ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ನಗರದ ಟಿಬಿ ವೃತ್ತದ ಆಂಜನೇಯ ದೇವಸ್ಥಾನದ ಹಿಂಭಾಗ ದಲಿತ ಕಾಲೋನಿಯಲ್ಲಿ ಸಹಪಂಕ್ತಿ ಭೋಜನ ಮಾಡಿದ ಮಹಾರಾಜರಾದ ಯಧುವೀರ್ ಒಡೆಯರ್ ಮಾತನಾಡಿ ಸಮಸ್ತ ನಾಗರಿಕರಿಗೂ ಸಂವಿಧಾನದಿಂದ ಸಮಾನ ಹಕ್ಕುಗಳಿವೆ. ಯಾರೇ ಅಧಿಕಾರದಲ್ಲಿರಲಿ ನಾಗರೀಕರಿಗೆ ಸಮಾನ ಹಕ್ಕುಗಳಿರುತ್ತವೆ. ಅರ್ಧ ಸತ್ಯ ಮಂಡಿಸುವ ಮೂಲಕ ಅಪಪ್ರಚಾರ ಮಾಡುವ ಮಂದಿಗೆ ನಾವು ಉತ್ತರ ಕೊಡಬೇಕಿದೆ. ಕಾಂಗ್ರೆಸ್ ನವರು ಅಪಪ್ರಚಾರ ಮಾಡಿ ಸಂವಿಧಾನ ಬದಲಿಸುತ್ತಾರೆ ಎಂದರು .
ನಮ್ಮ ಪಕ್ಷದ ನಾಯಕರು ಎಂದೂ ಅಧಿಕೃತವಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಪಕ್ಷದ ಲಾಭಕ್ಕಾಗಿ ಸಂವಿಧಾನ ಬಳಸಿರುವವರು ಯಾರು ಸಂವಿಧಾನದ ಮೂಲಕ ಜನರನ್ನು ಸುಭದ್ರವಾಗಿಟ್ಟಿರುವವರು ಯಾರು ಎಂದು ಜನ ನೋಡಿದ್ದಾರೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ತಿದ್ದುಪಡಿಯ ಮೂಲಕ ಅಧಿಕಾರ ಉಳಿಸಿಕೊಳ್ಳುವ ಕೆಲಸ ಮಾಡಿದವರ ಬಗ್ಗೆ ಜನಕ್ಕೆ ತಿಳಿದಿದೆ.ಅಗತ್ಯ ಇರುವುದಕ್ಕಿಂತ ಹೆಚ್ಚಿನ ತಿದ್ದುಪಡಿ ಮಾಡಿದರು.
ಅದು ಸಂವಿಧಾನದ ಮೇಲೆ ನಡೆದ ಹಲ್ಲೆಯಾಗಿತ್ತು. ತಿದ್ದುಪಡಿ ಮಾಡುವ ನಿಯಮಗಳನ್ನೇ ತಿದ್ದುಪಡಿ ಮಾಡಿದರು. ಸಂಪೂರ್ಣ ಭಾರತದ ಅಭಿವೃದ್ಧಿ ನಮ್ಮ ಗುರಿ. 25 ಕೋಟಿ ಜನರನ್ನು ಪ್ರಧಾನಿಗಳು ಬಡತನದಿಂದ ಆಚೆ ತಂದಿದ್ದಾರೆ. ಮುಂದಿನ ಎರಡು ದಶಕಕ್ಕೆ ಭಾರತ ಎಷ್ಟು ಬಲಿಷ್ಠ ಇರಬೇಕೆಂದು ಪ್ರಧಾನಿ ಯೋಚಿಸಿದ್ದಾರೆ. ಮುಂಬರುವ ಪೀಳಿಗೆಯ ದೃಷ್ಟಿಯಿಂದ ನೀವೆಲ್ಲಾ ನಮಗೆ ಕೈಜೋಡಿಸಿ ಎಂದರು.
ವಿಪ ಸದಸ್ಯ ಕೆ ಎಸ್ ನವೀನ್ ಮಾತನಾಡಿ ಬಾಬಾ ಸಾಹೇಬರನ್ನು ಪ್ರತಿನಿತ್ಯ ಪೂಜೆ ಮಾಡಬೇಕು.ನಾವು ರಾಜ್ಯದ ಜಿಲ್ಲೆ, ತಾಲೂಕುಗಳಲ್ಲಿ ಭೀಮ ಸಂಗಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂಬೇಡ್ಕರ್ ರವರನ್ನು ಸೋಲಿಸಿದ್ದನ್ನು ಅವರ ಮೃತದೇಹವನ್ನು ಸಾಗಿಸಲು ಕೊಟ್ಟ ತೊಂದರೆಯನ್ನು ಎಲ್ಲರೂ ಕೇಳಿದ್ದೀರಿ.
ಈ ಕಾರ್ಯಕ್ರಮ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ . ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಜಗಜೀವನ್ ರಾಂ ರವರ ಕೊಡುಗೆ ಯಾರೂ ಮರೆಯಬಾರದು. ಸಂವಿಧಾನಕ್ಕೆ ಗೌರವ ಕೊಡುವಂತಹ ಬದುಕು ಬದುಕೋಣ ಎಂದರು.
ಲೇಖಕ ವಿಕಾಸ್ ಪುತ್ತೂರು ಮಾತನಾಡಿ ಬಾಬಾ ಸಾಹೇಬರು ಎಂದಿಗೂ ರಾಜಕೀಯ ಅಧಿಕಾರ ಪಡೆಯಬಾರದು ಎಂಬುದು ಕಾಂಗ್ರೆಸ್ ನವರ ನಿಲುವಾಗಿತ್ತು.
ಅಂಬೇಡ್ಕರ್ ರವರ ಬಗ್ಗೆ ಕಾಂಗ್ರೆಸ್ ನವರು ಸಾಕಷ್ಟು ಅಪಪ್ರಚಾರ ಮಾಡಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿದ್ದ ಅಷ್ಟೂ ದಿನವೂ ಬಾಬಾ ಸಾಹೇಬರ ವಿಚಾರ ಧಾರೆಗಳನ್ನು ಕಾಂಗ್ರೆಸ್ ನವರು ವಿರೋಧಿಸುತ್ತಾ ಬಂದರು.ಅವರ ಕಿರುಕುಳಕ್ಕೆ ಬೇಸತ್ತ ಅಂಬೇಡ್ಕರ್ ರವರು ನೆಹರೂ ರವರ ಕ್ಯಾಬಿನೆಟ್ ನಿಂದ ಹೊರ ಬರುತ್ತಾರೆ.
1952 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾಬಾ ಸಾಹೇಬರು ಯಾವುದೇ ಕಾರಣಕ್ಕೂ ಅಂಬೇಡ್ಕರ್ ಗೆಲ್ಲಬಾರದು ಎಂದು ಪ್ರಚಾರ ಮಾಡುತ್ತಾರೆ. ಆನಂತರ ಅವರನ್ನು ರಾಜ್ಯಸಭೆಗೆ ತಂದದ್ದು ಭಾರತೀಯ ಜನಸಂಘ. ಸಂವಿಧಾನವನ್ನು ತಿದ್ದುಪಡಿ ಮಾಡುತ್ತಿರುವುದು ಕಾಂಗ್ರೆಸ್ ನವರು. 50 ಕ್ಕೂ ಹೆಚ್ಚು ಅನುಚ್ಛೆದಗಳನ್ನು ಕಾಂಗ್ರೆಸ್ ನವರು ಬದಲಾಯಿಸಿದ್ದಾರೆ ಎಂದರು.

