ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಲೋಕಾಯುಕ್ತ ಅಧಿಕಾರಿಗಳು ಹುಬ್ಬಳ್ಳಿಯ ಕೆಎಂಸಿಆರ್ಐ ಆಸ್ಪತ್ರೆ ಮೇಲೆ ಮಂಗಳವಾರ ದಿಢೀರ್ ದಾಳಿ ಮಾಡಿ ಮಹತ್ವದ ದಾಖಲಾತಿಗಳ ಪರಿಶೀಲನೆ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳಿದ್ದರೂ ರೋಗಿಗಳಿಗೆ ನೀಡದೇ ಹೊರಗಡೆ ತರುವಂತೆ ಚೀಟಿ ಬರೆದು ಕೊಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿದ್ದವು. ವ್ಯಕ್ತಿಯೋರ್ವ ಇಂಜೆಕ್ಷನ್ಗಾಗಿ ಪರದಾಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ ಅವರು ಈ ಕುರಿತು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಸೂಚನೆ ನೀಡಿದ್ದರು.
ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಎಸ್.ಟಿ. ನೇತೃತ್ವದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು, ಪ್ರತಿಯೊಂದು ವಿಭಾಗಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅಕ್ಟೊಬರ್ ತಿಂಗಳಲ್ಲಿ ರೈತನೋರ್ವ ಔಷಧಿಗಾಗಿ ತಿರುಗಾಡುವ ವಿಡಿಯೋ ವೈರಲ್ ಆಗಿತ್ತು. ಉಪ ಲೋಕಾಯುಕ್ತರು ಸ್ವಯಂ ದೂರು ದಾಖಲಿಸಿಕೊಂಡು ಪ್ರಾಥಮಿಕ ವರದಿನೀಡಲು ಸೂಚನೆ ನೀಡಿದ್ದಾರೆ. ಸಾರ್ವಜನಿಕರಿಂದ ದೂರು ಸಹ ಕೊಡಲಾಗಿತ್ತು. ಹೀಗಾಗಿ ಶೋಧ ಮಾಡುತ್ತಿದ್ದೇವೆ. ಚಿಕಿತ್ಸೆ ವಿಭಾಗ, ಶುಚಿತ್ವ, ಆಡಳಿತ ವ್ಯವಸ್ಥೆ ಬಗ್ಗೆ ದೂರುಗಳು ಬಂದಿವೆ. ಈಗ ಪರಿಶೀಲನೆ ಮಾಡ್ತಾ ಇದ್ದೇವೆ ಎಂದು ತಿಳಿಸಿದರು.
ಸರ್ಕಾರಿ ವೈದ್ಯರು ಹೊರಗಡೆಗೆ ಚೀಟಿ ಬರೆದುಕೊಡುತ್ತಿಲ್ಲ. ನರಗುಂದದಲ್ಲಿ ವೈದ್ಯರು ಹೇಳಿದ್ರು ಅಂತ ಹುಬ್ಬಳ್ಳಿಯಲ್ಲಿ ಹುಡುಕುತ್ತಾ ಇದ್ದರು. 12 ತಂಡಗಳ 40 ಜನ ಸಿಬ್ಬಂದಿಯಿಂದ ಪರಿಶೀಲನೆ ಮಾಡುತ್ತಿದ್ದೇವೆ. ಒಳರೋಗಿ, ಹೊರ ರೋಗಿಗಳ ಹತ್ತಿರ ಕೇಳುತ್ತೇವೆ ಎಂದು ಮಾಹಿತಿನೀಡಿದರು.
ಕೆಎಂಸಿಆರ್ಐ ನಿರ್ದೇಶಕಡಾ. ಈಶ್ವರ್ ಹೊಸಮನಿ ಮಾತನಾಡಿ, ರಾಜ್ಯ ಉಪ ಲೋಕಾಯುಕ್ತರ ಆದೇಶದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕಿಮ್ಸ್ನ ಕೆಲ ವಿಭಾಗಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಅವರಿಗೆ ಬೇಕಾದ ಮಾಹಿತಿ ನೀಡಲು ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಅವರಿಗೆ ಬೇಕಾದ ಎಲ್ಲಾ ಸಹಾಯ ಸಹಕಾರ ನೀಡುತ್ತೇವೆ ಎಂದರು.
ಅಕ್ಟೋಬರ್ನಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಇದರ ಬಗ್ಗೆ ಲೋಕಾಯುಕ್ತರು ಸ್ವಯಂ ದೂರು ದಾಖಲಿಸಿಕೊಂಡಿದ್ದು, ಅದರ ಪ್ರಕಾರ ತನಿಖೆಗೆ ಬಂದಿದ್ದಾರೆ. ಒಟ್ಟು 32 ವಿಭಾಗಗಳಲ್ಲಿ ಪರಿಶೀಲನೆ ನಡೆಸಲು ಸಂಪೂರ್ಣ ಸಹಕಾರವಿದೆ. ಇದಕ್ಕೆ ನಮ್ಮ ಆಸ್ಪತ್ರೆ ಸಿಬ್ಬಂದಿ ತಂಡವನ್ನು ಅವರ ಜೊತೆ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದರು.

