ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯಾಗಲು ನಮ್ಮ ಮಧ್ಯ ಕರ್ನಾಟಕ ಭಾಗವಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ತೆರೆಯಬೇಕೆಂದು ಶಾಸಕ ಟಿ. ರಘುಮೂರ್ತಿ ಬುಧವಾರ ಬಜೆಟ್ ಅಧಿವೇಶನದಲ್ಲಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ಕೇಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣವಿದ್ದು ಇದರ ಸುತ್ತಲಿನ ಭಾಗದಲ್ಲೇ ೨ನೇ ಏರ್ಪೋರ್ಟ್ ತೆರೆಯುವ ನಿಟ್ಟಿನಲ್ಲಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಇದಕ್ಕೂ ಮುನ್ನ ತುಮಕೂರು ಜಿಲ್ಲೆಗೆ ಕೊಡಬೇಕೆಂದು ತುಮಕೂರು ಜಿಲ್ಲೆಯ ನಾಯಕರು ಆಗ್ರಹಿಸಿದ್ದರು. ಇದರ ಈಗ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲು ಏರ್ ಪೋರ್ಟ್ ಆರಂಭಿಸಬೇಕೆಂಬ ಬೇಡಿಕೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮುನ್ನೆಲೆಗೆ ತಂದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಈಗಾಗಲೇ ಐಐಎಸ್ಸಿ, ಇಸ್ರೋ, ಡಿಆರ್ಡಿಒ ಮತ್ತು ಬಾರ್ಕ್ ಹೀಗೆ ನಾಲ್ಕು ವೈಜ್ಞಾನಿಕ ಸಂಸ್ಥೆಗಳು ಸುಮಾರು ೧೦ ಸಾವಿರ ಎಕರೆ ಪ್ರದೇಶದಲ್ಲಿ ನೆಲೆಗೊಳ್ಳುವ ಮೂಲಕ ವಿಶ್ವ ಭೂಪಟದಲ್ಲಿ ಚಳ್ಳಕೆರೆ ಗುರುತಿಸುವಂತಾಗಿದೆ. ಭವಿಷ್ಯದಲ್ಲಿ ಈ ವೈಜ್ಞಾನಿಕ ಸಂಸ್ಥೆಗಳಿಂದ ರಾಜಕಾರಣಿಗಳು, ವಿಜ್ಞಾನಿಗಳು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುವುದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ೨ನೇ ಇಂಟರ್ನ್ಯಾಷನಲ್ ಏರ್ಪೋರ್ಟ್ ತೆರೆದರೆ ಬರದ ನಾಡು, ಬಯಲು ಸೀಮೆಯ ಅಭಿವೃದ್ಧಿಗೆ ಪೂರಕವಾಗುವುದು ಮತ್ತು ಉತ್ತರ ಕರ್ನಾಟಕದ ಭಾಗಕ್ಕೂ ಅನುಕೂಲವಾಗುವುದು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆಗೆ ಹೊಸ ಸ್ಪರ್ಶ ನೀಡಲು ಏರ್ ಪೋರ್ಟ್ ಅಗತ್ಯವಿದೆ. ಜಿಲ್ಲೆಯ ಹೊಸ ಉದ್ಯೋಗ ಸೇರಿ ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಆಗಲು ಸಾಧ್ಯವಾಗುತ್ತದೆ ಎಂದು ವಿಧಾನ ಸಭೆಯಲ್ಲಿ ಮಾತನಾಡುವ ಮೂಲಕ ಹೊಸ ಚರ್ಚೆಗೆ ಶಾಸಕ ಟಿ.ರಘುಮೂರ್ತಿ ಗ್ರಾಸವಾಗಿದ್ದಾರೆ.
“ತುಮಕೂರು ಜಿಲ್ಲೆಗೆ ಎರಡನೇ ಏರ್ ಪೋರ್ಟ್ ಮಾಡಲು ಸರ್ಕಾರಕ್ಕೆ ಅನೇಕರು ಒತ್ತಾಯಿಸುತ್ತಿದ್ದಾರೆ. ಅದರ ಜೊತೆಗೆ ಮಧ್ಯ ಕರ್ನಾಟಕದ ರಾಜಧಾನಿಯಂತೆ ಇರುವ ಚಿತ್ರದುರ್ಗ ಜಿಲ್ಲೆಯಲ್ಲಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ಮಾಡಿ ಆರಂಭಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದು ಮುಂದೆ ಸರ್ಕಾರಕ್ಕೆ ಸಹ ಅಲ್ಲಿ ಏರ್ ಪೋರ್ಟ್ ಮಾಡಿದರೇ ಆಗುವಂತಹ ಅನುಕೂಲದ ಬಗ್ಗೆ ಮಾಹಿತಿ ಸರ್ಕಾರಕ್ಕೆ ಮನವರಿಕೆ ಮಾಡುತ್ತೇನೆ”.
ಟಿ.ರಘುಮೂರ್ತಿ, ಅಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಶಾಸಕರು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ.