ಗ್ರಾಮೀಣ ಜನರು ನಿರಾಶರಾದಂತೆ ಆಡಳಿತ ಮಂಡಳಿ ಎಚ್ಚರ ವಹಿಸಬೇಕು: ಶಾಸಕ ರಘುಮೂರ್ತಿ
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ದಿಯ ಕನಸನ್ನು ಕಂಡ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸದಾಕಾಲ ಗ್ರಾಮದ ಅಭಿವೃದ್ದಿ ಬಗ್ಗೆ ಚಿಂತನೆ ನಡೆಸುತ್ತಿದ್ದರು.
ಅವರ ಚಿಂತನೆ ಫಲವಾಗಿ ರಾಜ್ಯಸರ್ಕಾರ ಗ್ರಾಮೀಣಾಭಿವೃದ್ದಿ ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಿಸಿ ಗ್ರಾಮೀಣ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶುಕ್ರವಾರ ದೊಡ್ಡೇರಿ ಗ್ರಾಪಂ ಆವರಣದಲ್ಲಿ ೪೧ ಲಕ್ಷ ವೆಚ್ಚದಲ್ಲಿ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ದೊಡ್ಡೇರಿ ಗ್ರಾಮದಲ್ಲಿ ಕಳೆದ ಹಲವಾರು ದಶಕಗಳಿಂದ ಗ್ರಾಮ ಪಂಚಾಯಿತಿಯ ಚಟುವಟಿಕೆ ನಡೆಸಲು ಸುಸಜ್ಜಿತ ಕಟ್ಟಡದ ಅವಶ್ಯಕತೆ ಇದ್ದು ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರದ ಮೂಲಕ ಗ್ರಾಪಂ ಆಡಳಿತವನ್ನು ಸುಲಲಿತವಾಗಿ ನಡೆಸುವ ಅವಕಾಶ ನೀಡಲಾಗಿದೆ. ಗ್ರಾಪಂ ಆಡಳಿತ ಗ್ರಾಮದ ಅಭಿವೃದ್ದಿಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಶಶಿಧರ, ಗ್ರಾಮೀಣ ಭಾಗದ ಅಭಿವೃದ್ದಿಯ ಬಗ್ಗೆ ನಮ್ಮ ಇಲಾಖೆ ಸರ್ಕಾರದ ನಿಯಮಗಳುಸಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ರಾಜ್ಯದೆಲ್ಲೆಡೆ ಕೊರೋನಾ ಕಂಟಕ ಕಾಡುವ ಸಂದರ್ಭದಲ್ಲಿ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುರಕ್ಷತೆಯೂ ಸೇರಿದಂತೆ ಎಲ್ಲಾ ರೀತಿಯ ಬಿಗಿಕ್ರಮಗಳನ್ನು ಶಾಸಕ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತು. ಗ್ರಾಮಪಂಚಾಯಿತಿ ಆಡಳಿತ ಜನರ ಮೆಚ್ಚುಗೆಗಳಿಸುವ ನಿಟ್ಟಿನಲ್ಲಿ ಅಧ್ಯಕ್ಷರೂ ಸೇರಿದಂತೆ ಎಲ್ಲರೂ ಕಾರ್ಯನಿರ್ವಹಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ.ಓಂಕಾರಪ್ಪ, ದೊಡ್ಡೇರಿ ಗ್ರಾಪಂ ಕೇಂದ್ರ ಚಳ್ಳಕೆರೆ ನಗರಕ್ಕೆ ಸಮೀಪವಿದ್ದು, ಹೆಚ್ಚಿನ ಜನರು ತಮ್ಮಕೆಲಸ ಕಾರ್ಯಗಳಿಗಾಗಿ ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಪ್ರತಿನಿತ್ಯ ಆಗಮಿಸುತ್ತಾರೆ.
ಗ್ರಾಮಪಂಚಾಯಿತಿಯ ಚುನಾಯಿತ ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗ ಗ್ರಾಮದ ಅಭಿವೃದ್ದಿಯ ಬಗ್ಗೆ ಅಪಾರವಾದ ವಿಶ್ವಾಸ, ಗೌರವಹೊಂದಿದ್ದು, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ಧಾರೆ. ಗ್ರಾಮಪಂಚಾಯಿತಿ ಮಟ್ಟದ ಅಭಿವೃದ್ದಿ ಕುರಿತಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ಧಾರ್ ರೇಹಾನ್ಪಾಷ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಫೇಸ್ವಾಮಿ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ಗ್ರಾಪಂ ಉಪಾಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ಸದಸ್ಯರಾದ ಎಂ.ಸೌಮ್ಯ, ಸುವರ್ಣ, ಎ.ಆನಂದ, ಆರ್.ಸಿರಿಗೊಂಡಪ್ಪ, ಎ.ಶೇಖರಪ್ಪ, ಸಿ.ಶಿಲ್ಪ, ಎಸ್.ಶಿವಣ್ಣ, ಬಿ.ದೇವರಾಜ, ಎಸ್.ಪ್ರಭುಕುಮಾರ್, ಪಿಡಿಒ ಜಿ.ಪಾಲಣ್ಣ, ಕುಕ್ಕಲಓಬಯ್ಯ, ಸಿ.ವೆಂಕಟೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

