ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹತ್ತನೆ ತರಗತಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲ್ಲೂಕು ಶಾಖೆ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಅನುದಾನಕ್ಕೆ ಒಳಪಟ್ಟಿರುವ ಪ್ರೌಢಶಾಲೆಗಳ ಸಹ ಶಿಕ್ಷಕರ ವಿಷಯವಾರು ಫಲಿತಾಂಶವನ್ನು ಪರಿಗಣಿಸಿ ಶೇ. 60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಸಹ ಶಿಕ್ಷಕರನ್ನು ಗುರುತಿಸಿ ವಾರ್ಷಿಕ ವೇತನ ಬಡ್ತಿ ತಡೆಹಿಡಿಯುವುದು. ಅನುದಾನ ಪಡೆಯುತ್ತಿರುವ ವಿಷಯ ಶಿಕ್ಷಕರು ನಿರಂತರ ಮೂರು ವರ್ಷಗಳಲ್ಲಿ ಶೇ.60 ಕ್ಕಿಂತ ಕಡಿಮೆ ಫಲಿತಾಂಶ ನೀಡಿದಲ್ಲಿ ಅಂತಹ ವಿಷಯ ಶಿಕ್ಷಕರುಗಳ ವೇತಾನುದಾನವನ್ನು ತಡೆಹಿಡಿಯುವುದು ಹೀಗೆ ಹಲವಾರು ವಿಷಯಗಳ ಮೇಲೆ ಕ್ರಮ ಕೈಗೊಳ್ಳಲು ದಿನಾಂಕ : 30-5-2025 ರಂದು ನಿರ್ದೇಶಕರ ಸುತ್ತೋಲೆಯಂತೆ ಧಾರವಾಡ ಮತ್ತು ಕಲಬುರಗಿ ಆಯುಕ್ತಾಲಯ ವ್ಯಾಪ್ತಿಗೊಳಪಡುವ ಉಪ ನಿರ್ದೇಶಕರುಗಳಿಗೆ ಕ್ರಮ ವಹಿಸಲು ಸೂಚಿಸಲಾಗಿದೆ.
ಕಳಪೆ ಫಲಿತಾಂಶ ಬರುವುದಕ್ಕೆ ಕೇವಲ ಶಿಕ್ಷಕರುಗಳಷ್ಟೆ ಕಾರಣರಲ್ಲ. ವಿದ್ಯಾರ್ಥಿಗಳು ಬೆಳದು ಬಂದಿರುವ ಪರಿಸರ, ಪ್ರಾಥಮಿಕ ಹಂತದಲ್ಲಿ ಕಲಿತಿರುವ ಶಿಕ್ಷಣ, ಏಳನೆ ತರಗತಿಯವರೆಗೆ ಯಾವುದೇ ರೀತಿಯ ಗುಣಾತ್ಮಕ, ನಿರ್ಣಯಾತ್ಮಕ ಮಾನದಂಡಗಳ ಪರೀಕ್ಷೆಗಳು ಮೌಲ್ಯಮಾಪನ ಇಲ್ಲದಿರುವುದರಿಂದ ನೇರವಾಗಿ ಅಡೆತಡೆಗಳಿಲ್ಲದೆ ಕನಿಷ್ಠ ಎಫ್.ಎಲ್.ಎನ್. ಸಾಧಿಸದೆ ಉತ್ತೀರ್ಣರಾಗಿರುವ ಮಕ್ಕಳು ಎಂಟನೆ ತರಗತಿ ಪ್ರವೇಶ ಪಡೆಯುತ್ತಿದ್ದಾರೆ.
ಪೋಷಕರು, ಆಡಳಿತ ಮಂಡಳಿ ಅಸಹಕಾರ ಒಳಗೊಂಡಂತೆ ಇನ್ನು ಅನೇಕ ಕಾರಣಗಳಿರುತ್ತವೆ. ಹಾಗಾಗಿ ಶಿಕ್ಷಕರುಗಳ ಮೇಲೆ ಕ್ರಮಕ್ಕೆ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯುವಂತೆ ಸಹ ಶಿಕ್ಷಕರುಗಳು ಒತ್ತಾಯಿಸಿದರು.
ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜಪ್ಪ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ಪರಿಷತ್ ರಾಜಪ್ಪ ಎಸ್. ನಿರ್ದೇಶಕರಾದ ಮಂಜುನಾಥ್ ಡಿ. ಅನುದಾನಿತ ಮುಖ್ಯ ಶಿಕ್ಷಕರ ಸಂಘದ ಕೀರ್ತಿಕುಮಾರ್, ಡಾ.ಮಹೇಶ್, ದ್ವಾರಕನಾಥ್, ರಾಮಣ್ಣ, ನಿಜಲಿಂಗಪ್ಪ, ಶ್ರೀನಿವಾಸ್, ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.