ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತೊಗರಿ ಬೆಳೆ ನಷ್ಟದ ವಿಮೆ ಪರಿಹಾರ ದೊರಕಿದ್ದು ರೈತರಿಗೆ ಸಂತೋಷ ತಂದಿದ್ದು ನಾವು ಸದಾ ರೈತರ ಪರವಾಗಿ ಇದ್ದೇವೆ. ಇದರ ಜೊತೆಗೆ ತಾಲೂಕಿನ ಶೇಂಗಾ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಬೆಳೆ ವಿಮೆ ಬಿಡುಗಡೆ ಸಂಬಂಧ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸುವುದಾಗಿ ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.
ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಶನಿವಾರ ತೊಗರಿ ಬೆಳೆಗಾರರ ಸಂಘದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಳೆ ಕೊರತೆಯಿಂದ ಬೆಳೆ ನಷ್ಟ ಅದ ಕೂಡಲೇ ಪ್ರತಿ ಹಂತದಲ್ಲಿ ಹೋರಾಟ ಮಾಡಿದ ಫಲವಾಗಿ ತೊಗರಿ ಬೆಳೆಗಾರರಿಗೆ ಇದೇ ಮೊದಲ ಬಾರಿಗೆ ಮಧ್ಯಂತರ ಬೆಳೆ ನಷ್ಟದ ವಿಮೆ ಹಣ ಬಿಡುಗಡೆ ಆಗಿದೆ. ಸುಮಾರು ೩೮೫೦ ತೊಗರಿ ಬೆಳೆಗಾರರಿಗೆ ಸುಮಾರು ೩.೫೨.೮೭೦೦೦ ರೂಗಳನ್ನು ವಿಮಾ ಕಂಪನಿಗಳಿಂದ ಜಮಾ ಮಾಡಿಸಲಾಗಿದೆ.
ರೈತರು ಕಷ್ಟಪಟ್ಟು ಬೆಳೆಗಳನ್ನು ಬೆಳೆಯಲು ಪ್ರಯತ್ನಿಸಿರುತ್ತಾರೆ. ಆದರೆ ಬೆಳೆ ನಷ್ಟವಾದ ಸಂದರ್ಭದಲ್ಲಿ ಪರಿಹಾರ ದೊರೆತರೆ ರೈತರಿಗೆ ಆಸರೆಯಾಗುವ ಮೂಲಕ ಮರಳಿ ಕೃಷಿಗೆ ಸಹಕಾರಿಯಗಾಲಿದೆ ಎಂದರು.
ತೊಗರಿ ಬೆಳೆ ಮಾದರಿಯಲ್ಲಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಶೇಂಗಾ ಬೆಳೆ ನಷ್ಟದ ವರದಿ ಆಧರಿಸಿ ವಿಮೆ ಬಿಡುಗಡೆಗೆ ಸರ್ಕಾರ ಮತ್ತು ಕೃಷಿ ಸಚಿವರ ಬಳಿ ಪ್ರಸ್ತಾಪ ಮಾಡುವುದಾಗಿ ಭರವಸೆ ನೀಡಿದ್ದಾರೆ.
ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಸಿ. ಶಿವಲಿಂಗಪ್ಪ ಮಾತನಾಡಿ, ವಿಮಾ ಕಂಪನಿಗಳು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿವೆ.
ಪ್ರಸಕ್ತ ವರ್ಷದ ಬೆಳೆ ಹಾನಿಗೆ ವಿಮೆ ಕೊಡುವುದಾಗಿ, ಕಂತು ಕಟ್ಟಿಸಿಕೊಂಡು ಹಿಂದಿನ ಏಳು ವರ್ಷಗಳ ಬೆಳೆಯ ಸರಾಸರಿ ಇಳುವರಿಗೆ ತಾಳೆ ಮಾಡುವುದರಿಂದ ರೈತರಿಗೆ ಮೋಸವಾಗುತ್ತಿದೆ. ಈ ನಿಯಮ ಬದಲಾಗಬೇಕು ಎಂದರು.
ಬಯಲು ಸೀಮೆಯಲ್ಲಿ ಮಳೆ ನಂಬಿಕೊಂಡು ಕೃಷಿ ಮಾಡುವುದು ದುಸ್ಸಾಹಸವಾಗಿದೆ. ಶಾಸಕರ ನೆರವಿನಿಂದ ಕೃಷಿ ಸಚಿವರು ಮತ್ತು ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಹೋರಾಟ ನಡೆಸಿದ ಫಲವಾಗಿ, ೩,೮೫೦ ರೈತರಿಗೆ ಮಧ್ಯಂತರ ಬೆಳೆ ವಿಮೆ ಸಿಕ್ಕಿದೆ. ಶೇಂಗಾ ಬೆಳೆ ಕಳೆದುಕೊಂಡ ರೈತರಿಗೆ ವಿಮೆ ಬಿಡುಗಡೆ ಮಾಡಿಸಲು ಶಾಸಕರು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ. ಮಂಜುನಾಥ್, ದಯಾನಂದ ಮೂರ್ತಿ, ಭರತೇಶ್ರೆಡ್ಡಿ, ವೀರಣ್ಣ, ಧನಂಜಯ ರೆಡ್ಡಿ, ಸಂದೀಪ್, ಸಿದ್ದೇಶ್ವರ ರೆಡ್ಡಿ ಮತ್ತು ಸ್ಥಳೀಯ ಮುಖಂಡರು ಹಾಜರಿದ್ದರು.

