ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಆಸರೆ ಆಗಿರುವ ಭದ್ರಾ ಮೇಲ್ದಂಡೆ ಯೋಜನೆ, ತ್ವರಿತಗತಿಯಲ್ಲಿ ಜಾರಿಗೊಳಿಸುವಂತೆ ಶಾಸಕ ಟಿ.ರಘುಮೂರ್ತಿ ವಿಧಾನಸಭಾ ಪ್ರಶ್ನೋತ್ತರ ಕಲಾಪದಲ್ಲಿ ಧ್ವನಿ ಎತ್ತಿದರು.
ಕಳೆದ ಎರಡು ದಶಕಗಳಿಂದ ಕಾಮಗಾರಿ ಕುಂಟುತಲೆ ಸಾಗುತ್ತಿದೆ. ಅದಕ್ಕೆ ಅಗತ್ಯ ಇರುವ 5300 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ, ರಾಜ್ಯ ಸರ್ಕಾರವು ಸೂಕ್ತವಾಗಿ ಸ್ಪಂದಿಸುತ್ತಿಲ್ಲ, ಚಳ್ಳಕೆರೆ ತಾಲೂಕಿನ ಸುಮಾರು 51, ಮೊಳಕಾಲ್ಮೂರು ತಾಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು ಸುಮಾರು 710. 92 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಪೂರ್ಣಗೊಳಿಸಬೇಕಿದೆ. ಇದರಿಂದ ಚಿತ್ರದುರ್ಗ,ತುಮಕೂರು, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸಲು ಸಹಕಾರಿಯಾಗಲಿದೆ. ಈ ಯೋಜನೆ 2018 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಿದೆ.
ಆದರೂ ಸಹ ಕಾಮಗಾರಿಗೆ ಮಾತ್ರ ಪೂರ್ಣಗೊಳ್ಳುತ್ತಿಲ್ಲ, ಮಧ್ಯ ಕರ್ನಾಟಕದ ಈ ಜಿಲ್ಲೆಗಳಲ್ಲಿ 5.57. 022 ಎಕರೆ ಭೂಪ್ರದೇಶಕ್ಕೆ 29.90 ಟಿಎಂಸಿ ನೀರು ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ಕಲ್ಪಿಸುವ ಯೋಜನೆ ಇದಾಗಿದ್ದು, 367 ಕೆರೆಗಳಿಗೆ ಶೇಕಡ 50ರಷ್ಟು ನೀರು ತುಂಬಿಸುವ ಉದ್ದೇಶವನ್ನು ಯೋಜನೆ ರೂಪಿಸಲಾಗಿದೆ.
ಇದರಿಂದ ಈ ನಾಲ್ಕು ಜಿಲ್ಲೆಗಳ ಸಾವಿರಾರು ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯದ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆಯೂ ಆಗಲಿದೆ. ಮಧ್ಯ ಕರ್ನಾಟಕದ ಈ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಇದಕ್ಕೆ ವೇಗ ಕಲ್ಪಿಸಿ, ದಶಕದ ಕನಸನ್ನು ನನಸಾಗಿಸುವತ್ತ ಮಾಡಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಯ ನೀರು ಎಲ್ಲಾ ಕೆರೆಗೂ ತುಂಬುವಂತಾಗಲಿ. ಇದನ್ನು ಸಿಎಂ, ಡಿಸಿಎಂ ಹಾಗೂ ಸಂಬಂಧಪಟ್ಟ ಸಚಿವರು ಕಾಮಗಾರಿಗೆ ವೇಗವನ್ನು ನೀಡಲು ಮುಂದಾಗಬೇಕಿದೆ.
ಈಗಾಗಲೇ ಸರ್ಕಾರ ತಿಳಿಸಿದಂತೆ ಫೆಬ್ರವರಿ ಅಂತ್ಯಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸಿ ಈ ನಾಲ್ಕು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಭರವಸೆಯನ್ನು ನೀಡಿದ್ದು, ಆದರೆ ಮಾರ್ಚ್ ಕಳೆಯುತ್ತಿದ್ದರು ಕಾಮಗಾರಿ ಮಾತ್ರ ಅದೇ ಹಂತದಲ್ಲಿದೆ. ಇದಕ್ಕೆ ಅಗತ್ಯವಿರುವ ಹಣವನ್ನು ನಮ್ಮ ಸಂಸದರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಬಿಡುಗಡೆ ಮಾಡಿಸಬೇಕು ಹಾಗೂ ರಾಜ್ಯ ಸರ್ಕಾರ ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ನಾಲ್ಕು ಜಿಲ್ಲೆಯ ರೈತರಿಗೆ ಸಹಕಾರಿಸಬೇಕು ಎಂದು ಮನವಿ ಮಾಡಿದರು. ಚಿತ್ರದುರ್ಗ ಶಾಖೆ 3 ಪ್ಯಾಕೇಜ್ ಗಳಲ್ಲಿ 18.48 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬುದು ತಿಳಿಸಲಾಗುತ್ತದೆ.
ಆದರೆ, ಕಡೂರು ತಾಲೂಕಿನ ಯಳಗೊಂಡನಹಳ್ಳಿ, ಕುರುಬರಹಳ್ಳಿ, ಅಣ್ಣಿಗೆರೆ ಮತ್ತು ಮಲ್ಲಾಪುರ ಗ್ರಾಮದ ಒಟ್ಟು 221 ಎಕರೆ 1.12 ವಿಸ್ತೀರ್ಣ ಖರೀದಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಆದರೆ, ಎಲ್ಲಾ ತೊಡಕುಗಳನ್ನು ವೇಗವಾಗಿ ಪೂರ್ಣಗೊಳಿಸಿ ಅಗತ್ಯವಿರುವ ಹಣವನ್ನು ಬಿಡುಗಡೆಗೊಳಿಸಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕರು ಒತ್ತಾಯಿಸಿದರು.
ಉಪಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕಖರ್ಗೆ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಚಾನಲ್ ನಿರ್ಮಾಣಕ್ಕೆ ಈಗಾಗಲೇ ಹಣಬಿಡುಗಡೆಗೊಳಿಸಿದ್ದು, ಕಾಮಗಾರಿ ಆರಂಭವಾಗಿದೆ. ಚಿತ್ರದುರ್ಗ ಜಿಲ್ಲೆ ಚಾನಲ್ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸಂಬAಧಪಟ್ಟ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸುವರು. 2028ರೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

