ಚಂದ್ರವಳ್ಳಿ ನ್ಯೂಸ್, ದಾಂಡೇಲಿ:
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಆರ್.ವಿ ದೇಶಪಾಂಡೆ ಅವರು ಉಚಿತ ಗ್ಯಾರಂಟಿ ಯೋಜನೆಗಳ ಕುರಿತು ತೀವ್ರ ವ್ಯಂಗ್ಯವಾಡಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಮಾತನಾಡಿದ ಹಳಿಯಾಳ ಶಾಸಕ ದೇಶಪಾಂಡೆ ಅವರು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಒಂದಾ ಎರಡಾ? ಸರ್ಕಾರ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಮಹಿಳೆಯರಿಗೆ 2000 ರೂ. ಕೊಟ್ಟರು. ಅಲ್ಲದೆ, ಮಹಿಳೆಯರಿಗೆ ಉಚಿತ ಬಸ್ ಯೋಜನೆಯಿಂದ ಎಲ್ಲಿ ನೋಡಿದರೂ ಬಸ್ಸುಗಳಲ್ಲಿ ಮಹಿಳೆಯರೇ ಇರುತ್ತಾರೆ. ಸರ್ಕಾರಿ ಬಸ್ಗಳಲ್ಲಿನ ಪರಿಸ್ಥಿತಿ ಬಗ್ಗೆ ಹೇಳೋದು ಬೇಡ. ಬಸ್ನಲ್ಲಿ ಹೋದರೂ ಮಹಿಳೆಯರೇ, ದೇಗುಲಕ್ಕೆ ಹೋದರೂ ಮಹಿಳೆಯರೇ. ಸರ್ಕಾರಿ ಬಸ್ಸುಗಳಲ್ಲಿ ಯಾರಾದರೂ 4 ಜನ ಗಂಡಸರು ಹೋಗುವುದೇ ಕಷ್ಟ ಆಗಿದೆ.
ನಾನು ಸಿಎಂ ಆಗಿದ್ದರೆ ಇವುಗಳನ್ನೆಲ್ಲ ಮಾಡುತ್ತಿರಲಿಲ್ಲ ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದರು. ಇಂತಹ ಯೋಜನೆಗಳನ್ನೆಲ್ಲ ಸಿದ್ದರಾಮಯ್ಯ ನೀಡಿದ್ದಾರೆ. ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಹೀಗೆ ಹಲವು ಯೋಜನೆ ನೀಡಿದ್ದಾರೆ.
ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ 10 ಅಕ್ಕಿ ನೀಡಲಾಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ತೊಗರಿ ಸೇರಿದಂತೆ ಬೇರೆ ಬೇರೆ ದಿನಸಿ ಕೊಡಲು ನಿರ್ಧಾರ ಮಾಡಿದ್ದಾರೆ ತಗೊಂಡೋಗಿ ಮಾರಾಟ ಮಾಡ್ರೀ ಎಂದು ಶಾಸಕ ದೇಶಪಾಂಡೆ ವ್ಯಂಗ್ಯವಾಗಿ ತಿಳಿಸಿದರು.
ಹಿರಿಯ ಕಾಂಗ್ರೆಸ್ ಶಾಸಕರ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಸಭೆಯಲ್ಲಿದ್ದವರೆಲ್ಲ ಜೋರಾಗಿ ನಗುತ್ತಿರುವುದು ಕಂಡುಬಂದಿದೆ. ಮುಂದುವರಿದು, ಸಿದ್ದರಾಮಯ್ಯ ಏನೇನೇನು ಮಾಡುತ್ತಿದ್ದಾರೋ ನನಗೂ ಗೊತ್ತಿಲ್ಲ, ನಮಗೆಲ್ಲ ಗೊತ್ತಾಗುತ್ತಿಲ್ಲ. ನಾವು ಅವರಿಗೆ ಬಹಳ ಹತ್ತಿರದವರು. ಆದರೂ ಅವರೇನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗಲ್ಲ ಎಂದು ದೇಶಪಾಂಡೆ ಅವರು ಕಾಲೆಳೆದರು.

