ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರೇನೋ ಹೈಕಮಾಂಡ್ ಬಯಸುವವರೆಗೂ ನಾನೇ ಸಿಎಂ ಎಂದು ಪದೇ ಪದೇ ಪುನರುಚ್ಚಾರ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಮತ್ತೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಬಳಿ ಒಪ್ಪಂದ ಆಗಿದೆ, ಅಧಿಕಾರ ಹಂಚಿಕೆ ದೆಹಲಿಯಲ್ಲಿ 5-6 ನಾಯಕರ ನಡುವೆ ನಡೆದಿರುವ “ಗುಟ್ಟಿನ ವ್ಯಾಪಾರ” ಎಂದು ಹೇಳುತ್ತಾ ತಮ್ಮ ಕನಸು ನೆರವೇರಿಸಿಕೊಳ್ಳಲು ಗುಡಿ ಗೋಪುರ ಸುತ್ತುತ್ತಿದ್ದಾರೆ.
ಆದರೆ ಅತ್ತ ಹೈಕಮಾಂಡ್ ನೋಡಿದರೆ, ಇದು ರಾಜ್ಯ ಮಟ್ಟದಲ್ಲಿ ಸೃಷ್ಟಿ ಆಗಿರುವ ಗೊಂದಲ, ನೀವೇ ಬಗೆಹರಿಸಿಕೊಳ್ಳಿ ಎಂದು ಜಾರಿಕೊಳ್ಳುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಅವರಿಗೆ ಕರ್ನಾಟಕದ ಕಾಂಗ್ರೆಸ್ ನಲ್ಲಿ ಉದ್ಭವ ಆಗಿರುವ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಇಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಮಲ್ಲಿಕಾರ್ಜುನ್ ಖರ್ಗೆ ಅವರ ಅಸಹಾಯಕ ಮಾತುಗಳು ನಾನು ಹೇಳಿದ್ದು ಸತ್ಯ ಎಂದು ಸಾಬೀತುಪಡಿಸಿದೆ ಎಂದು ಅಶೋಕ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇಬ್ಬರ ಕುರ್ಚಿ ಕಿತ್ತಾಟದಲ್ಲಿ ಕರ್ನಾಟಕ ಅಭಿವೃದ್ಧಿ ಇಲ್ಲದೆ ಸೊರಗಬೇಕಾಗಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.

