ಭಗವಾನ್ ಬುದ್ಧರ ತತ್ವಾದರ್ಶಗಳನ್ನು ಪಾಲಿಸೋಣ: ಜಿಲ್ಲಾಧಿಕಾರಿ ಬಸವರಾಜು

News Desk

ಚಂದ್ರವಳ್ಳಿ ನ್ಯೂಸ್, ಬೆಂ.ಗ್ರಾ.ಜಿಲ್ಲೆ:
ಭಗವಾನ್ ಬುದ್ಧರ ಜ್ಞಾನ ಇಡೀ ಜಗತ್ತಿಗೆ ಪಸರಿಸಿದೆ. ಅವರ ಶಾಂತಿ
, ಸಹನೆ, ಸಹಬಾಳ್ವೆ ಸಂದೇಶಗಳು ನಮಗೆಲ್ಲರಿಗೂ ಸ್ಪೂರ್ತಿ. ಜ್ಞಾನದ ಬೆಳಕನ್ನು ಜಗತ್ತಿಗೇ ನೀಡಿದಂತಹ ಮಹಾನ್ ವ್ಯಕ್ತಿ ಗೌತಮ ಬುದ್ಧರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಗೌತಮ ಬುದ್ಧರ ಜಯಂತಿಯನ್ನು ಸರ್ಕಾರದಿಂದ ಪ್ರಥಮವಾಗಿ ಆಚರಿಸಲಾಗುತ್ತಿದೆ.  ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯವನ್ನು ಸ್ಮರಿಸುವ ಉದ್ದೇಶದಿಂದ ಬುದ್ಧ ಜಯಂತಿ ಆಚರಿಸಲಾಗುತ್ತಿದೆ. ಜ್ಞಾನೋದಯ, ಕರುಣೆ ಮತ್ತು ಶಾಂತಿಯನ್ನು ಪರಿಗಣಿಸಲು ಇದು ಒಂದು ದಿನವಾಗಿದೆ. ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವವನ್ನು ಭೋದಿಸಿದ ಭಗವಾನ್ ಬುದ್ಧರ ತತ್ವ ಬೋಧನೆಗಳನ್ನು ಅರಿತರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಯೂರಲಿದೆ ಎಂದರು.

ದಿವ್ಯ ಸಾನಿದ್ಯರಾಗಿದ್ದ ಬೌದ್ಧ ಬಿಕ್ಕುಣಿ ಮಾತಾ ಮೈತ್ರಿ ಅವರು ಮಾತನಾಡಿ ಬುದ್ಧನು ಹೇಳಿರುವ ಬೌದ್ಧ ಧರ್ಮದ ೩ ಸಂದೇಶವನ್ನು  ತಿಳಿಸಿದರು. ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಅರಿತರೇ ಅದು ಮನುಷ್ಯರ ಮನಸ್ಸಿನ ಶುದ್ಧಿ ಮತ್ತು ಇದರಿಂದ ದುಃಖ ನಿವಾರಣೆ ಹೊಂದಲು ಸಾಧ್ಯವಾಗುತ್ತದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ವಕೀಲ ಮಹೇಶ್ ದಾಸ್ ಅವರು ಪ್ರಾಚೀನ ಗ್ರಂಥಗಳ ಪ್ರಕಾರ, ಭಗವಾನ್ ಬುದ್ಧನು ರಾಜಕುಮಾರ ಸಿದ್ದಾರ್ಥ ಆಗಿ ಜನಿಸಿ, ಯಾವಾಗಲೂ ಐಷಾರಾಮಿ ಮತ್ತು ಭೌತಿಕ ಸಂತೋಷಗಳಿಂದ ತನ್ನ ಜೀವನವನ್ನು ಸಾಗಿಸುತ್ತಿದ್ದನು. ಒಮ್ಮೆ, ಅವನು ಒಬ್ಬ ಮುದುಕ, ಅಸ್ವಸ್ಥ ಮತ್ತು ಶವವನ್ನು ನೋಡಿದನು. ಒಬ್ಬ ಮನುಷ್ಯನ ದುಃಖದ ಹಿಂದಿನ ಕಾರಣಗಳನ್ನು ಹುಡುಕುವ ಪ್ರಚೋದನೆಯನ್ನು ಅವರು ಇದರಿಂದ ಪಡೆದುಕೊಂಡರು.

ನಂತರ ಅವರು ಉತ್ತರಗಳನ್ನು ಪಡೆಯುವ ಹುಡುಕಾಟದಲ್ಲಿ ೨೯ ನೇ ವಯಸ್ಸಿನಲ್ಲಿ ತನ್ನ ಮನೆಯನ್ನು ತೊರೆದು ಆಲದ ಮರದ ಕೆಳಗೆ ಕುಳಿತು ಜ್ಞಾನೋದಯವನ್ನು ಪಡೆಯಲು ಪ್ರಯತ್ನಿಸಿದರು. ಆಳವಾದ ಧ್ಯಾನದ ನಂತರ ಅವರು ತಮ್ಮ ೩೫ನೇ ವಯಸ್ಸಿನಲ್ಲಿ ಜ್ಞಾನೋದಯವನ್ನು ಪಡೆದುಕೊಂಡು ಮಹಾತ್ಮ ಬುದ್ಧ ಎಂದು ಕರೆಸಿಕೊಂಡರು. ಈ ಜ್ಞಾನದಿಂದ ಅವರು ಸಾಕಷ್ಟು ಬೋಧನೆಗಳನ್ನು ನೀಡಿದ್ದರು. ಅದನ್ನು ಎಲ್ಲರು ತಿಳಿದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ, ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ ರಮೇಶ್, ಯೋಜನಾಧಿಕಾರಿ ರಾಮಕೃಷ್ಣಯ್ಯ, ಮುಖಂಡರಾದ ಶ್ರೀನಿವಾಸ್, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

 

Share This Article
error: Content is protected !!
";