ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ 1400 ಜಾತಿ ಪಟ್ಟಿಯಲ್ಲಿ 48 ಹಿಂದು ಜಾತಿಗಳನ್ನು ಕ್ರಿಶ್ಚಿಯನ್ ಎಂದು ಗುರುತಿಸಿತ್ತು .
ಈ 48 ಜಾತಿಗಳಲ್ಲಿ 15 SC ಜಾತಿಗಳು, 1 ST ( ವಾಲ್ಮೀಕಿ ಕ್ರಿಶ್ಚಿಯನ್ ) ಜಾತಿಗಳಿದ್ದವು. ರಾಜ್ಯದಾದ್ಯಂತ ತೀವ್ರ ಸ್ವರೂಪ ಹೋರಾಟ ನೆಡೆದ ನಂತರ ನಿನ್ನೆ ಆಯೋಗದ ಅಧ್ಯಕ್ಷರು 33 ಹಿಂದು ಜಾತಿಗಳನ್ನು ಕ್ರೈಸ್ತ ಪಟ್ಟಿಯಿಂದ ಸಮೀಕ್ಷೆಗೆ ಬಳಸುವ App ನಲ್ಲಿ ‘ Hide ‘ ಮಾಡಿರುವುದಾಗಿ ಹೇಳಿದ್ದಾರೆ. ಹೀಗೆ ಅಧಿಕೃತವಾಗಿ ತೆಗೆಯದೇ ಉಳಿದಿರುವ ಜಾತಿಗಳೆಲ್ಲವೂ ಪರಿಶಿಷ್ಟ ಜಾತಿಗಳೇ ಆಗಿರುವುದು ಆತಂಕದ ಬೆಳವಣಿಗೆಯಾಗಿದೆ ಎಂದು ಚಿತ್ರದುರ್ಗ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್ ಜಿ ಎಚ್ ತಿಳಿಸಿದ್ದಾರೆ.
ಆದಿ ಆಂಧ್ರ ಕ್ರಿಶಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡುಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಮಾಲಾ ಕ್ರಿಶ್ಚಿಯನ್, ಪರಯ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಈ ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಅನ್ನು ಸಮೀಕ್ಷೆಯ App ನಲ್ಲಿ ಕಿತ್ತು ಹಾಕಿದ ಅಧಿಕೃತ ಪ್ರಕಟಣೆಯನ್ನು ಈಗಲೇ ಆಯೋಗ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ವಿಷಯದಲ್ಲಿ ಹಿಂದುಳಿದ ವರ್ಗಗಳ ಆಯೋಗ 33 ಕ್ರೈಸ್ತ ಜಾತಿಗಳಬಗ್ಗೆ ಸ್ಪಷ್ಟನೆ ಕೊಟ್ಟು ಉಳಿದ 13 ದಲಿತ ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಡದೆ ಕತ್ತಲಲ್ಲಿ ಇಟ್ಟಿರುವುದು ಸಮರ್ಥನೀಯವಲ್ಲ. ಈಗಾಗಲೇ ಸಮೀಕ್ಷೆ ಆರಂಭವಾಗಿದೆ. ಆದರೆ ಪರಿಶಿಷ್ಟ ಜಾತಿಗಳಲ್ಲಿ ಗೊಂದಲಗಳು ಹಾಗೆ ಉಳಿದಿವೆ ಅಂದರೆ ಈ ಜಾತಿ ಸಮೀಕ್ಷೆಗೆ ಗೌರವ ಎಲ್ಲಿಂದ ಬರುತ್ತದೆ ? ಎಂದು ಮೋಹನ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಲಿತರ ನಡುವೆ ಕ್ರೈಸ್ತ ಜಾತಿಗಳನ್ನು ಸೇರಿಸಿಕೊಂಡು ಜಾತಿ ಸಮೀಕ್ಷೆ ಮಾಡುವುದು ಸಂವಿಧಾನ ವಿರೋಧಿಯಾದದ್ದು. ಸಂವಿಧಾನದ 341ನೇ ವಿಧಿಯ ಅನ್ವಯ ಇಲ್ಲದ ಜಾತಿಪಟ್ಟಿ ಹಿಡಿದು ಸಮೀಕ್ಷೆ ಮಾಡಲು ನಾವು ಬಿಡುವುದಿಲ್ಲ . ಕ್ರಮಬದ್ಧತೆಯೇ ಇಲ್ಲದ ಈ ಜಾತಿ ಸಮೀಕ್ಷೆಯ ಗೊಂದಲದ ಹಿಂದೆ ಕೊಳಕು ರಾಜಕಾರಣದ ಹುನ್ನಾರ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೆ ನ್ಯಾ ನಾಗಮೋಹನ್ ದಾಸ್ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡಿದೆ. ಅದಕ್ಕೆ ದಲಿತರ ಮೀಸಲು ನಿಧಿಯಿಂದ 150 ಕೋಟಿ ರೂ ವ್ಯಯಿಸಲಾಗಿದೆ. ಈಗ ಮತ್ತೆ ದಲಿತರ ಸಮೀಕ್ಷೆ ಮಾಡುವ ಅಗತ್ಯ ಏನಿದೆ? ಎರಡು ತಿಂಗಳಲ್ಲಿ ದಲಿತರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿರುತ್ತದೆ? ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕ್ರೈಸ್ತರ ಸೇರ್ಪಡೆಯಿಂದ ಸಮೀಕ್ಷೆ ನಗೆಪಾಟಲಿಗೆ ಗುರಿಯಾಗಿದೆ. ಸರ್ಕಾರ ಇಡೀ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾಂಗ್ರೆಸ್ ಹೈಕಮಾಂಡ್ ಓಲೈಸಲು ಸಾಮಾಜಿಕ ನ್ಯಾಯದ ಹಿತ ಬಲಿಕೊಡಲಾಗಿದೆ ಎಂದು ಮೋಹನ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಒಳಮೀಸಲಾತಿಯ ವರ್ಗೀಕರಣದ ವಿಷಯ ಇನ್ನೂ ಬಗೆಹರಿದಿಲ್ಲ. ಸರ್ಕಾರ 59 ಅಲೆಮಾರಿ ಜಾತಿಗಳನ್ನು ಬೀದಿ ಪಾಲು ಮಾಡಿದೆ. AK, AD, AA ಜಾತಿಗಳ ಸಮಸ್ಯೆ ಬಗೆಹರಿದಿಲ್ಲ. ಹೀಗಿರುವಾಗ ಈ ಸಮೀಕ್ಷೆಯಲ್ಲಿ ಅನಧಿಕೃತವಾಗಿದ್ದ ಕುರುಬ ಕ್ರೈಸ್ತ, ಒಕ್ಕಲಿಗ ಕ್ರೈಸ್ತ, ಲಿಂಗಾಯತ ಕ್ರೈಸ್ತ ಇತ್ಯಾದಿ ಪ್ರಬಲ ಜಾತಿಗಳನ್ನು ಪಟ್ಟಿಯಿಂದ ತೆಗೆದ ಸರ್ಕಾರ ಆದಿ ದ್ರಾವಿಡ ಕ್ರೈಸ್ತ , ಆದಿ ಕರ್ನಾಟಕ ಕ್ರೈಸ್ತ, ಆದಿ ಆಂಧ್ರ ಕ್ರೈಸ್ತ, ಮಾದಿಗ ಕ್ರೈಸ್ತ, ಹೊಲೆಯ ಕ್ರೈಸ್ತ, ಪರೆಯ ಕ್ರೈಸ್ತ , ಬಂಜಾರ ಕ್ರೈಸ್ತ , ವಡ್ಡ ಕ್ರೈಸ್ತ ಜಾತಿಗಳನ್ನು ಸೇರಿಸಿಕೊಂಡು ಸಮೀಕ್ಷೆ ನೆಡಸಿದರೆ ಫಲಿತಾಂಶ ಏನಾದೀತು? ಸರ್ಕಾರದ ಉದ್ದೇಶ ಏನು ? ಎಸ್ಸಿ ಪಟ್ಟಿಯಲ್ಲಿ ಕ್ರೈಸ್ತ ಜಾತಿಗಳು ನುಸುಳಿವೆ ಎಂದರೆ ಈ ಬೇಜವಾಬ್ದಾರಿಗೆ ಯಾರು ಹೊಣೆ? ಯಾರದು ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಸಮೀಕ್ಷೆಗೆ ಸಿದ್ಧಪಡಿಸಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಸ್ಸಿ ಕ್ರೈಸ್ತ ಜಾತಿಗಳನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಎಲ್ಲ ಜಿಲ್ಲೆಗಳಲ್ಲಿ ದಲಿತರು ಬೀದಿಗಿಳಿಯಬೇಕಾಗುತ್ತದೆ. ಆಯೋಗ ಈ ಕೂಡಲೇ ಸ್ಪಷ್ಟನೆ ಕೊಡಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್ ಜಿ ಎಚ್ ಆಗ್ರಹಿಸಿದ್ದಾರೆ.

