ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳಲ್ಲಿ ಗಣಿತ ಕಲಿಕೆಗೆ ಉತ್ತೇಜನ ನೀಡುವ ಮತ್ತು ಅವರಲ್ಲಿನ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ರೂಪಿಸಿರುವ “ಗಣಿತ ಗಣಕ” ವಿಶೇಷ ಕಾರ್ಯಕ್ರಮ ಅನುಷ್ಠಾನದಲ್ಲಿ ಪ್ರಸಕ್ತ ವರ್ಷ ಚಿತ್ರದುರ್ಗ ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆ ತೋರಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.
ಗಣಿತ ಗಣಕವು ಕರ್ನಾಟಕ ಸರ್ಕಾರದ ಪ್ರಮಾಣಾಧಾರಿತ ಪ್ರಮುಖ ಕಾರ್ಯಕ್ರಮವಾಗಿದ್ದು, 2024-25 ನೇ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಾಲಾ ಮಕ್ಕಳಲ್ಲಿ “ಮೂಲ ಸಂಖ್ಯಾಜ್ಞಾನ ಬಲಪಡಿಸುವ ಉದ್ದೇಶದಿಂದ ಜಾರಿಗೊಂಡಿದೆ. ಇದು ಒಂದು ವಿಶಿಷ್ಟ ದೂರವಾಣಿ ಆಧಾರಿತ ಟ್ಯೂಟರಿಂಗ್ ಕಾರ್ಯಕ್ರಮವಾಗಿದ್ದು, ಸರ್ಕಾರಿ ಶಾಲಾ ಶಿಕ್ಷಕರು 3, 4 ಮತ್ತು 5 ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಮ್ಮೆ ಒನ್-ಟು-ಒನ್ ಫೋನ್ ಆಧಾರಿತ ಟ್ಯೂಟರಿಂಗ್ ಕರೆಗಳನ್ನು ನಡೆಸುತ್ತಾರೆ, ಈ ಕರೆಗಳು ಪೋಷಕರ ಅಥವಾ ಪಾಲಕರ ಸಮ್ಮುಖದಲ್ಲೇ ನಡೆಯುವುದರಿಂದ, ಪೋಷಕರ ಸಕ್ರಿಯ ಭಾಗವಹಿಸುವಿಕೆ ಈ ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯವಾಗಿದೆ.
ಈ ವರ್ಷ ಚಿತ್ರದುರ್ಗ ಜಿಲ್ಲೆಯು ಗಣಿತ ಗಣಕ ಕಾರ್ಯಕ್ರಮ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆ ತೋರಿದ ಜಿಲ್ಲೆಯಾಗಿದೆ. ನವೆಂಬರ್ ಮೊದಲೇ ವಾರದಲ್ಲೇ ಜಿಲ್ಲೆಯ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಇತರ ಅನೇಕ ಜಿಲ್ಲೆಗಳಿಗಿಂತ ಮುಂಚಿತವಾಗಿ ಸಂಪೂರ್ಣ ಉತ್ಸಾಹದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಚಿತ್ರದುರ್ಗ ಜಿಲ್ಲೆಯ 151 ಕ್ಲಸ್ಟರ್ಗಳ ವ್ಯಾಪ್ತಿಯ 1,586 ಶಾಲೆಗಳ 2,400 ಕ್ಕೂ ಹೆಚ್ಚು ಶಿಕ್ಷಕರು ಕಾರ್ಯಕ್ರಮದ ಮೊದಲ ಸೈಕಲ್ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಪೂರ್ಣಗೊಳಿಸಿದ್ದಾರೆ.
ಸುಮಾರು 9,000 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭ ಪಡೆದಿದ್ದಾರೆ, ಪ್ರತಿ ವಿದ್ಯಾರ್ಥಿಗೂ ಆರು ವಾರಗಳ ಅವಧಿಯಲ್ಲಿ 04 ಸಂರಚಿತ ಟ್ಯೂಟರಿಂಗ್ ಕರೆಗಳನ್ನು (ಪರಿಚಯ ಮತ್ತು ಮೌಲ್ಯಮಾಪನ ಕರೆಗಳ ಜೊತೆಗೆ) ಮಾಡಲಾಗಿದೆ. ಚಿತ್ರದುರ್ಗವು ರಾಜ್ಯದಲ್ಲಿಯೇ ಈ ಕಾರ್ಯಕ್ರಮದ ಎರಡನೇ ಸೈಕಲ್ ಅನ್ನು ಇದೇ ಶೈಕ್ಷಣಿಕ ಸಾಲಿನಲ್ಲಿ ಯಶಸ್ವಿಯಾಗಿ ಪ್ರಾರಂಭಿಸಿರುವ ಜಿಲ್ಲೆಯಾಗಿದೆ.
ಅನುಷ್ಠಾನದ ಅವಧಿಯಲ್ಲಿ ಅನೇಕ ಪ್ರೇರಣಾದಾಯಕ ಘಟನೆಗಳು ಬೆಳಕಿಗೆ ಬಂದಿವೆ.

ಚಳ್ಳಕೆರೆ ಬ್ಲಾಕ್ನ ಚಿಗಟನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಂಗನಾಥ್ ಎಚ್, ಸಂಪರ್ಕ ಸಾಧನಗಳಿಲ್ಲದ ವಿದ್ಯಾರ್ಥಿಯೊಬ್ಬರಿಗೆ ಮೊಬೈಲ್ ಫೋನ್ ವ್ಯವಸ್ಥೆ ಮಾಡಿಕೊಡುವ ಮೂಲಕ ಮಾನವೀಯತೆ ಮತ್ತು ಬದ್ಧತೆ ಮೆರೆದಿದ್ದಾರೆ.
ಇನ್ನೊಂದು ಪ್ರಕರಣ ನೋಡುವುದಾದರೆ, ತರಗತಿಯಲ್ಲಿ ಸಾಮಾನ್ಯವಾಗಿ ಮೌನವಾಗಿರುವ ವಿದ್ಯಾರ್ಥಿಯೊಬ್ಬ, ಫೋನ್ ಟ್ಯೂಟರಿಂಗ್ ಕರೆಗಳ ವೇಳೆ ಅತ್ಯಂತ ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಿದನು ಎಂದು ಶಿಕ್ಷಕರು ಮಾಹಿತಿ ಹಂಚಿಕೊಂಡಿದ್ದಾರೆ. ಫೋನ್ ಮೂಲಕದ ಒನ್-ಟು-ಒನ್ ಟ್ಯೂಟರಿಂಗ್ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿದೆ.
ಕೆಲವು ಶಾಲೆಗಳಲ್ಲಿ, ವಿದ್ಯಾರ್ಥಿಗಳು ಎರಡು ಅಂಕಿ ಗಣಿತ ಕ್ರಿಯೆಗಳಲ್ಲಿ ಪ್ರಾವೀಣ್ಯತೆ ತೋರಿದ ನಂತರ, ಕಾರ್ಯಕ್ರಮದಲ್ಲಿ ಕಡ್ಡಾಯವಿಲ್ಲದಿದ್ದರೂ, ಶಿಕ್ಷಕರು ಮೂರು ಅಂಕಿ ಗಣಿತ ಕ್ರಿಯೆಗಳನ್ನು ಬೋಧಿಸಲು ಮುಂದಾಗಿದ್ದಾರೆ. ಇದು ಮೂಲ ಕಲಿಕಾ ಫಲಿತಾಂಶಗಳನ್ನು ಸಾಧಿಸುವ ಜಿಲ್ಲೆಯ ಶಿಕ್ಷಕರ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಪೋಷಕರ ಭಾಗವಹಿಸುವಿಕೆ ಮತ್ತು ಬೆಂಬಲದಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ. ವಿಶೇಷವಾಗಿ ತಾಯಂದಿರು ತಮ್ಮ ಮಕ್ಕಳೊಂದಿಗೆ ಟ್ಯೂಟರಿಂಗ್ ಕರೆಗಳ ಸಮಯದಲ್ಲಿ ಹಾಜರಿದ್ದು, ಮಕ್ಕಳ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಪೋಷಕರು ಸ್ವಯಂಪ್ರೇರಿತವಾಗಿ ಮೊಬೈಲ್ ಫೋನ್ಗಳನ್ನು ಖರೀದಿಸಿ, ತಮ್ಮ ಮಕ್ಕಳು ಟ್ಯೂಟರಿಂಗ್ ಕರೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಹಕರಿಸುತ್ತಿದ್ದಾರೆ.
ಒಟ್ಟಾರೆ, ಶಾಲಾ ಸಮಯದ ಹೊರಗೂ ಮಕ್ಕಳ ಕಲಿಕೆಗೆ ಹೆಚ್ಚುವರಿ ಪ್ರಯತ್ನಗಳನ್ನು ಮಾಡುತ್ತಿರುವ ಶಿಕ್ಷಕರಿಗೆ ಪೋಷಕರು ತೀವ್ರ ಸಂತೃಪ್ತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ವರದಿ ಮಾಡಿದ ಬೇಸ್ಲೈನ್ ಮತ್ತು ಎಂಡ್ಲೈನ್ ಡೇಟಾ ವಿಶ್ಲೇಷಣೆಯಿಂದ ಸ್ಪಷ್ಟವಾದ ಕಲಿಕಾ ಪ್ರಗತಿ ಕಂಡುಬಂದಿದೆ. ಎರಡು ಅಂಕಿ ಭಾಗಾಕಾರ ಸಮಸ್ಯೆಗಳನ್ನು ಪರಿಹರಿಸಬಲ್ಲ ವಿದ್ಯಾರ್ಥಿಗಳ ಪ್ರಮಾಣ ಶೇ.2 ರಿಂದ ಶೇ.22 ಕ್ಕೆ ಏರಿಕೆಯಾಗಿದೆ. ಸರಾಸರಿಯಾಗಿ, ವಿದ್ಯಾರ್ಥಿಗಳು ಆರು ವಾರಗಳ ಟ್ಯೂಟರಿಂಗ್ ಸೈಕಲ್ನಲ್ಲಿ 2.3 ಹೊಸ ಗಣಿತ ಕ್ರಿಯೆಗಳನ್ನು ಕಲಿತಿದ್ದಾರೆ.
ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲೇ ವಿಶಿಷ್ಟವಾಗಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯವನ್ನು (ಸಿಟಿಇ) ಕಾರ್ಯಕ್ರಮದ ಅನುಷ್ಠಾನಕ್ಕೆ ಒಳಪಡಿಸಿದೆ. 86 ಬಿ.ಇಡಿ. ವಿದ್ಯಾರ್ಥಿಗಳು ದೊಡ್ಡ ಶಾಲೆಗಳ ಶಿಕ್ಷಕರಿಗೆ ಬೆಂಬಲ ನೀಡಿ, 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟ್ಯೂಟರಿಂಗ್ ನೀಡಿದ್ದು, ಅವರಲ್ಲಿ ಸುಮಾರು ಶೇ.45 ವಿದ್ಯಾರ್ಥಿಗಳು ಭಾಗಾಕಾರ ಮಟ್ಟವನ್ನು ತಲುಪಿದ್ದಾರೆ. ಜಿಲ್ಲೆಯ ಶಿಕ್ಷಕರು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದು, ಈಗಾಗಲೇ ಎರಡನೇ ಸೈಕಲ್ನ ಟ್ಯೂಟರಿಂಗ್ ಅನ್ನು ಪ್ರಾರಂಭಿಸಿರುತ್ತಾರೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬಿ.ಇಡಿ ವಿದ್ಯಾರ್ಥಿಗಳು ಇನ್ನೂ 300 ವಿದ್ಯಾರ್ಥಿಗಳಿಗೆ ಬೆಂಬಲ ನೀಡಲಿದ್ದಾರೆ.
ಗಣಿತ ಗಣಕ ಕಾರ್ಯಕ್ರಮದ ಮೂಲಕ ಮೂಲ ಕಲಿಕಾ ಫಲಿತಾಂಶಗಳನ್ನು ಬಲಪಡಿಸುವಲ್ಲಿ ಚಿತ್ರದುರ್ಗದ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ತೋರಿರುವ ಸಮೂಹ ಶ್ರಮ ಮತ್ತು ಬದ್ಧತೆಗೆ ಜಿಲ್ಲೆಯ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

