ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಅಮೆರಿಕದ ಮಾತು ಕೇಳಿ ಯಾರೂ ಯುದ್ಧ ನಿಲ್ಲಿಸಿಲ್ಲ, ಸೂಕ್ಷ್ಮ ವಿಚಾರಗಳನ್ನು ಅರಿತು ಪ್ರತಿಯೊಬ್ಬರು ಪ್ರತಿಕ್ರಿಯಿಸಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯುದ್ಧ ನಿಲ್ಲಿಸಿದ ಲಾಭವನ್ನು ಯಾರೋ ತೆಗೆದುಕೊಳ್ಳಲಿಕ್ಕೆ ಏನೇನೋ ಮಾತನಾಡುತ್ತಾರೆ. ಸಚಿವ ಕೃಷ್ಣ ಬೈರೇಗೌಡರು ಯುದ್ಧ ಮುಂದುವರೆಸಬಹುದಿತ್ತು ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಯುದ್ಧ ಬೇಡ ಎಂದಿದ್ದರು. ಮೊದಲೇ ಈ ಮಾತನ್ನು ನಿಮ್ಮ ಮುಖ್ಯಮಂತ್ರಿಗಳಿಗೆ ಹೇಳಬಹುದಾಗಿತ್ತಲ್ಲಾ ಎಂದು ಕೃಷ್ಣಬೈರೇಗೌಡರ ವಿರುದ್ಧ ಆರ್.ಅಶೋಕ್ ವಾಗ್ದಾಳಿ ಮಾಡಿದರು.
ಕದನ ವಿರಾಮದ ಬಗ್ಗೆ ಯಾರೋ ನಾಲ್ಕು ಜನ ತೀರ್ಮಾನ ಮಾಡುವುದಲ್ಲ. ಇದು ಸೈನಿಕರು ತೆಗೆದುಕೊಂಡಿರುವ ತೀರ್ಮಾನ. ಪ್ರಧಾನಿ ಮೋದಿಯವರು ಸೈನಿಕರ ಅಭಿಪ್ರಾಯ ಪಡೆದೇ ಕದನ ವಿರಾಮ ಘೋಷಿಸಿದ್ದಾರೆ. ಇಷ್ಟು ಸಾಮಾನ್ಯ ಜ್ಞಾನ ಕಾಂಗ್ರೆಸ್ನವರಿಗೆ ಇದ್ದರೆ ಸಾಕು ಎಂದು ಅಶೋಕ್ ಟಾಂಗ್ ನೀಡಿದರು.
ನಮ್ಮ ಸೈನಿಕರು ಪಹಲ್ಗಾಮ್ ಘಟನೆಗೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಪ್ರಧಾನಿ ಮೋದಿಯವರು ಅಣ್ವಸ್ತ್ರಗಳಿಗೆಲ್ಲ ಭಾರತ ಬಗ್ಗಲ್ಲ ಎಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್ನವರು ದೇಶದ ವಿಚಾರದಲ್ಲಿ ದ್ವಂದ್ವ ನೀತಿ ಪ್ರದರ್ಶನ ಮಾಡುವುದು ಬೇಡ. ಯುದ್ಧ ಆರಂಭಕ್ಕೂ ಮುನ್ನ ಯುದ್ಧದ ಅವಶ್ಯಕತೆ ಇದೆ ಎಂದಿದ್ದರು. ಯುದ್ಧ ಆರಂಭವಾದ ಮೇಲೆ ಶಾಂತಿ ಎಂದರು. ಯುದ್ಧ ನಿಲ್ಲಿಸಿದಾಗ ಯುದ್ಧ ಮಾಡಬೇಕಿತ್ತು ಎನ್ನುತ್ತಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಪಾಕಿಸ್ತಾನದ ಸೈನಿಕರೆ ನಮ್ಮ ಸೈನಿಕರಿಗೆ ಕರೆ ಮಾಡಿ ಕದನ ವಿರಾಮ ಘೋಷಣೆ ಮಾಡುವಂತೆ ಕೇಳಿದ್ದಾರೆ. ನಾವೆಲ್ಲರೂ ಸೈನಿಕರ ಪರ ನಿಲ್ಲೋಣ. ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಅಶೋಕ್ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಡಿಸಿಎಂ, ಶಾಸಕ ಡಾ. ಸಿ. ಎನ್ ಅಶ್ವತ್ಥ್ ನಾರಾಯಣ್, ವಿಧಾನ ಪರಿಷತ್ತಿನ ಪ್ರತಿಪಕ್ಷದ ಸಚೇತಕ ಆರ್. ರವಿಕುಮಾರ್ ಉಪಸ್ಥಿತರಿದ್ದರು.