ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇತಿಹಾಸ ಪ್ರಸಿದ್ಧ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 3ರಂದು ಚಂದ್ರಗ್ರಹಣದ ನಡುವೆಯೇ ಬ್ರಹ್ಮರಥೋತ್ಸವವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಗುವುದು. ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ರಥೋತ್ಸವವನ್ನು ಬೆಳಿಗ್ಗೆ 11.15ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಭಿಜಿತ್ ಮುಹೂರ್ತದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪತಹಸೀಲ್ದಾರ್ ಯಶೋಧಮ್ಮ ತಿಳಿಸಿದ್ದಾರೆ.
ಶನಿವಾರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಬ್ರಹ್ಮರಥೋತ್ಸವದ ದಿನ ಮಧ್ಯಾಹ್ನ ಚಂದ್ರಗ್ರಹಣ ಇರುವುದರಿಂದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗದಂತೆ ರಥೋತ್ಸವವನ್ನು ಮುಂಚಿತವಾಗಿ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಸುಮಾರು ಆರು ಶತಮಾನಗಳ ಇತಿಹಾಸ ಹೊಂದಿರುವ ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಪಾಳೇಗಾರರು, ಹೊಯ್ಸಳರು, ಗಂಗರು ಸೇರಿದಂತೆ ಹಲವು ರಾಜವಂಶಗಳ ಆಳ್ವಿಕೆಯ ಗುರುತುಗಳು ದೇವಾಲಯದಲ್ಲಿ ಕಂಡುಬರುತ್ತವೆ. ಮೂಲತಃ ಇದು ಕಂಬದ ನರಸಿಂಹಸ್ವಾಮಿ ದೇವಾಲಯವಾಗಿದ್ದು, ನಂತರ ತಿರುಪತಿಯಿಂದ ರಕ್ತಚಂದನದ ವೆಂಕಟರಮಣನ ಮೂರ್ತಿಯನ್ನು ತಂದು ಇಲ್ಲಿ ಲಕ್ಷ್ಮೀ ವೆಂಕಟರಮಣ ಸ್ವಾಮಿಯಾಗಿ ಪ್ರತಿಷ್ಠಾಪಿಸಲಾಗಿದೆ ಎಂಬ ಐತಿಹ್ಯವಿದೆ.
ಈ ಹಿನ್ನೆಲೆಯಿಂದ ತಿರುಪತಿ ವೆಂಕಟರಮಣನ ಮೂಲ ಪ್ರಾಣ ದೇವರು ಇಲ್ಲಿಯೇ ನೆಲೆಸಿದ್ದಾರೆ ಎಂಬ ನಂಬಿಕೆ ಸ್ಥಳೀಯರಲ್ಲಿ ವ್ಯಾಪಕವಾಗಿದೆ. ಪಾಳೇಗಾರರ ಕಾಲದಲ್ಲಿ ಪ್ರತಿಷ್ಠಾಪಿತವಾದ ಈ ದೇವಾಲಯದಲ್ಲಿ ಪರಂಪರೆಯ ಧಾರ್ಮಿಕ ಆಚರಣೆಗಳು ಇಂದಿಗೂ ನಿರಂತರವಾಗಿ ನಡೆಯುತ್ತಿದ್ದು, ವಾರ್ಷಿಕ ಬ್ರಹ್ಮರಥೋತ್ಸವ, ವೈಕುಂಠ ಏಕಾದಶಿ ಸೇರಿದಂತೆ ಪ್ರಮುಖ ಹಬ್ಬಗಳು ಭಕ್ತರ ಭಾರಿ ಭಾಗವಹಿಸುವಿಕೆಯಿಂದ ವಿಜೃಂಭಣೆಯಿಂದ ನಡೆಯುತ್ತವೆ.
ಪೂರ್ವಭಾವಿ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್, ಕೆಪಿಸಿಸಿ ಸದಸ್ಯ ಮುನಿರಾಜು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯನಾರಾಯಣಪ್ಪ, ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಪ್ಪ, ಮುನಿಕೃಷ್ಣಪ್ಪ, ದೇವಸ್ಥಾನ ಆಡಳಿತ ಮಂಡಳಿ ಹಿರಿಯ ಸದಸ್ಯರಾದ ಪುಟ್ಟಣ್ಣ, ಕೇಬಲ್ ಮಂಜು, ಗಂಗಾಧರ್, ವೆಂಕಟೇಶ್, ಮುಖಂಡ ಕನಕದಾಸ, ರವಿಸಿದ್ದಪ್ಪ, ಗಿರಿಯಪ್ಪ, ಯುವ ಮುಖಂಡ ಉದಯ ಆರಾಧ್ಯ, ಆಗಮಿಕ ಶ್ರೀನಿವಾಸನ್ ರಾಘವನ್, ಅರ್ಚಕ ನಾರಾಯಣ, ಕಂದಾಯ ನಿರೀಕ್ಷಕ ನರಸಿಂಹ, ವಿ.ಎ. ಕಿರಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.

