ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಪೋಸ್ಟ್ ಮಾರ್ಟಂನ ಪ್ರೇಮಕಥೆ…!
ಎದೆಯ ಖಜಾನೆ ಕದಕೆ ಕತ್ತಿ ಇರಿದು
ಸೆಣಬಿನ ದಾರವ ನುಲಿದು
ಒಲಿದು ಕಟ್ಟಿದವನಿಗೇನು ಗೊತ್ತು
ಹೃದಯದಂಗಡಿಯ ಎದೆಗೂಡಲಿ
ಬೆಚ್ಚಗಿದ್ದ ನನ್ನವಳ ನೆನಪುಗಳು
ಹಾರಿ ಹೋಗಿವೆ ಎಂದು.
ನೆರೆದು ಗರಿ ಬಿಚ್ಚಿದ ನೆರಿಗೆ ಲಂಗದ
ಹುಡುಗಿಯ ನೆನಪು
ಕೂಡಿನುಬ್ಬಿನ ಬೆಡಗಿಯ ಅಡಗಿಸಿಟ್ಟ
ಕನಸುಗಳ ಎದೆಯಂಗಳ ಬಗೆದು
ನೆನಪುಗಳ ಕಪಾಟದ
ಕವಾಟ ಕತ್ತರಿಸಿದವನಿಗೇನು ಗೊತ್ತು
ಗುಂಡಿಗೆಯ ಗೂಡಿಗೂ ಬಾಗಿಲಿದೆ ಎಂದು.
ಭರವಸೆಯ ಬೆಳಕು ನುಂಗಿದ
ಕತ್ತಲೆಗೂ ಹಸಿವಿದೆ
ಕತ್ತಲಲ್ಲಿ ಮಲಗಿದ ಹೆಣವೂ ಮುಲುಗಿದೆ..!!
ಸತ್ತ ಸರದಾರರ ಎದೆ ಬಗೆದ ಲೆಕ್ಕವಿರಿಸಿಲ್ಲದ
ಡಾಕ್ಟರನ ಸಮಾಧಿಯ ಮೇಲೆ ಗರಿಕೆ ಹುಟ್ಟಿ
ನಗದೆ ಇರದು..!
ಕವಿತೆ-ಅಜ್ಜೇರಿ ತಿಪ್ಪೇಸ್ವಾಮಿ, ಮೊಳಕಾಲ್ಮೂರು.