ಚಂದ್ರವಳ್ಳಿ ನ್ಯೂಸ್, ಮೈಸೂರು:
ಶಾಸಕ ಜಿ.ಟಿ.ದೇವೇಗೌಡರು ದೊಡ್ಡವರಿದ್ದಾರೆ. ಅವರು ನೀಡಿರುವ ಹೇಳಿಕೆ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ನಂತರ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು. ಜನರು ಅಧಿಕಾರ ಕೊಟ್ಟಿದ್ದಾರೆ, ಜನರಿಗೆ ಏನು ಮಾಡುತ್ತಿದ್ದೀರಾ?, ಯಾರಿಗೋಸ್ಕರ ಒಂದಾಗಿದ್ದಾರೆ. ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿ ಅವರು ನೀಡುತ್ತಿರುವ ಕಿರುಕುಳದಿಂದಾಗಿ ಜನರು ಹಳ್ಳಿ ಬಿಟ್ಟು ಹೋಗುತ್ತಿದ್ದಾರೆ. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಕೇವಲ ಕುರ್ಚಿಗಾಗಿ ಚರ್ಚೆ ಆಗುತ್ತಿದೆ. ಎಷ್ಟು ದಿನ ಇರ್ತೀರಾ ಅನ್ನುವುದು ಮುಖ್ಯವಲ್ಲ.
ದೇವರಾಜ ಅರಸು ಅವರಿಗೆ ಸರಿ ಸಮನಾಗಿ ಅಂಥ ಸಿದ್ದರಾಮಯ್ಯ ಹೇಳ್ತಾರೆ. ಇನ್ನೂ ಐದು ವರ್ಷ ನೀವೇ ಅಧಿಕಾರದಲ್ಲಿರಿ. ಮುಂದೆಯೂ ನೀವೆ ಇರಿ. ಜನರಿಗೆ ಕೊಡುತ್ತಿರುವ ಸಾಲದ ಹೊರೆ ಕಡಿಮೆ ಮಾಡಿ. 2 ಸಾವಿರದಿಂದ ಬಡವರನ್ನು ಆರ್ಥಿಕವಾಗಿ ಬೆಳೆಸುತ್ತೇವೆ ಅಂತಿರುವುದು ಇದೇನಾ? ಮೈಕ್ರೋ ಫೈನಾನ್ಸ್ ಯಾವುದೇ ಅನುಮತಿ ಪಡೆಯದೇ ಅಣಬೆ ರೀತಿ ಹುಟ್ಟಿವೆ. ಯಾವ ರೀತಿ ಅವರ ಮೇಲೆ ಕಡಿವಾಣ ಹಾಕಿದ್ದೀರಿ? ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದರು.
ದೇಶದ ಬೇರೆ ಬೇರೆ ರಾಜ್ಯದ ಪ್ರಮುಖರು ದಾವೋಸ್ಗೆ ಹೋಗಿ ಬಂಡವಾಳ ತರುತ್ತಿದ್ದಾರೆ. ನೀವು ಏನ್ ಮಾಡುತ್ತಿದ್ದೀರಾ? ಎಂದು ಕಾಂಗ್ರೆಸ್ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಖಾಸಗಿ ಹಣಕಾಸು ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ನೀಡುವ ಕಿರುಕುಳ ತಪ್ಪಿಸಲು 2018ರಲ್ಲಿ ಖುಣಮುಕ್ತ ಕಾಯ್ದೆ ಜಾರಿಗೆ ತಂದಿದ್ದೇನೆ. ಆದರೆ ಬಿಲ್ ಏನಾಯ್ತು? ವಿಧಾನಸಭೆಯಲ್ಲಿ ಬಿಲ್ ಸಹ ಪಾಸ್ ಆಗಿದೆ. ರಾಷ್ಟ್ರಪತಿಗಳ ಬಳಿಗೆ ನಾನೇ ಹೋಗಿ ಅಂಕಿತ ತೆಗೆದುಕೊಂಡು ಬಂದೆ. ಬಂಡೆಪ್ಪ ಕಾಂಶಪೂರ ಅವರನ್ನು ಕೇರಳಕ್ಕೆ ಕಳುಹಿಸಿ ಈ ಬಗ್ಗೆ ಸಾಕಷ್ಟು ಮಾಹಿತಿ ಕೆಲ ಹಾಕಿದೆ ಎಂದು ತಿಳಿಸಿದರು.