ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಹಾಭಾರತವು ಯುದ್ದದ ಮಹಿಮೆಯನ್ನು ವ್ಯಕ್ತಪಡಿಸುವ ಕಾವ್ಯವಲ್ಲ, ಬದಲಿಗೆ ಅದು ಯುದ್ಧ ವಿರೋಧಿ ಕಾವ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗ ಇವರ ಸಹಯೋಗದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಬಸವ ಸದನದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ಐದನೇ ಕವಿ- ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮಹಾಭಾರತ ಯುದ್ಧವು ಸೋದರರ ನಡುವಿನ ಯುದ್ಧವಾಗಿದೆ. ಈ ಯುದ್ಧ ತಡೆಯಲು ಶ್ರೀಕೃಷ್ಣ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಯುದ್ಧ ನಡೆಯಿತು. ಇದರ ಪರಿಣಾಮವಾಗಿ ಭಾರತದ ಅನೇಕ ರಾಜವಂಶಗಳು ಅಳಿದು ಹೋದವಲ್ಲದೆ ಯುದ್ಧಾನಂತರ ಮಹಾಭಾರತದಲ್ಲಿ ವರ್ಣಿಸಿದ ಭಾರತದ ಸ್ಥಿತಿಗತಿಯನ್ನು ನೋಡಿದ ಮೇಲೆ ಯುದ್ಧ ಎಂದಿಗೂ ಕೂಡ ಬೇಡ ಎನ್ನುವ ಅಭಿಪ್ರಾಯ ಬರುತ್ತದೆ ಎಂದು ನುಡಿದರು
ನಮ್ಮ ಸಂಸ್ಕೃತಿ ಎಂದರೆ ಯಾವುದೇ ಕಟ್ಟಡ, ದೇವಸ್ಥಾನ ಅಗೆಯುವುದಲ್ಲ. ಅನೇಕ ಉಳಿ ಪೆಟ್ಟು ಬಿದ್ದು ಈ ದೇವಸ್ಥಾನ ಆಗಿದೆ ಎಂದು ಒಪ್ಪಬೇಕು. ಹಲವು ಧರ್ಮಗಳ ಸಾರ ದೇವಸ್ಥಾನವಾಗಿದೆ. ಕವಿಗಳಿಗೆ ಯಾರನ್ನು ದ್ವೇಷಿಸುವ ಮನಸ್ಸು ಇಲ್ಲ, ಕೇವಲ ಪ್ರೀತಿಸುವ ಮನಸ್ಸು ಇದೆ. ನಮಗೆ ಇಂಗ್ಲಿಷ್ರ ಬಗ್ಗೆ ದ್ವೇಷ ಮಾಡಬೇಕೆಂದರೆ ಶೇಕ್ಸ್ಪಿಯರ್, ಮುಸ್ಲಿಂರನ್ನು ದ್ವೇಷ ಮಾಡಬೇಕೆಂದರೆ ಗಾಲಿಬ್ ಅಡ್ಡ ಬರುತ್ತಾನೆ. ಯಾವ ಧರ್ಮವನ್ನೇ ದ್ವೇಷಿಸಲು ಹೊರಟಾಗ ಆ ಧರ್ಮದಲ್ಲಿರುವ ಕವಿಯ ಪ್ರೀತಿ ನಮಗೆ ಅಡ್ಡ ಬರುತ್ತದೆ ಎಂದರು.
ಅತ್ಯಂತ ಕಷ್ಟದ ಕಾಲದಲ್ಲಿ ಉತ್ತಮ ಪ್ರೀತಿಯ ಕಾವ್ಯ ಹುಟ್ಟುತ್ತದೆ. ಕಾವ್ಯ ಯಾವಾಗಲೂ ನಮಗೆ ಹೊಸದನ್ನು ಹೇಳಲೇಬೇಕು. ಒಬ್ಬ ಆದಿವಾಸಿ ಕವಿ ಹೇಳುವಂತೆ ನಮ್ಮ ರೈತ ಹಸಿವಿನಿಂದ ಸಾಯುವ ಬದಲು ಆತ್ಮಹತ್ಯೆ ಮಾಡಿಕೊಳ್ಳಬೇಕು. ಏಕೆಂದರೆ ಆದಿವಾಸಿಗಳಿಗೆ ಸರ್ಕಾರದ ಯಾವುದೇ ವಸ್ತು ಸಿಗುವುದಿಲ್ಲ. ಸರ್ಕಾರಕ್ಕೆ ನಾವು ಇರುವುದೇ ಗೊತ್ತಿಲ್ಲ. ಆಳುವ ವರ್ಗದ ದ್ವೇಷ ಬಿಟ್ಟು ಯಾವುದು ನಮಗೆ ತಲುಪುವುದಿಲ್ಲ ಎಂದಿದ್ದಾನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಂಜಾನ್ ದರ್ಗಾ ಮಾತನಾಡಿ ಮಹಾಭಾರತದಲ್ಲಿ ತಮ್ಮಷ್ಟಕ್ಕೆ ತಾವೇ ಇದ್ದ ಮೂಲ ನಿವಾಸಿಗಳ ಪ್ರದೇಶದ ಮೇಲೆ ಬೆಂಕಿ ಹಾಕಿ ಅವರನ್ನು ಕೊಂದು ಓಡಿಸಿ ಆ ಜಾಗದಲ್ಲಿ ಅರಮನೆಯನ್ನು ಕಟ್ಟಲಾಯಿತು. ಮೇಲ್ವರ್ಗದ ಸಂಸ್ಕೃತಿ ಎಂದರೆ ಅದು ಹೊರಹಾಕುವ ಸಂಸ್ಕೃತಿಯಾಗಿದೆ. ಆದರೆ ಶರಣ ಸಂಸ್ಕೃತಿ ಒಳಗೊಳ್ಳುವ ಸಂಸ್ಕೃತಿಯಾಗಿದೆ ಎಂದರು.
ಲೇಖಕಿ ಸಬಿತಾ ಬನ್ನಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಶ್ಮಿ ಕೆ. ವಿಶ್ವನಾಥ ರಚನೆಯ ಸ್ಫೂರ್ತಿಯ ಚಿಲುಮೆ ಸುಧಾ ಮೂರ್ತಿ ಎಂಬ ಪುಸ್ತಕವನ್ನು ಹಾಸನದ ಪತ್ರಕರ್ತ ನಾಗರಾಜ್ ಹೆತ್ತೂರ್ ಲೋಕಾರ್ಪಣೆಗೊಳಿಸಿದರು. ಸಮ್ಮೇಳನದ ಅಧ್ಯಕ್ಷರ ಕುರಿತು ಕುವೆಂಪು ವಿ.ವಿ ಕನ್ನಡ ಭಾರತಿ ನಿರ್ದೇಶಕರಾದ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಮಾತನಾಡಿದರು. ತುಮಕೂರಿನ ಡಾ. ಶೈಲ ನಾಗರಾಜ್ ಸಮ್ಮೇಳನದ ಅಧ್ಯಕ್ಷರಿಗೆ ಗೌರವ ಪ್ರಧಾನ ಮಾಡಿದರು.
ರಮೇಶ್ ಗಬ್ಬೂರ್, ಶ್ರೀದೇವಿ ಕೆರೆಮನೆ, ಸಾತನೂರು ದೇವರಾಜು, ಡಾ. ಜಿ. ಪ್ರಶಾಂತ್ ನಾಯಕ್, ನೆಲ್ಲಿಕಟ್ಟೆ ಸಿದ್ದೇಶ್, ಡಾ.ಎಂ.ಜಿ. ದೇಶಪಾಂಡೆ, ಡಾ.ಕೆ.ಎಸ್. ಪವಿತ್ರ, ಪತ್ರಕರ್ತ ಎನ್. ಮಂಜುನಾಥ್, ಜಿ. ನಾಗವೇಣಿ ರೆಡ್ಡಿ, ಎಂ. ಶ್ರೀಕಾಂತ್, ಎಂ.ರಮೇಶ್ ಇವರುಗಳಿಗೆ ವಿವಿಧ ಪ್ರಶಸ್ತಿ ನೀಡಲಾಯಿತು.
ಕುವೆಂಪು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ಕುಲ ಸಚಿವ ಪ್ರೊ.ಆರ್. ತಿಮ್ಮರಾಯಪ್ಪ ಕವಿ ಕಾವ್ಯ ಸಮ್ಮೇಳನ ಉದ್ಘಾಟಿಸಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರಿನ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಡಾ. ಹಸೀನಾ ಎಚ್.ಕೆ., ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ, ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಡಾ. ಕೆ.ಜಿ. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯ ಟ್ರಸ್ಟಿಗಳಾದ ಡಾ.ನಾರಾಯಣ್ ಬಸವರಾಜ್, ದೇಸು ಆಲೂರು, ಸಮುದ್ರವಳ್ಳಿ ವಾಸು, ಡಾ.ಉಮರ್ ಬೀಜದಕಟ್ಟೆ ಭಾಗವಹಿಸಿದ್ದರು. ತಲಾ ೩೦ಜನ ಕವಿಗಳು ಭಾಗವಹಿಸಿದ್ದ ಮೂರು ಕವಿಗೋಷ್ಠಿ ನಡೆದವು.

