ಚಂದ್ರವಳ್ಳಿ ನ್ಯೂಸ್, ಯಾದಗಿರಿ :
“ಬೆಳಕು ಮುಸುಕು, ದುಡ್ಡಿನ ನೋಟು, ಬದುಕಿನ ಭಾರ”, ಮನಸ್ಸುಗಳೊಳಗಿನ ನೋಟೊಂದರ ನೆಲೆಯಲ್ಲಿ…
ಶನಿವಾರ ಸಂಜೆ. ಮುಗಿಯುತ್ತಿರುವ ಬೆಳಕು, ಮುಸುಕುತ್ತಿರುವ ಮೋಡ, ತಂಪು ಗಾಳಿಯ ಮಧ್ಯೆ ನಗರದ ಒಂದು ಹೊರವಲಯದಲ್ಲಿ ನಡೆಯುತ್ತಿದ್ದ ಕಟ್ಟಡ ನಿರ್ಮಾಣದ ಸೈಟ್. ದಿನ ಮುಗಿಯುತು. ಕೆಲಸ ಮುಗಿದ ಬೆನ್ನಲ್ಲೆ, ಶ್ರಮವೆತ್ತಿದ ದೇಹಗಳ ನಡುವೆ ಹರಡಿಕೊಂಡಿದ್ದ ಮೌನ.
ಅಲ್ಲೊಂದು ಕುರ್ಚಿ. ಅದರ ಮುಂದೆ ಟೇಬಲ್. ಟೇಬಲ್ ಮೇಲೆ ನಗದು ಹಣ. ಹಣ ಹಂಚುತ್ತಿದ್ದ ಮೇಸ್ತ್ರಿಯ ಕೈಚಲನೆಗೆ ಬಿಂಬಿಸಿದದ್ದೆಂದರೆ… ಕೇವಲ ಆತನ ಕರ್ತವ್ಯವಲ್ಲ, ಅಲ್ಲಿಯ ಎಲ್ಲರೂ ನಿರೀಕ್ಷಿಸುತ್ತಿದ್ದ ಭವಿಷ್ಯದ ಮೌನ ಸಂವೇದನೆ.
ಆ ಜಾಗದಲ್ಲಿ ಸೇರಿದ್ದ ಅನೇಕರ ಕಣ್ಣುಗಳಲ್ಲಿ ಒಂದೇ ನೋಟ: ದುಡ್ಡು. ಆದರೆ ಅದು ಕೇವಲ ಹಣವಲ್ಲ, ಅವರ ಜೀವನದ ಮುಂದಿನ ಏಳು ದಿನಗಳ ನಕ್ಷೆ.
ಕೆಲವರು ನೆಲದ ಮೇಲೆ, ಇತರರು ಪ್ಲಾಸ್ಟಿಕ್ ಚೀಲಗಳ ಮೇಲೆ, ಇನ್ನು ಕೆಲವರು ನದಿಯಂತೆ ಹಾಕಿದ ಇಟ್ಟಿಗೆಗಳ ಮೇಲೆ ಕುಳಿತು, ಚಪ್ಪರಿಯ ಬಿಸಿಲು ತಪ್ಪಿಸಿಕೊಂಡು ಕೂತಿದ್ದರೇನು – ಎಲ್ಲಾ ಕಣ್ಣುಗಳು ಒಂದೇ ಕಡೆ: ಹಣದ ಹಂಚಿಕೆ. ಒಬ್ಬರು ಎಲೆ ಅಡಿಕೆ ಹಾಕುತ್ತಿದ್ದರು, ಇನ್ನೊಬ್ಬರು ಮಗುವಿಗೆ ಹಾಲು ಕುಡಿಸುತ್ತಿದ್ದರು, ಮೂರನೇಯವರು ತಲೆ ಬಾಚಿಕೊಳ್ಳುತ್ತಾ ಹಣದ ದಿಕ್ಕಿನಲ್ಲಿ ಕಣ್ಣು ಹಾಕಿದ್ರು. ಆದರೆ ಎಲ್ಲರ ಮನಸ್ಸುಗಳ ನಡುವೆ ಹರಡಿಕೊಂಡಿತ್ತು ‘ಆ ಹಣ ಎಲ್ಲಿಗೆ?’ ಎಂಬ ಆಳವಾದ ಪ್ರಶ್ನೆ.
ಅದು ಅವರ ಜೀವನದ ಒಂದು ವಾರದ ವರಮಾನ. ಅದರಲ್ಲಿ ಮನೆ ಬಾಡಿಗೆ, ದಿನಸಿ, ವಿದ್ಯುತ್, ಶಾಲಾ ಶುಲ್ಕ, ಔಷಧಿ ಎಲ್ಲವೂ ಇತ್ತು. ಆದರೆ ಅದಕ್ಕಿಂತಲೂ ಹೆಚ್ಚು ಆ ಹಣದಲ್ಲಿ ಹೆಚ್ಚಿದ್ದರೇನೆಂದರೆ – ಅವರ ಬದುಕು ಮುಂದುವರಿಯುವ ಭರವಸೆ, ಅಶ್ರುತತೆಯ ಒಂದು ಚಿಹ್ನೆ.
ಇವತ್ತಿನ ತಂತ್ರಜ್ಞಾನ ಜಗತ್ತಿನಲ್ಲಿ ಹಣ ಕೇವಲ ಖರ್ಚಿನ ಸಾಧನವಲ್ಲ. ಅದು ಮಾನವ ಸಂಬಂಧಗಳ ನಾಣ್ಯವಾಗಿದೆ. ಅದು ಕನಸುಗಳ ದಿಕ್ಕು ತೋರಿಸುತ್ತೆ, ಕೆಲವೊಮ್ಮೆ ಅವುಗಳನ್ನು ಮುರಿಯುತ್ತದೆ.
ಇಡೀ ಸಮಾಜವೇ ಹಣದ ಸುತ್ತ ಕುಣಿಯುತ್ತಿದೆಯೆಂಬುದನ್ನು ನಾವು ಎಲ್ಲೆಲ್ಲೋ ಗಮನಿಸುತ್ತೇವೆ. ಸೂಕ್ಷ್ಮವಾಗಿ ಗಮನಿಸಿದರೆ – ಶಾಪಿಂಗ್ ಮಾಲ್ ಗಳು, ಡಿಜಿಟಲ್ ಪ್ಲಾಟ್ಫಾರ್ಮ್ ಗಳು, ಸೆಲೆಬ್ರಿಟಿ ವಿವಾಹಗಳು, ನಾಮಕರಣ, ಜನ್ಮದಿನೋತ್ಸವಗಳು ಎಲ್ಲವೂ ಹಣದ ಪ್ರದರ್ಶನಗಳಾಗಿವೆ.
ಮತ್ತೊಂದೆಡೆ ಕೂಲಿ ಕಾರ್ಮಿಕನ ದಿನಚರಿ ಹಣದ ಹಿಂದೆ ಓಡುವ ಓಟವಾಗಿದೆ. ಈ ಎರಡು ಮಟ್ಟಗಳ ನಡುವಿನ ಅಂತರವೇ ಸಮಾಜದ ಅಸಮಾನತೆಯ ಭಿತ್ತಿ.
ಆದರೆ ಈ ಪ್ರಶ್ನೆ ಇಂದಿಗೂ ಜೀವಂತವಾಗಿದೆ: ಹಣ ನಮಗಾಗಿ ಇದೆಯೇ? ನಾವು ಹಣಕ್ಕಾಗಿ ಇರುವೇವೆ? ನಾವು ಹಣವನ್ನು ಬಳಸುತ್ತೇವೆನಾ, ಅಥವಾ ಅದು ನಮ್ಮನ್ನು ಉಪಯೋಗಿಸುತ್ತಿದೆನಾ?
ಇಂದಿನ ಸಮಾಜದಲ್ಲಿ ರಾಜಕಾರಣ, ಧರ್ಮ, ಶಿಕ್ಷಣ, ಆರೋಗ್ಯ, ವ್ಯವಹಾರ – ಎಲ್ಲವೂ ಹಣಕ್ಕೆ ತಲೆಬಾಗಿದ ಪರಿಸ್ಥಿತಿ. ಏಕೆಂದರೆ ಹಣವೇ ಶಕ್ತಿಯ ಹೊಸ ರೂಪವಾಗಿದೆ.
ಹಣಕ್ಕಾಗಿ ಮನುಷ್ಯ ಮನುಷ್ಯನನ್ನು ಮರೆಯುತ್ತಿದ್ದಾನೆ. ಅದರ ಹಿನ್ನೆಲೆಯಲ್ಲೇ ಮೂಡುವ ಪ್ರಶ್ನೆ: ಹಣವೇ ಮಾನವೀಯತೆಯ ಪರಮ ಗುರಿಯಾಗಬೇಕೇ? ಅಥವಾ ಮಾನವೀಯತೆಯೇ ಹಣದ ಬಳಕೆಗೆ ಮಾರ್ಗದರ್ಶಿಯಾಗಬೇಕೆ?
ಈ ಪ್ರಶ್ನೆಗಳ ಮಧ್ಯೆ, ನಾವು ಎಲ್ಲೋ ಮರೆಯಾಗಿದ್ದೇವೆ.ಮನಸ್ಸುಗಳಲ್ಲಿ ಶಾಂತಿ ಇಲ್ಲ, ಮನೆಯೊಳಗೆ ಸಮಾಧಾನ ಇಲ್ಲ, ಮತಗಳಲ್ಲಿ ನಿಸ್ವಾರ್ಥತೆ ಇಲ್ಲ.
ಅವನ ನೋವು ಈತನಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಹಣ ತೋರಿಸುವ ದೃಷ್ಟಿಯು ಮನುಷ್ಯನ ಕಣ್ಣಿನಲ್ಲಿ ಮನುಷ್ಯನನ್ನೇ ಮರೆಮಾಡುತ್ತಿದೆ.
ಆದರೆ ಇದರಿಂದ ನಾವು ಹೊರಬರಬೇಕಿದೆ.
ಹಣವನ್ನು ನಿಯಂತ್ರಿಸುವ ನಾವಾಗಬೇಕು. ನಮ್ಮ ನಿರ್ಧಾರ, ನಮ್ಮ ಕನಸುಗಳು, ನಮ್ಮ ಬಾಳು ಹಣದ ಮೌಲ್ಯದಿಂದ ಅಲ್ಲ – ಮಾನವೀಯ ಮೌಲ್ಯದಿಂದ ತಕ್ಕಡಿಸಲ್ಪಡಬೇಕಿದೆ.
ಪ್ರತಿ ಒಬ್ಬ ವ್ಯಕ್ತಿಯ ಜೀವನದ ಮಟ್ಟ ಸುಧಾರಣೆಯಾಗಬೇಕೆಂಬ ಸಂಕಲ್ಪ, ಮಾನದ ಪರಿವರ್ತನೆಯ ಚಳವಳಿ ಪ್ರಾರಂಭವಾಗಬೇಕೆಂಬ ಆಶಯ. ಇವತ್ತಿನ ನೋಟುಗಳ ಹಿಂದೆ ನಾಳೆಯ ಬೆಳಕು ಕಾಣುವಂತಹ ಸಮಾಜ ನಿರ್ಮಾಣವಾಗಲಿ.
ಲೇಖನ: ಚಂದನ್ ಎಸ್ ಅವಂಟಿ, ಇಡ್ಲೂರ್, ಯಾದಗಿರಿ ಜಿಲ್ಲೆ.