ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಡಿಮೆ ಬೆಲೆಗೆ ಮನೆ ಬರೆದುಕೊಡುವಂತೆ ಒತ್ತಾಯಿಸಿದ್ದ ಆರೋಪದಲ್ಲಿ ಕಳೆದ ವಾರ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು, ಈ ಸಂಬಂಧ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.
ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯೆ ಪ್ರವೇಶಿಸಿ ಮನೆ ಮಾಲೀಕರಿಗೆ ಕಿರುಕುಳ ನೀಡಿದ್ದ ಪೊಲೀಸರ ವಿರುದ್ಧ ಚಿನ್ನೇಗೌಡ ನೀಡಿದ ದೂರು ಆಧರಿಸಿ ಇನ್ಸ್ಪೆಕ್ಟರ್ ಎ ವಿ ಕುಮಾರ್, ಕಾನ್ಸ್ಟೇಬಲ್ಗಳಾದ ಉಮೇಶ್, ಅನಂತ್, ಕೃತ್ಯದಲ್ಲಿ ಭಾಗಿಯಾಗಿದ್ದ ಸಿ ಪಿ ಗವೀಗೌಡ, ದಿವ್ಯ, ಸೋಮಶೇಖರ್ ಆರಾಧ್ಯ ಹಾಗೂ ದಿನೇಶ್ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಏನಿದು ಪ್ರಕರಣ?:
ಪತ್ನಿ ಅನುಷಾ ಅವರು ಸರ್ಕಾರಿ ಉದ್ಯೋಗದಲ್ಲಿದ್ದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಆ ಪ್ರಕರಣದಲ್ಲಿ ಬಿ ರಿಪೋರ್ಟ್ಸಲ್ಲಿಸುವುದಾಗಿ ಮತ್ತು ಅದಕ್ಕೆ ಪ್ರತಿಯಾಗಿ 4 ಕೋಟಿ ಮೌಲ್ಯದ ಮನೆಯನ್ನು ಕಡಿಮೆ ಮೊತ್ತಕ್ಕೆ ಬರೆದುಕೊಡುವಂತೆ ಇನ್ಸ್ಪೆಕ್ಟರ್ ಕುಮಾರ್ ಕಿರುಕುಳ ನೀಡುತ್ತಿದ್ದರು ಎಂದು ಸಿವಿಲ್ ಗುತ್ತಿಗೆದಾರ ಚನ್ನೇಗೌಡ ಆರೋಪಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಅಲ್ಲದೇ ಈ ಹಿಂದೆ ನಮ್ಮ ಮನೆಗೆ ಕೆಲವರನ್ನು ನುಗ್ಗಿಸಿದ್ದರು ಎಂಬುದು ಅವರ ಆರೋಪವಾಗಿತ್ತು. ಈ ಸಂಬಂಧ ವಿಡಿಯೋ ಮಾಡಿಕೊಂಡಿದ್ದೆ. ನಂತರ ಠಾಣೆಗೆ ನನ್ನನ್ನು ಕರೆಸಿ ಒತ್ತಾಯ ಪೂರ್ವಕವಾಗಿ ಮನೆ ಬರೆದುಕೊಡುವ ಅಗ್ರಿಮೆಂಟ್ಗೆ ಸಹಿ ಹಾಕುವಂತೆ ಒತ್ತಡ ಹೇರಿದ್ದರೆಂದು ಆರೋಪಿಸಿದ್ದಾರೆ.
ಕಳೆದವಾರ ಅಗ್ರಿಮೆಂಟ್ಗೆ ಸಹಿ ಹಾಕಿಸಲು ನಾಗರಬಾವಿಯ ಖಾಸಗಿ ಹೋಟೆಲ್ಗೆ ಕುಮಾರ್ ಕರೆಸಿದ್ದರು. ಚನ್ನೇಗೌಡರ ಪತ್ನಿ ಅನುಷಾಳ ಸಹಿ ಹಾಕಿಸಿಕೊಳ್ಳಲು ಕರೆಸಿದ್ದ ವೇಳೆ ಲೋಕಾಯುಕ್ತ ದಾಳಿ ನಡೆದಿತ್ತು. ಈ ವೇಳೆ, ಇಬ್ಬರು ಕಾನ್ಸ್ಟೇಬಲ್ಗಳು ಸೇರಿದಂತೆ ಐವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ದಾಳಿ ವಿಚಾರ ತಿಳಿದು ಕುಮಾರ್ ಪರಾರಿಯಾಗಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿದ್ದವು. ಇನ್ಸ್ಪೆಕ್ಟರ್ ಎ ವಿ ಕುಮಾರ್ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆ ಆಗಿದ್ದರೂ ಪದಕ ಸ್ವೀಕರಿಸಲು ಅವರು ಹೋಗಿರಲಿಲ್ಲ.