ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿ ಆದ್ಯತಾ ಕಾರ್ಡ್ಗೆ ಆದಾಯ ಮಿತಿ ಹೆಚ್ಚಿಸುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಭರವಸೆ ನೀಡಿದರು.
ಈ ಸಂಬಂಧ ಮಂಗಳವಾರ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗೆ ಒದಗಿಸಿದ್ದ ಉತ್ತರದ ಬಗ್ಗೆ ಅರ್ಧ ಗಂಟೆ ಕಾಲಾವಧಿ ಚರ್ಚೆ ವೇಳೆ, ಶಾಸಕ ಅಶ್ವತ್ಥ ನಾರಾಯಣ್ ಮಾತನಾಡಿ, ಬಿಪಿಎಲ್ ಕಾರ್ಡಿನ ಆದಾಯ ಮಿತಿ ಪರಿಷ್ಕರಣೆ ಆಗಬೇಕು. 2017ರಲ್ಲಿ 1.20 ಲಕ್ಷ ರೂ. ಆದಾಯ ಮಿತಿ ನಿಗದಿಯಾಗಿತ್ತು. ಈಗ ಆದಾಯ ಮಿತಿ ಪರಿಷ್ಕರಣೆ ಮಾಡಬೇಕಾಗಿದೆ. ಆಹಾರ ಭದ್ರತಾ ಕಾಯ್ದೆ ಪ್ರಕಾರ ನಗರ ಪ್ರದೇಶದಲ್ಲಿ 50% ಜನರಿಗೆ ಆದ್ಯತಾ ಕಾರ್ಡ್ ಕೊಡಬೇಕು. ಗ್ರಾಮೀಣ ಭಾಗಕ್ಕೆ 70% ಕೊಡಬೇಕು ಎಂದಿದೆ. 2011ರ ಸೆನ್ಸಸ್ ಪ್ರಕಾರ ಬೆಂಗಳೂರಲ್ಲಿ 83,98,537 ಜನರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಷನ್ ಕಾರ್ಡ್ ಕೊಟ್ಟಿರುವುದು 7.10 ಲಕ್ಷಕ್ಕೆ ಮಾತ್ರ. ಇಂದಿನ ಜನಸಂಖ್ಯೆ ಪರಿಗಣಿಸಿದರೆ ಅದು 15% ಕೂಡ ಇಲ್ಲ ಎಂದರು.
ಇಂದು ಬೆಂಗಳೂರಲ್ಲಿನ ಬಡವರು, ವಿಧವೆಯರು, ವಿಕಲಚೇತನರು ಹಾಗೂ ಆಟೋ ಚಾಲಕರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಬೆಂಗಳೂರಿನ ಜನಪ್ರತಿನಿಧಿಯಾಗಿ ಬಡವರ ಪರ ನಾವು ಏನು ಕೆಲಸ ಮಾಡಿಲ್ಲ ಎಂಬ ಪಶ್ಚಾತಾಪ ಆಗುತ್ತಿದೆ. 200 ರೂ.ಸೀರೆ ಕೊಡುತ್ತೇವೆ ಅಂದರೆ ಸಾಕು, ಸಾವಿರಾರು ಜನ ಕ್ಯೂನಲ್ಲಿ ನಿಲ್ಲುತ್ತಾರೆ. ಬೆಂಗಳೂರಿನತಲಾ ಆದಾಯ ಚೆನ್ನಾಗಿದೆ ಎಂದು ಹೇಳುತ್ತೇವೆ. ಆದರೆ ಹೇಳುವುದಕ್ಕೆ ಬೇಸರ ಆಗುತ್ತದೆ. ಆದ್ಯತಾ ಕಾರ್ಡ್ಗಳನ್ನು ಆಹಾರ ಭದ್ರತಾ ಕಾಯ್ದೆಯಂತೆ ನಗರ ಪ್ರದೇಶಗಳಲ್ಲಿ 50% ಜನರಿಗೆ ಕೊಡಲು ಮನವಿ ಮಾಡುತ್ತೇನೆ ಎಂದು ಕೋರಿದರು.
ಇದಕ್ಕೆ ಉತ್ತರಿಸಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಪಿಎಲ್ ಕಾರ್ಡ್ 50-55%ಗಿಂತ ಮೇಲೆ ಹೋಗಿಲ್ಲ. ಆದರೆ, ಪ್ರಗತಿ ಪಥದಲ್ಲಿನಕರ್ನಾಟಕದಲ್ಲಿ ಸುಮಾರು 73% ಬಿಪಿಎಲ್ ಕಾರ್ಡ್ ಕೊಡುತ್ತಿದ್ದೇವೆ. 500 ಕೂಲಿ ತೆಗೆದುಕೊಳ್ಳುವ ಕಾರ್ಮಿಕರಿಗೂ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಆಡಳಿತ ಸುಧಾರಣಾ ಆಯೋಗ ಕನಿಷ್ಠ ಆದಾಯ ಮಿತಿಯನ್ನು 3 ಲಕ್ಷ ರೂ.ಗೆ ಏರಿಸಲು ಶಿಫಾರಸು ಮಾಡಿದೆ. ಅದರಂತೆ ತೀರ್ಮಾನ ತೆಗೆದುಕೊಂಡರೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂಬ ಆಶ್ವಾಸನೆ ಕೊಡುತ್ತೇನೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಸಮಯ ನಿಗದಿ ಮಾಡಿ, ಅಧಿಕಾರಿಗಳ ಜೊತೆ ಸಭೆ ನಡೆಸಿ ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ವಿಶೇಷವಾಗಿ ವಿಧವೆಯರು, ಅಂಗವಿಕಲರು, ಬಡವರು, ಕೂಲಿ ಕಾರ್ಮಿಕರು ಹಾಗೂ ಹಿರಿಯರು ಇದ್ದರೆ ಅವರ ಬಗ್ಗೆ ಪರಿಶೀಲನೆ ಮಾಡುತ್ತೇವೆ. 1.20 ಲಕ್ಷ ಆದಾಯ ಮಿತಿಯನ್ನು ಆಡಳಿತ ಸುಧಾರಣಾ ಆಯೋಗದ ವರದಿಯಂತೆ 3 ಲಕ್ಷ ರೂ.ಗೆ ಏರಿಕೆ ಮಾಡಬೇಕಾಗಿದೆ. ಆಡಳಿತ ಸುಧಾರಣಾ ಆಯೋಗದ ವರದಿಯನ್ನು ಸರ್ಕಾರದ ಮುಂದೆ ತರಲೇಬೇಕು. ಕನಿಷ್ಠ 3 ಲಕ್ಷ ರೂ. ಆದಾಯ ಮಿತಿ ಮಾಡಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.
ಹಲವು ಸೌಲಭ್ಯಗಳನ್ನು ಕೊಟ್ಟರೂ ಬಿಪಿಎಲ್ ಕಾರ್ಡ್ಗೆ ಅರ್ಜಿಗಳು ಸಾಕಷ್ಟು ಬರುತ್ತಿವೆ. ಕೇಂದ್ರ ಸರ್ಕಾರ ಮಾಹಿತಿ ನೀಡಿದಂತೆ, ರಾಜ್ಯದಲ್ಲಿ 7.76 ಲಕ್ಷ ಕಾರ್ಡ್ಗಳು ಬಿಪಿಎಲ್ಗೆ ಅರ್ಹವಾಗಿಲ್ಲ ಎಂದಿದೆ. ಅದನ್ನು ಮರುಪರಿಶೀಲಿಸಿ, ಅವರನ್ನು ಎಪಿಎಲ್ಗೆ ತರಬೇಕು ಎಂದು ನಿರ್ದೇಶನ ನೀಡಿದೆ. ಅದರಂತೆ 50% ಪರಿಶೀಲನೆ ಮಾಡಲಾಗಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಬೆಂಗಳೂರು ನಗರದ 28 ಮತ ಕ್ಷೇತ್ರಗಳಲ್ಲಿ ಪರಿಶೀಲನೆ ಮಾಡಿ ವಾಸ್ತವಾಂಶ ತೆಗೆದುಕೊಳ್ಳುತ್ತೇವೆ. ಎರಡು ತಿಂಗಳಲ್ಲಿ ವರದಿ ತರಿಸಿ ಆದಾಯ ಮಿತಿ ಪರಿಷ್ಕರಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

