ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರಸ್ತುತ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದೆ. ಶಿಕ್ಷಣ ಇಲಾಖೆಯ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಶ್ರಮವಹಿಸುವ ಸಂದರ್ಭ ಒದಗಿದೆ. ಪ್ರತಿವರ್ಷವೂ ಉತ್ತಮ ಫಲಿತಾಂಶ ಒದಗಿಸುವ ಜವಾಬ್ದಾರಿ ಶಿಕ್ಷಕಸಮೂಹದ್ದಾಗಿದ್ದು, ಅದೇ ರೀತಿ ವಿದ್ಯಾರ್ಥಿಗಳು ವಿನಯದಿಂದ ವಿದ್ಯೆ ಕಲಿತು ಸಮಾಜಕ್ಕೆ ಮಾದರಿಯಾಗಬೇಕೆಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ತಾಲ್ಲೂಕಿನ ಬಾಲೇನಹಳ್ಳಿ ಇಂದಿರಾಗಾಂಧಿ ಸರ್ಕಾರಿ ವಸತಿಶಾಲೆಗೆ ಅವರು ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ಶಿಕ್ಷಣದ ಬಗ್ಗೆ ಚರ್ಚೆ ನಡೆಸಿದರಲ್ಲದೆ, ಶಾಲೆಯ ವಾತಾವರಣ ಹಾಗೂ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಪ್ರತಿದಿನವೂ ಶಿಕ್ಷಕರು ನಿಮಗಾಗಿ ಉತ್ತಮ ಬೋಧನೆ ನೀಡುತ್ತಾರೆಂದು ನಾನು ಭಾವಿಸಿದ್ದೇನೆ. ಶಿಕ್ಷಕರ ಬೋಧನೆಯನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು, ಸಮಸ್ಯೆ ಇದ್ದರೆ ಕೂಡಲೇ ಶಿಕ್ಷಕರೊಂದಿಗೆ ಚರ್ಚಿಸಿ, ಶಿಕ್ಷಣವನ್ನು ಕಲಿಯುವ ಸಂದರ್ಭದಲ್ಲಿ ಯಾವ ವಿದ್ಯಾರ್ಥಿಯೂ ಅಸಡ್ಡೆ ತೋರಬಾರದು ಎಂದರು.
ಇದೇ ಸಂದರ್ಭದಲ್ಲಿ ಕಳೆದ ೨೦೨೪-೨೫ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಈ ಶಾಲೆ ಶೇ.೧೦೦ರ ಸಾಧನೆ ದಾಖಲಿಸಿದ್ದು, ಸಂತಸ ತಂದಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲೂ ಉತ್ತಮ ಶಿಕ್ಷಣಕ್ಕೆ ಶಿಕ್ಷಕರ ಸಮೂಹ ಆದ್ಯತೆ ನೀಡುತ್ತಿದೆ. ಈ ಬಾರಿಯೂ ಈ ಶಾಲೆ ನೂರರ ಫಲಿತಾಂಶ ದಾಖಲಿಸುವತ್ತ ಗಮನಹರಿಸಬೇಕೆಂದರು.
ಶಾಲೆಯ ಮುಖ್ಯ ಶಿಕ್ಷಕ ಎನ್.ನಾಗರಾಜುಗೋಪಾಲ್ಪುರ್, ಸಹ ಶಿಕ್ಷಕರಾದ ಬಿ.ಎನ್.ಕೇಶವಮೂರ್ತಿ, ಸುರೇಶ್ ಅಣ್ಣಪ್ಪ ಬಂಡಗಾರ್, ಟಿ.ವಿನೋದಮ್ಮ, ಎನ್.ಎಂ.ಉಷಾ, ಬಿ.ನಿಂಗಣ್ಣ, ಸೋಮುಚೌವ್ಹಾಣ್, ಎಚ್.ಆಶಾ, ಕೆ.ವಸಂತಕುಮಾರಿ, ಮಾದರಿ, ಆರ್.ಎಲ್.ಐಶ್ವರ್ಯ, ರಜನಿ, ತಿಪ್ಪಮ್ಮ, ಗಿರಿಜಮ್ಮ, ಸೌಮ್ಯ, ನಾಗರಾಜು ಮುಖಂಡರಾದ ಗೊಂಚಿಗಾರಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.

