ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಮೇಡ್ ಇನ್ ಕರ್ನಾಟಕ’ದತ್ತ ನಿರ್ಣಾಯಕ ಹೆಜ್ಜೆ. ಐಟಿ ಕ್ಷೇತ್ರದಲ್ಲಿ ಕರ್ನಾಟಕ ಭಾರತದ ನಂಬರ್ ಒನ್ ರಾಜ್ಯವಾಗಿರುವುದು ಈಗ ಇತಿಹಾಸ. ಅದರಂತೆಯೇ ಉತ್ಪಾದನಾ ಕ್ಷೇತ್ರದಲ್ಲೂ ಕರ್ನಾಟಕವನ್ನು ಭಾರತದ ಮಾತ್ರವಲ್ಲ ಜಗತ್ತಿನ ನೆಚ್ಚಿನ ತಾಣವನ್ನಾಗಿಸಬೇಕೆನ್ನುವುದು ನಮ್ಮ ಅಭಿಲಾಷೆ. ಇದಕ್ಕಾಗಿ ಸ್ಪಷ್ಟ ನೀತಿ ರೂಪಿಸಬೇಕಿರುವುದು ಮೊದಲ ಹೆಜ್ಜೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಇದೇ ಕಾರಣಕ್ಕೆ ಜೂನ್ 10 ರಂದು ಉತ್ಪಾದನಾ ಕ್ಷೇತ್ರದ ದಿಗ್ಗಜರು, ನವೋದ್ಯಮಗಳನ್ನು ಆಮಂತ್ರಿಸಿ ‘ಉತ್ಪಾದನಾ ಮಂಥನ‘ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಚರ್ಚೆ-ಸಂವಾದ ನಡೆಸಿ ವಲಯವಾರು ಕಾರ್ಯಸಾಧ್ಯವಾದ ನೀಲನಕ್ಷೆ ರೂಪಿಸಲಾಗುವುದು.
ಎಲ್ಲಾ ಉತ್ಪಾದನಾ ವಲಯಗಳ ಅಗತ್ಯತೆಗಳಿಗೆ ಸ್ಪಂದಿಸಿ, ಉದ್ಯಮ ಸ್ನೇಹಿ ನೀತಿ ರೂಪಿಸಿ ಕರ್ನಾಟಕವನ್ನು ಉತ್ಪಾದನಾ ವಲಯದಲ್ಲಿ ಜಾಗತಿಕ ತಾಣವನ್ನಾಗಿಸಲು ಈ ಸಮಾವೇಶ ದಿಕ್ಸೂಚಿಯಾಗಲಿದೆ.
ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಎಲ್ಲ ಉದ್ಯಮಿಗಳಿಗೂ, ತಜ್ಞರಿಗೂ, ಅತಿಥಿಗಳಿಗೂ ಕರ್ನಾಟಕ ಸರ್ಕಾರದ ಪರವಾಗಿ ಹೃತ್ಪೂರ್ವಕ ಸ್ವಾಗತ ಬಯಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.