ವೀರಯೋಧರ ತ್ಯಾಗ, ಬಲಿದಾನ ಸ್ಮರಿಸುವುದು ನಮ್ಮ ಕರ್ತವ್ಯ-ಸಚಿವ ಡಾ.ಪರಮೇಶ್ವರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೀರಯೋಧರು ತಮ್ಮ ಪ್ರಾಣ
, ತ್ಯಾಗದ ಮೂಲಕ ಯಾವುದೇ ಜಾತಿ ಭೇದ – ಭಾವವಿಲ್ಲದೇ ಹಗಲಿರುಳು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ದೇಶವನ್ನು ಹೊರಗಿನ ಅಕ್ರಮಣ ಹಾಗೂ ಅಂತರಿಕ ವಿಪತ್ತಿನಲ್ಲಿ ದೇಶದ ಭದ್ರತೆ, ಸಮಗ್ರತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ತ್ಯಾಗ ಬಲಿದಾನವನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.

ಇಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ರಾಜಭವನ (ಲೋಕಭವನ) ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಧರು ತಮ್ಮ ಕರ್ತವ್ಯ ನಿಷ್ಠೆ, ಶಿಸ್ತು ಮತ್ತು ಪ್ರಾಮಾಣಿಕತೆಗಾಗಿ ಹೆಸರುಗಳಿಸಿದ್ದು, ಸೈನಿಕರು ಪ್ರಕೃತಿಯ ತೀವ್ರ ವಿಕೋಪ ಹಾಗೂ ಕಠಿಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿ ದೇಶದ ಉನ್ನತಿಗೆ ಕಾರಣರಾಗಿದ್ದಾರೆ ಎಂದರು.

- Advertisement - 

ಸೈನಿಕರ ಕುಟುಂಬದ ಸುರಕ್ಷತೆ ಕಾಪಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ: ರಾಷ್ಟ್ರದ ಸಾರ್ವಭೌಮತ್ವ ಹಾಗೂ ಸಮಗ್ರತೆಯನ್ನು ಶತ್ರುಗಳಿಂದ ಕಾಪಾಡಲು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಸೈನಿಕರ ಕುಟುಂಬದ ಸುರಕ್ಷತೆಯನ್ನು ಕಾಪಾಡುವುದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಬದ್ಧ ಕರ್ತವ್ಯವಾಗಿದೆ. ದೇಶದಲ್ಲಿ ಬಲಿಷ್ಠ ರಕ್ಷಣಾ ಪಡೆಯನ್ನು ನಿರ್ಮಿಸಲು ಸಮರ್ಪಿತ ಮತ್ತು ಪ್ರೇರಿತ ಯುವಕರ ಅಗತ್ಯವಿದ್ದು, ಯುವಕರಲ್ಲಿ ಸಶಸ್ತ್ರ ಪಡೆಗಳ ಘನತೆ ಹಾಗೂ ಗೌರವದ ಬಗ್ಗೆ ಅರಿವು ಮೂಡಿಸುವುದಲ್ಲದೇ, ಸೈನ್ಯ ಪಡೆಗಳಲ್ಲಿ ಸೇರಲು ಪ್ರೇರೆಪಿಸುವ ಜವಾಬ್ದಾರಿಯೂ ನಮ್ಮ ಹೊಣೆಯಾಗಿರುತ್ತದೆ ಎಂದು ಹೇಳಿದರು.

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಹೊಸ ಅನ್ವೇಷಣೆಗಳ ಆವಿಷ್ಕಾರಕ್ಕೆ ಯುವಕರ ಸೇವೆ ಬಹಳ ಮುಖ್ಯವಾಗಿದೆ. ಹಾಗಾಗಿ ಯುವಕರು ಸೇನೆಗೆ ಸೇರಲು ಮುಂದಾಗಬೇಕೆಂದು ಕರೆ ನೀಡಿದರಲ್ಲದೇ, ಸೇನೆಗೆ ಸೇರುವುದರಿಂದ ಯುವಕರಲ್ಲಿ ಶಿಸ್ತು, ಸಂಯಮ, ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಸೈನಿಕರ ಪುನರ್ವಸತಿಗೆ ಅಗತ್ಯ ಸೌಲಭ್ಯ:
ಯುದ್ಧ ಕಾರ್ಯಾಚರಣೆಯಲ್ಲಿ ಮಡಿದ ವೀರಯೋಧರ ಕುಟುಂಬಕ್ಕೆ ಗಾಯಗೊಂಡ ಯೋಧರಿಗೆ ರಾಜ್ಯ ಸರ್ಕಾರದಿಂದ 50 ಲಕ್ಷಗಳ ಅನುದಾನ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಉಚಿತ ನಿವೇಶನ, ಮನೆ ನಿರ್ಮಾಣ ಮಾಡಲು  ಸಹಾಯಧನ, ಮಾಜಿ ಸೈನಿಕರ ಮೀಸಲಾತಿಯಡಿ ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಮಾಜಿ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕರ್ನಾಟಕ ಸರ್ಕಾರವು ಗಮನ ಹರಿಸಿ, ಅಂತಹ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ನಿರಂತರವಾಗಿ ಕಾರ್ಯ ನಿರ್ವಹಿಸಿ, ಎಲ್ಲಾ ಸಹಕಾರವನ್ನು ನೀಡಲು ಬದ್ಧವಾಗಿದೆ ಎಂದರು.

- Advertisement - 

ಹುತಾತ್ಮ ಯೋಧರನ್ನು ಗೌರವಿಸಲು ವೀರಗಲ್ಲು ಲೋಕಾರ್ಪಣೆ:
ರಾಜ್ಯದಲ್ಲಿ ಹುತಾತ್ಮ ಯೋಧರನ್ನು ಗೌರವಿಸಲು ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ಮಿಸಿ, 75 ಅಡಿ ಎತ್ತರದ ವೀರಗಲ್ಲನ್ನು ಕಾರ್ಗಿಲ್ ವಿಜಯ ದಿನದಂದು ಲೋಕಾರ್ಪಣೆ ಮಾಡಲಾಗಿದೆ. ಮಾಜಿ ಸೈನಿಕರ ಇತರೆ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಒಟ್ಟು 5 ಕೋಟಿ ರೂ.ಗಳನ್ನು ಕಳೆದ ಒಂದು ವರ್ಷದಲ್ಲಿ ಖರ್ಚು ಮಾಡಲಾಗಿದೆ ಎಂದರು.

ಶೌರ್ಯ ಪ್ರಶಸ್ತಿ ವಿಜೇತರಿಗೆ 1.5 ಕೋಟಿಯವರೆಗೆ ಅನುದಾನ ನೀಡುತ್ತಿರುವ ಕೆಲವೇ ಕೆಲವು ರಾಜ್ಯಗಳ ಸಾಲಿನಲ್ಲಿ ನಮ್ಮ ಕರ್ನಾಟಕ ರಾಜ್ಯವಿದೆ. ಹಲವಾರು ದಂಡನಾಯಕರನ್ನು ನೀಡಿರುವ ಈ ನಾಡಿನ ವೀರಯೋಧರ ಏಳಿಗೆಗಾಗಿ ನಮ್ಮ ಸರ್ಕಾರವು ಕಟಿಬದ್ಧವಾಗಿದೆ. ಮಾಜಿ ಸೈನಿಕರಿಗೆ ಎಲ್ಲ ವೃಂದಗಳ ರಾಜ್ಯ ಸರ್ಕಾರಿ ನೌಕರಿಗಳಲ್ಲಿ ಶೇಕಡ 10 ರಷ್ಟು ಮೀಸಲಾತಿ ನೀಡುತ್ತಿರುವ ಏಕೈಕ ರಾಜ್ಯ ನಮ್ಮದು ಎಂದರು.

ವಿವಿಧ ಇಲಾಖೆಗಳಲ್ಲಿ ಮಾಜಿ ಸೈನಿಕರ ನೇಮಕ:
ಕಳೆದ ಒಂದು ವರ್ಷದಲ್ಲಿ ನಮ್ಮ ಸರ್ಕಾರ ವಿವಿಧ ಇಲಾಖೆಗಳಲ್ಲಿ ಸುಮಾರು 416 ಮಾಜಿ ಸೈನಿಕರನ್ನು ನೇಮಕ ಮಾಡಿಕೊಂಡಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಜಿ ಸೈನಿಕರನ್ನು ಹಲವು ಇಲಾಖೆಗಳ ವಿಭಾಗಕ್ಕೆ ನೇಮಕ ಮಾಡಲು ಯೋಜಿಸಲಾಗಿದೆ.

ಹುತಾತ್ಮ ಯೋಧರ ಕುಟುಂಬಗಳ, ಗಾಯಗೊಂಡ ಯೋಧರ, ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಹಾಗೂ ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿಗಾಗಿ ಕಟಿಬದ್ಧರಾಗಿದ್ದು, ಸಾಧ್ಯವಿರುವ ಎಲ್ಲ ರೀತಿಗಳಲ್ಲೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಈ ಸಂದರ್ಭದಲ್ಲಿ ತಾನು ಎಲ್ಲಾ ರಕ್ಷಣಾ ಸಿಬ್ಬಂದಿಗಳಿಗೆ ಹಾಗೂ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಮುಂಬರುವ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತ ಎಲ್ಲರಿಗೂ ಸಮೃದ್ಧಿ ತರಲೆಂದು ಹಾರೈಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣೆಗೆ ಅತಿ ಹೆಚ್ಚು ನಿಧಿ ಸಂಗ್ರಹಿಸಿದ ಜಿಲ್ಲೆಗಳು, ವಿವಿಧ ಇಲಾಖೆ ಹಾಗೂ ಸಂಸ್ಥೆಗಳಿಗೆ ಪಾರಿತೋಷಕ ವಿತರಿಸಲಾಯಿತು.

ಹುತಾತ್ಮ ಹೊಂದಿದ ಯೋಧರ ಕುಟುಂಬಗಳಿಗೆ ಹಣಕಾಸಿನ ನೆರವು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾದ ಏರ್‍ವೈಸ್ ಮಾರ್ಷಲ್ ಕೆ.ಎನ್. ಸಂತೋಷ್ ವಿಎಸ್‍ಎಮ್ (ನಿವೃತ್ತ), ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ವಿ.ಶರತ್ ಚಂದ್ರ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ರಭಾರ ನಿರ್ದೇಶಕರಾದ ಫ್ಲೈಟ್ ಲೆಫ್ಟಿನೆಂಟ್ ಎಮ್ ಎಸ್ ಲೋಲಾಕ್ಷ, ವಾಯುಸೇನೆ, ನೌಕಾಸೇನೆ, ರಕ್ಷಣಾ ಪಡೆಯ ಅಧಿಕಾರಿಗಳು, ಸಿಬ್ಬಂದಿ, ಮಾಜಿ ಸೈನಿಕರು, ಮಾಜಿ ಸೈನಿಕ ಕುಟುಂಬಸ್ಥರು, ಎನ್‍ಸಿಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Share This Article
error: Content is protected !!
";