್ಷ. 1917ರಲ್ಲಿ. 120.60 ಅಡಿ, 1918 – 121.30, 1919 – 128.30, 1920 – 125.50, 1932 – 125.50, ಅಡಿ, 1933 – 135.25 ಅಡಿ, 1934 – 130.24 ಅಡಿ, 1935 – 123.22 ಅಡಿ, 1956 – 125 ಅಡಿ, 1957 – 125.05 ಅಡಿ, 1958 – 124.50 ಅಡಿ, 2000 – 122.50 ಅಡಿ, 2021 – 125.50 ಅಡಿ, 2022-135 ಅಡಿ, 2024ರಲ್ಲಿ 128.40 ಅಡಿ, 2025 130 ಅಡಿ ನೀರು ಸಂಗ್ರಹ ಆಗುವ ಮೂಲಕ ಭರ್ತಿಯಾಗಿದೆ.

ಸಾರ್ವಜನಿಕರ ಗಮನಕ್ಕೆ-
ಹಿರಿಯೂರು ತಾಲೂಕಿನ ರೈತರ ಜೀವ ನಾಡಿಯಾಗಿರುವ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ 130 ಅಡಿ ಆಗಿದ್ದು ಸಾರ್ವಜನಿಕರು ಜಲಾಶಯ ಹಿನ್ನೀರಿನಲ್ಲಿ ಇಳಿಯುವುದು ಈಜಾಡುವುದು, ದನ ಕರುಗಳ ಮೈ ತೊಳಿಯುವುದು, ಬಟ್ಟೆ ತೊಳೆಯಲು ಹೋಗಬಾರದು. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹಿರಿಯೂರು ಪೊಲೀಸ್ ಪ್ರಕಟಣೆ ತಿಳಿಸಿ ಎಚ್ಚರಿಸಿದೆ.

