ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕರ್ನಾಟಕ ಗೃಹ ಮಂಡಳಿಯು ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ, ಐಯ್ಯನಹಳ್ಳಿ, ಕಸಾಘಟ್ಟ ಗ್ರಾಮಗಳ 2,760 ಎಕರೆ ಭೂಮಿಯ ಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿ ನಡೆಸಿದರು.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಉಗ್ರಪ್ಪ ಮಾತನಾಡಿ ಸರ್ಕಾರ ಕರ್ನಾಟಕ ಗೃಹ ಮಂಡಳಿ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಿದೆ. ನಮ್ಮ ಭಾಗದಲ್ಲಿ ಇರುವುದೇ ಫಲವತ್ತಾತ ಭೂಮಿ. ಇದನ್ನೆ ನಂಬಿ ರೈತರು ಜೀವನ ನಡೆಸುತ್ತಿದ್ದಾರೆ. ಶೇ.೯೦ ರಷ್ಟು ಮಂದಿ ಹೈನುಗಾರಿಕೆಯನ್ನ ಅವಲಂಬಿಸಿದ್ದಾರೆ. ಈಗಾಗಲೇ ೫,೭೦೦ ಎಕರೆ ಭೂಮಿಯನ್ನು ಕ್ವಿನ್ ಸಿಟಿಗಾಗಿ ವಶಪಡಿಸಿಕೊಂಡಿದೆ.
ಈಗ 50:50 ಅನುಪಾತದಲ್ಲಿ ಕೆಎಚ್.ಬಿ ಭೂಸ್ವಾಧೀನ ಮಾಡಿಕೊಳ್ಳುತ್ತಿದೆ. ಇದಕ್ಕೆ ಐದು ಹಳ್ಳಿಗಳ ಜನ ತೀವ್ರ ವಿರೋಧ ಇದೆ. ಇದನ್ನು ಖಂಡಿಸಿ ನ.28 ರಂದು ಬೃಹತ್ ಹೋರಾಟ ನಡೆಸಲಾಗುವುದು ಎಂದರು. ಪ್ರತಿಭಟನೆಗೆ ರೈತಪರ, ಕನ್ನಡಪರ, ದಲಿತಪರ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಪ್ರಾಂತರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಪ್ರಭಾ ಬೆಳವಂಗಲ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಸರ್ಕಾರ ಭೂಮಿಯನ್ನ ಕಸಿದುಕೊಳ್ಳಲಾಗುತ್ತಿದೆ. ಈಗಾಗಲೇ ಸರ್ಕಾರ ಹೆದ್ದಾರಿ, ಕೆಐಎಡಿಬಿ, ಫೆರಿಫೆರಲ್ ರಸ್ತೆ, ಏರೋಸ್ಪೇಸ್, ಕ್ವಿನ್ ಸಿಟಿ ಹೀಗೆ ಹಲವು ಹೆಸರುಗಳಲ್ಲಿ ಸರ್ಕಾರ ಭೂಸ್ವಾಧೀನ ಮಾಡಿಕೊಂಡು ರೈತರನ್ನ ಒಕ್ಕಲೆಬ್ಬಿಸುತ್ತಿದ್ದಾರೆ.
ರೈತರಿಂದ ಭೂಮಿಯನ್ನ ಕಿತ್ತುಕೊಂಡರೆ ರೈತರ ಜೀವನ ಬೀದಿಗೆ ಬರಲಿದೆ. ಈ ಭಾಗದಲ್ಲಿ ರೈತರು ಸಲ್ಲಿಸಿದ್ದ ನಮೂನೆ ೫೭ ಅರ್ಜಿಯನ್ನ ವಜಾ ಮಾಡಿದ್ದಾರೆ. ನ. 28ರಂದು ತಾಲ್ಲೂಕು ಮತ್ತು ಜಿಲ್ಲಾದ್ಯಂತ ಸರ್ಕಾರ ಮಾಡುತ್ತಿರುವ ಭೂಸ್ವಾಧೀನವನ್ನ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಸಿ. ರಾಮಕೃಷ್ಣಯ್ಯ, ಅಧ್ಯಕ್ಷರಾದ ಉಗ್ರಪ್ಪ, ಕಾರ್ಯಾಧ್ಯಕ್ಷ ಸಿ.ಎಚ್. ರಾಮಕೃಷ್ಣಯ್ಯ, ಮುಖಂಡರಾದ ಸಂಜೀವನಾಯಕ್, ಚಂದ್ರತೇಜಸ್ವಿ, ರುದ್ರಾರಾಧ್ಯ, ಪ್ರಭಾಬೆಳವಂಗಲ, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಮುತ್ತೇಗೌಡ ಮುಂತಾದವರು ಉಪಸ್ಥಿತರಿದ್ದರು.

