ಚಂದ್ರವಳ್ಳಿ ನ್ಯೂಸ್, ಧಾರವಾಡ:
ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿರುವ ಘಟನೆ ಧಾರವಾಡದಲ್ಲಿ ಜರುಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಅನುಮತಿ ಇಲ್ಲದಿರುವುದರಿಂದಾಗಿ ಬಿಜೆಪಿ ನಾಯಕರು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಬರುವ ಮುಂಚೇಯೇ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ರಾಜ್ಯ ಸರ್ಕಾರ ಕೂಡಲೇ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಉದ್ಯೋಗ ಆಕಾಂಕ್ಷಿಗಳ ವಯೋಮಿತಿ ಹೆಚ್ಚಳ ಮಾಡಬೇಕು ಎಂದು ವಿದ್ಯಾರ್ಥಿಗಳು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು.
ಸಾವಿರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟ ಘಟನೆ ಕೂಡ ನಡೆಯಿತು. ಉದ್ಯೋಗ ಆಕಾಂಕ್ಷೆಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.
ಬಿಜೆಪಿ ಸಾಥ್:
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಶಾಸಕ ಅರವಿಂದ್ ಬೆಲ್ಲದ ಸೇರಿದಂತೆ ಬಿಜೆಪಿ ನಾಯಕತರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸಾಥ್ ನೀಡಿದ್ದಾರೆ.
ಶಾಸಕ ಬೆಲ್ಲದ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿ, ಓಡಿ ಹೋಗುವುದು ಬೇಡ ನಿಧಾನವಾಗಿ ಸಾಗಿ ಎಂದು ಮನವಿ ಮಾಡಿದರು. ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಪೊಲೀಸರ ವಶಕ್ಕೆ:
ಉದ್ಯೋಗಾಕಾಂಕ್ಷಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು, ಆಟೋದಲ್ಲಿಯೇ ಕೂರಿಸಿಕೊಂಡು ಕರೆದೊಯ್ದರು. ಈ ವೇಳೆ ವಿದ್ಯಾರ್ಥಿಗಳು ಆಟೋಗೆ ಮುತ್ತಿಗೆ ಹಾಕಿ ಆಕ್ರೋಶ
ಹೊರಹಾಕಿದರು. ಆರ್.ಅಶೋಕ್ ಕಿಡಿ:
ಕಳೆದ ಮೂರು ವರ್ಷಗಳಿಂದ ಇವರ ಯೋಗ್ಯತೆಗೆ ಹುದ್ದೆ ಸೃಷ್ಟಿ ಮಾಡಲು ಆಗಿಲ್ಲ, ಯಾವುದೇ ನೇಮಕಾತಿ ಮಾಡದೇ ಇರುವ ಸರ್ಕಾರ ಇದು ಎಂದು ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ಹರಿಹಾಯ್ದರು.
ಪ್ರತಿಭಟನೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಡವರ ಮಕ್ಕಳು ನೇಮಕಾತಿಗಾಗಿ ಕಾಯುತ್ತಿದ್ದಾರೆ. 2.85 ಲಕ್ಷ ಖಾಲಿ ಹುದ್ದೆಗಳು ಇವೆ. ಹಣಕಾಸು ಇಲಾಖೆ ಸಹ ಈಗಾಗಲೇ ಒಪ್ಪಿಗೆ ಕೊಟ್ಟಿದೆ. ಸರ್ಕಾರದಲ್ಲಿ ಹಣ ಇಲ್ಲ, ಹೀಗಾಗಿ ಇವರು ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ದೂರಿದರು.
ಖಾಲಿ ಇರುವ ಸರ್ಕಾರಿ ಹುದ್ದೆ ನೇಮಕ ಮಾಡಿದ್ರೆ ಸರ್ಕಾರದಲ್ಲಿ ವೇತನ ಕೊಡಲು ದುಡ್ಡಿಲ್ಲ, ಇಲ್ಲದಿದ್ದರೆ ಮೀನಾಮೇಷ ಯಾಕೆ ಮಾಡುತ್ತಿದ್ದರು?, ವಿದ್ಯಾರ್ಥಿಗಳ ಪ್ರತಿಭಟನೆಗೆ ಅನುಮತಿ ನೀಡುತ್ತಿಲ್ಲ, ಸರ್ಕಾರ ಯಾವುದೇ ರೀತಿಯಲ್ಲಿ ಏನೂ ಹೇಳುತ್ತಿಲ್ಲ. ಕೂಡಲೇ ನೇಮಕಾತಿ ಮಾಡಬೇಕು. ಹಂತ ಹಂತವಾಗಿ ನೇಮಕಾತಿ ಮಾಡ್ತೀವಿ ಅಂತ ಸಿಎಂ ಹೇಳ್ತಾರೆ. ಡಿಸಿಎಂ ಡಿಕೆಶಿ ಹೇಳ್ತಾರೆ ಇದು ರಾಜಕೀಯ ಪ್ರೇರಿತ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಇದ್ದಾಗ ಫ್ರೀಡಂ ಪಾರ್ಕ್ಗೆ ಇವರೇ ಹೋಗಿದ್ರು. ನಾವು ಮಾಡಿದ್ರೆ ರಾಜಕಾರಣ, ನೀವು ಮಾಡಿದ್ರೆ ಏನು? ಇವತ್ತು ನೀವು ನೇಮಕಾತಿ ಮಾಡಲಿಲ್ಲ ಅಂದ್ರೆ ರಾಜ್ಯಾದ್ಯಂತ ಪ್ರತಿಭಟನೆ ಆಗುತ್ತದೆ. ಇದನ್ನ ರಾಜ್ಯ ಸರ್ಕಾರ ಅರಿಯಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

