ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಮುಂದಿನಬಜೆಟ್ನಲ್ಲಿ ಮಹಾತ್ಮ ಹೆಸರು ಘೋಷಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಫ್ರೀಡಂ ಪಾರ್ಕ್ನಲ್ಲಿ ನರೇಗಾಗೆ ತಿದ್ದುಪಡಿ ತಂದು ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೊಳಿಸಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಆಯೋಜಿಸಿದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ವಿಬಿ ಜಿ ರಾಮ್ಜಿ ಕಾಯ್ದೆ ದುರುದ್ದೇಶಪೂರ್ವಕ. ರಾಮ್ ಬರುವಂತೆ ವಿಬಿ ಜಿ ರಾಮ್ಜಿ ಹೆಸರಿಟ್ಟಿದ್ದಾರೆ. ಆದರೆ ಅಲ್ಲಿ ದಶರಥ ರಾಮ ಇಲ್ಲ, ಸೀತಾ ರಾಮಇಲ್ಲ, ಕೌಶಲ್ಯ ರಾಮ ಇಲ್ಲ. ಮನಮೋಹನ್ ಸಿಂಗ್ಅನೇಕ ವಿಚಾರಗಳಿಗೆ, ಸಮಸ್ಯೆಗಳಿಗೆ ಪರಿಹಾರ ಕೊಡುವ ಕಾಯ್ದೆಗಳನ್ನು ಮಾಡಿದ್ದರು.
ಬಡವರು, ಮಹಿಳೆಯರಿಗೆ ಕಾರ್ಯಕ್ರಮ ರೂಪಿಸೋದು ಕಾಂಗ್ರೆಸ್ ಮಾತ್ರ. ಆದರೆ ಬಿಜೆಪಿಯವರು ಅದನ್ನು ನಾಶ ಮಾಡುತ್ತಾರೆ. ಹಳ್ಳಿಗಾಡಿನಲ್ಲಿ ಉದ್ಯೋಗ ಸಿಗದಂತೆ ಮಾಡಿದ್ದಾರೆ ಎಂದು ಸಿಎಂ ವಾಗ್ಧಾಳಿ ನಡೆಸಿದರು.
ಆರ್ಎಸ್ಎಸ್ಬಿಜೆಪಿಯವರಿಗೆ ಮಾರ್ಗದರ್ಶನ ಮಾಡುತ್ತದೆ. ಬಡವರಿಗೆ ಹಣ ಸಿಗಬಾರದು, ಬಡವರು ಸೇವಕರಾಗಿಯೇ ಇರಬೇಕೆಂದು ಅವರ ಬಯಕೆ. ಬಡವರು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಇದ್ದ ಜಾಗದಲ್ಲೇ ಉದ್ಯೋಗ ಪಡೆಯಬಹುದಾಗಿತ್ತು. ಗ್ರಾಮ ಪಂಚಾಯ್ತಿಗಳಿಗೆ ಕೊಟ್ಟ ಅಧಿಕಾರ ಕಸಿದಿದ್ದಾರೆ. ಈಗ ಪಂಚಾಯ್ತಿಗಳ ಅಧಿಕಾರ ದಿಲ್ಲಿಗೆ ಹೋಗಿದೆ. ಕೆಲಸವನ್ನು ತೀರ್ಮಾನ ಮಾಡೋದು ಈಗ ದಿಲ್ಲಿಯಲ್ಲಿ. ಅವರು ಆಯ್ಕೆ ಮಾಡುವ ಪಂಚಾಯ್ತಿಗಳಲ್ಲಿ ಮಾತ್ರ ಕೆಲಸ ಸಿಗುತ್ತದೆ. ದಿಲ್ಲಿಯವರು ಹೇಳಿದಂತೆ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಯಾರಿಗೆ ಕೂಲಿ ಇಲ್ಲ ಉದ್ಯೋಗ ಇಲ್ಲ ಅವರಿಗೆ ಉದ್ಯೋಗ ಕೊಟ್ಟಿದ್ದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಸರ್ಕಾರ. ವಿಶ್ವ ಬ್ಯಾಂಕ್ ನರೇಗಾ ಯೋಜನೆ ಅತ್ಯುತ್ತಮ ಯೋಜನೆ ಅಂತ ಸರ್ಟಿಫಿಕೇಟ್ ಕೊಟ್ಟಿತ್ತು. ಗಾಂಧಿ ಹೆಸರನ್ನು ತೆಗೆದುಹಾಕಿ ಹೊಸ ರೂಪ ನೀಡಿದ್ದಾರೆ ಎಂದು ಹರಿಹಾಯ್ದರು. ಬಿಜೆಪಿಯವರು ಗ್ರಾಮೀಣ ಜನರಿಗೆ ರೋಗ ತರುತ್ತಿದೆ.
ನಾವು ಜೈಲಿಗೆ ಹೋಗೋದಕ್ಕೂ ರೆಡಿ ಇದ್ದೇವೆ. ನರೇಗಾ ಯೋಜನೆಗಾಗಿ ಸಚಿವರೆಲ್ಲ ಜೈಲಿಗೆ ಹೋಗುತ್ತೇವೆ. ಕುಮಾರಸ್ವಾಮಿ ಏನೋ ಮಾತಾಡ್ತಾನೆ, ಬರಲಿ ಚರ್ಚೆಗೆ. ನಾನು ಚರ್ಚೆಗೆ ಸಿದ್ದ ಇದ್ದೇನೆ. ಒಬ್ರೋ ಇಬ್ರೋ ತಪ್ಪು ಮಾಡ್ತಾರೆ ಅಂತ ಮೂಗನ್ನೇ ಕೊಯ್ಯೋದಕ್ಕಾಗುತ್ತಾ?. 6 ಸಾವಿರ ಗ್ರಾಮ ಪಂಚಾಯತ್ಗಳಿಗೆ ಮಹಾತ್ಮ ಗಾಂಧಿ ಹೆಸರನ್ನು ಇಡಬೇಕು ಅಂತ ಸಲಹೆ ಬಂದಿದೆ. ಇದು ಕಾಂಗ್ರೆಸ್ ಪಕ್ಷದ ತೀರ್ಮಾನ ಎಂದು ಇದೇ ವೇಳೆ ಡಿಕೆ ಶಿವಕುಮಾರ್ ತಿಳಿಸಿದರು.
ಕೇಂದ್ರ ಸರ್ಕಾರ ರೈತರ, ಕಾರ್ಮಿಕರ ಹಕ್ಕು, ಪಂಚಾಯ್ತಿ ಅಧಿಕಾರ ಕಸಿಯುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯ್ತಿಯಲ್ಲಿ ನರೇಗಾ ಕಾರ್ಮಿಕರನ್ನು ಒಳಗೊಂಡು ತಾಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪರಿಷತ್ ಸದಸ್ಯರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಬೇಕಿದೆ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಬಿಜೆಪಿ ಸರ್ಕಾರ ಬಡವರ, ಆದಿವಾಸಿಗಳ, ಹಿಂದುಳಿದವರ, ದಲಿತರ ಕೆಲಸ ಕಸಿದುಕೊಳ್ಳುತ್ತಿದೆ. ಬಡವರ ಅನ್ನಕ್ಕೆ ಕನ್ನ ಹಾಕಿದೆ. ಮನರೇಗಾ ಯೋಜನೆಯಿಂದ ಹಳ್ಳಿಯ ಜನರಿಗೆ ಕೆಲಸ ಮಾಡುವ ಹಕ್ಕು ನೀಡಲಾಗಿತ್ತು, ಆದರೆ ಅದನ್ನು ಕಸಿದುಕೊಳ್ಳಲಾಗಿದೆ. ಹೊಸ ಕಾಯ್ದೆಯಲ್ಲಿ 40% ರಾಜ್ಯ ಹಣ ನೀಡಬೇಕು ಎಂದು ಹೇಳಿದರು. ಸಿಎಂಯಾದಿಯಾಗಿ ಎಲ್ಲರೂ ಕಾರ್ಮಿಕರು ಧರಿಸುವ ಟವೆಲ್ ತಲೆಗೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
ರಾಜ್ಯಪಾಲರಿಗೆ ಮನವಿ: ಪ್ರತಿಭಟನೆಯ ಬಳಿಕ ಸಿಎಂ, ಡಿಸಿಎಂ, ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರು ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮೆಮೊರಾಂಡಂ ಸಲ್ಲಿಸಿದರು.
ಹೈಕೋರ್ಟ್ ನಡೆಯತ್ತಿರುವ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅನುಮತಿ ಇಲ್ಲದ ಕಾರಣ ಕೆಲವರು ಮಾತ್ರ ಬಸ್ ಮೂಲಕ ರಾಜಭವನಕ್ಕೆ ಹೋಗಿ ಮನವಿ ಸಲ್ಲಿಸಿದರು.

